ದಿಢೀರ್ ಎರಡು ದಿನದ ಮುಷ್ಕರಕ್ಕೆ ಕರೆನೀಡಿದ ರಾಷ್ಟ್ರೀಕೃತ ಬ್ಯಾಂಕುಗಳು
ಮುಂಬೈ, ಮೇ 23: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಭಾರತೀಯ ಸ್ಟೇಟ್ ಬ್ಯಾಂಕ್, ಅದರ ಸಹವರ್ತಿ ಬ್ಯಾಂಕ್ ಮತ್ತು ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳ ನೌಕರರ ಸಂಘ ಮೇ 30, 31ರಂದು ಎರಡು ದಿನದ ಮುಷ್ಕರಕ್ಕೆ ಕರೆನೀಡಿವೆ.
ಇಂಡಿಯನ್ ಬ್ಯಾಂಕ್ಸ್ ಅಶೋಷಿಯೇಶನ್ ಮೂಲಕ ಯುಬಿಎಫ್ಎ (ಯುನೈಟೆಡ್ ಫೋರಂ ಆಫ್ ಬ್ಯಾಂಕ್ಸ್
ಯೂನಿಯನ್) ಮುಷ್ಕರಕ್ಕೆ ಸಂಬಂಧಿಸಿದಂತೆ ಇತರ ನೌಕರರ ಸಂಘಟನೆಗಳಿಗೆ ತಿಳಿಸಿದ್ದು, ಎರಡು ದಿನ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಯಿದೆ.
ಕೇಂದ್ರ ಹಣಕಾಸು ಮತ್ತು ಕಾರ್ಮಿಕ ಸಚಿವಾಲಯಕ್ಕೆ ತಮ್ಮ ಬೇಡಿಕೆಗಳ ಮೆಮೊರಾಂಡಮ್ ಅನ್ನು ಬ್ಯಾಂಕ್ ಒಕ್ಕೂಟ ಸಲ್ಲಿಸಿದ್ದು, ಬೇಡಿಕೆಗೆ ಸ್ಪಂದಿಸಿದರೆ ಮುಷ್ಕರ ಹಿಂದಕ್ಕೆ ಪಡೆಯುವುದಾಗಿ ತಿಳಿಸಿದೆ. ಮೇ 30ರಂದು ಬೆಳಗ್ಗೆ ಆರು ಗಂಟೆಯಿಂದಲೇ ಮುಷ್ಕರ ಆರಂಭಿಸುವುದಾಗಿ ಸಂಘಟನೆಗಳು ತಿಳಿಸಿವೆ.

ಬ್ಯಾಂಕ್ ಆಫ್ ಬರೋಡ, ಪಂಜಾಬ್ & ಸಿಂಧ್ ಬ್ಯಾಂಕ್, ಕೆನರಾ ಬ್ಯಾಂಕ್ ಸೇರಿದಂತೆ ಇತರ ಬ್ಯಾಂಕುಗಳ ಸೇವೆಯೂ ವ್ಯತ್ಯಯವಾಗುವ ಸಾಧ್ಯತೆಯಿದೆ. ಯುಬಿಎಫ್ಎ, ಎಐಬಿಬಿಎ, ಎಐಬಿಓಸಿ, ಎನ್ಸಿಬಿಇ ಸೇರಿದಂತೆ ಹಲವು ಸಂಘಟನೆಗಳು ಮುಷ್ಕರಕ್ಕೆ ಕರೆನೀಡಿವೆ.
ವಿವಿಧ ಸಂಘಟನೆಗಳು ಕರೆನೀಡಿರುವ ಮುಷ್ಕರದಿಂದ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು ಖುದ್ದು ಸ್ಟೇಟ್ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮೇ 16ರಂದೇ ಕೇಂದ್ರ ಸರಕಾರಕ್ಕೆ ನಮ್ಮ ಬೇಡಿಕೆಯ ಸಂಬಂಧ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರತಿಕ್ರಿಯೆ ಬರದ ಹಿನ್ನಲೆಯಲ್ಲಿ ಮುಷ್ಕರಕ್ಕೆ ಹೋಗುವ ನಿರ್ಧಾರಕ್ಕೆ ಸಂಘಟನೆಗಳು ಬಂದಿವೆ.
ಗ್ರಾಹಕರಿಗೆ ಹೆಚ್ಚಿನ ತೊಂದರೆಯಾಗದಂತೆ ಕಾರ್ಯನಿರ್ವಹಿಸುವುದಾಗಿ ಬ್ಯಾಂಕುಗಳು ಹೇಳಿದ್ದರೂ, ನೌಕರರ ಸಂಘ ಮುಷ್ಕರ ನಡೆಸಿದ್ದೇ ಆದಲ್ಲಿ, ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವುದು ನಿಶ್ಚಿತ.












Click it and Unblock the Notifications