ಖಂಡ್ರೆ, ಶಿವಶಂಕರಪ್ಪ ವೀರಶೈವ ಮಹಾಸಭಾವನ್ನು ಗುತ್ತಿಗೆ ಹಿಡಿದಿದ್ದಾರಾ?; ಯತ್ನಾಳ್ ವಾಗ್ದಾಳಿ
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಪ್ರಚಾರದ ಭರಾಟೆ ರಾಜ್ಯದಲ್ಲಿ ಬಿರುಸು ಪಡೆದಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಪಕ್ಷಗಳ ಸೇರಿದಂತೆ ಸ್ವತಂತ್ರ ಅಭ್ಯರ್ಥಿಗಳು ಮತದಾರರ ಮನ ಗೆಲ್ಲಲು ಸರ್ವ ಪ್ರಯತ್ನ ಪಡುತ್ತಿದ್ದಾರೆ.
ಮೇ 10ರಂದು ಮತದಾನದಲ್ಲಿ ಮುಂದಿನ ಐದು ವರ್ಷಗಳ ಕಾಲ ರಾಜ್ಯದಲ್ಲಿ ಯಾರು ಅಧಿಕಾರ ನಡೆಸಲಿದ್ದಾರೆ ಎಂಬುದರ ಭವಿಷ್ಯ ಬರೆಯಲಿದ್ದಾರೆ. ರಾಜ್ಯ ನಾಯಕರು ಸೇರಿದಂತೆ ರಾಷ್ಟ್ರೀಯ ನಾಯಕರು ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ್ದು, ಯಾರು ಮತದಾರರ ಮನಸ್ಸು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದೇ ವೇಳೆ ಬೀದರ್ನಲ್ಲಿ ಅಬ್ಬರದ ಪ್ರಚಾರ ನಡೆಸಿದ ಬಿಜೆಪಿ ಸ್ಟಾರ್ ಪ್ರಚಾರಕ ಹಾಗೂ ವಿಜಯಪುರ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಎಂದರೆ ಅದು ಮುಸ್ಲಿಂ ಪಕ್ಷವಾಗಿದ್ದು, ಕಾಂಗ್ರೆಸ್ನಲ್ಲಿ ಅರ್ಧಂಬರ್ಧ ಹಿಂದೂಗಳಿದ್ದಾರೆ ಎಂಬ ಹೇಳಿಕೆಯನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡಿದ್ದಾರೆ.
ಬೀದರ್ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ್, "ಕಾಂಗ್ರೆಸ್ನವರು ಹಿಂದೂಗಳ ಬಗ್ಗೆ ಯಾವ ರೀತಿ ನಡೆದುಕೊಳ್ಳತ್ತಾರೆ ಎಂಬುದಕ್ಕೆ ಬಜರಂಗದಳ ನಿಷೇಧ ಉದಾಹರಣೆಯಾಗಿದೆ. ಹಿಂದೂಗಳನ್ನು ಅಪಮಾನಿಸುವುದು ಕಾಂಗ್ರೆಸ್ನ ಸಂಸ್ಕೃತಿಯಾಗಿದೆ. ಕಾಂಗ್ರೆಸ್ ಕೇವಲ ಮುಸ್ಲಿಂ ಮತಗಳ ಓಲೈಕೆ ಮಾಡುತ್ತಿದೆ. ಮುಸ್ಲಿಮರು ಹಿಂದೂ ಅಭ್ಯರ್ಥಿಗಳಿಗೆ ಮತ ಹಾಕುವುದಿಲ್ಲ. ಹೀಗಾಗಿ ಹಿಂದೂಗಳು ಮುಸ್ಲಿಮರಿಗೆ ಮತ ಹಾಕಬಾರದು," ಎಂದು ಕರೆ ನೀಡಿದರು.

ಇದೆ ವೇಳೆ ಕಾಂಗ್ರೆಸ್ ನಾಯಕರಾದ ಈಶ್ವರ್ ಖಂಡ್ರೆ ಹಾಗೂ ಶಾಮನೂರು ಶಿವಶಂಕರಪ್ಪ ವಿರುದ್ಧ ಕೆಂಡಕಾರಿದ ಬಸನಗೌಡ ಪಾಟೀಲ ಯತ್ನಾಳ್, "ವೀರಶೈವ ಮಹಾಸಭಾವನ್ನು ಇವರು ಗುತ್ತಿಗೆ ಪಡೆದಿದ್ದಾರೆ. ಇವರು ಲಿಂಗಾಯತರಿಗೆ ಏನೂ ಮಾಡಿಲ್ಲ, ಉದ್ಧಾರವನ್ನೂ ಮಾಡಿಲ್ಲ," ಎಂದರು.
"ಈಶ್ವರ್ ಖಂಡ್ರೆ ಲಿಂಗಾಯತ ಕೋಟಾದಲ್ಲಿ ಲೀಡರ್ ಆಗಿದ್ದಾನೆ. ನಾವು ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಹೇಳಿ ಮಾಡುವುದಿಲ್ಲ. ನಮ್ಮಲ್ಲಿ ಲಿಂಗಾಯತರೇ ಸಿಎಂ ಆಗುತ್ತಾರೆ. ಹೈಕಮಾಂಡ್ ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಮಾಡಬಹುದು ಅಥವಾ ಬೇರೆಯವರನ್ನೂ ಮಾಡಬಹುದು," ಎಂದು ಲಿಂಗಾಯತ ಸಿಎಂ ವಿಚಾರವಾಗಿ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications