ಹನೂರು: ಮಲೆ ಮಾದಪ್ಪನ ಹುಂಡಿಗೆ ಹರಿದುಬಂದ ₹2 ಕೋಟಿ ಹಣ-ಎಷ್ಟು ದಿನಗಳಲ್ಲಿ ಗೊತ್ತಾ?
ಚಾಮರಾಜನಗರ, ಜುಲೈ, 31: ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ (ಜುಲೈ 30) ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ ಕೇವಲ 32 ದಿನಗಳ ಅವಧಿಯಲ್ಲಿ 2.28 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಗೆ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ರಘುರವರ ಸಮ್ಮುಖದಲ್ಲಿ ದೇವರ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಇದು ಸಂಜೆ 6ಗಂಟೆಯವರೆಗೂ ನಡೆಯಿತು.

ಇನ್ನು 32 ದಿನಗಳ ಅವಧಿಯಲ್ಲಿ 2,28,03,803 ರೂಪಾಯಿ ಹುಂಡಿಯಲ್ಲಿ ಸಂಗ್ರಹವಾದರೆ, 59 ಗ್ರಾಂ ಚಿನ್ನ, 1.500 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಅಷ್ಟೇ ಅಲ್ಲದೆ,ವಿದೇಶದ 6 ನೋಟು ಕೂಡ ಪತ್ತೆಯಾಗಿವೆ. ಅಲ್ಲದೆ, ಚಲಾವಣೆಯಿಲ್ಲದ ಎರಡು ಸಾವಿರ ಮುಖಬೆಲೆಯ 21 ನೋಟುಗಳನ್ನು ಭಕ್ತರು ದೇವರ ಹುಂಡಿಗೆ ಹಾಕಿದ್ದಾರೆ ಎಂದು ಕಾರ್ಯದರ್ಶಿ ರಘು ತಿಳಿಸಿದ್ದಾರೆ.
1.96 ಕೋಟಿ ರೂಪಾಯಿ ಹಣ ಸಂಗ್ರಹ: ಸವದತ್ತಿ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೇವಲ 50 ದಿನಗಳ ಅಂತರದಲ್ಲಿ ಬರೋಬ್ಬರಿ 1.96 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಏಪ್ರಿಲ್ 1ರಿಂದ ಮೇ 20ರ ಅವಧಿಯಲ್ಲಿ ಭಕ್ತರು ಹಾಕಿದ್ದ ಕಾಣಿಕೆ ಎಣಿಕೆ ಕಾರ್ಯ ಬುಧುವಾರ ರಾತ್ರಿ ಮುಕ್ತಾಯವಾಗಿದ್ದು, ಕೇವಲ 50 ದಿನಗಳ ಅಂತರದಲ್ಲಿ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನದ ಹುಂಡಿಯಲ್ಲಿ 1.96 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಅದರಲ್ಲಿ ₹1.71 ಕೋಟಿ ನಗದು, ₹20.44 ಲಕ್ಷ ಮೌಲ್ಯದ ಚಿನ್ನಾಭರಣ, ₹4.44 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಸರ್ಕಾರ ಶಕ್ತಿಯೋಜನೆಯಡಿ ಮಹಿಳೆಯರಿಗೆ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಾಗಿನಿಂದ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ಯಲ್ಲಮ್ಮನ ಗುಡ್ಡಕ್ಕೆ ಅಪಾರ ಸಂಖ್ಯೆಯಲ್ಲಿ ಮಹಿಳಾ ಭಕ್ತಾದಿಗಳು ಬಂದಿದ್ದರಿಂದ ಹುಂಡಿಯಲ್ಲಿ ಇಷ್ಟು ಹಣ ಸಂಹ್ರವಾಗಲು ಕಾರಣ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ್ ಮಾಹಿತಿ ನೀಡಿದ್ದಾರೆ.












Click it and Unblock the Notifications