ನಿರ್ಗತಿಕ ಶವಗಳ ಅಂತ್ಯಸಂಸ್ಕಾರ ನಡೆಸಲು ನರ್ಸ್ ವೃತ್ತಿ ಬಿಟ್ಟುಬಂದ ಮಹಿಳೆ
ಭುವನೇಶ್ವರ, ಮೇ 24: ಸಾಂಕ್ರಾಮಿಕ ರೋಗವೊಂದು ಇಡೀ ಮನುಕುಲವನ್ನೇ ಬಾಧಿಸುತ್ತಿರುವ ಈ ಸಮಯದಲ್ಲಿ ಮಾನವೀಯತೆಯೊಂದೇ ನೋವುಂಡವರನ್ನು ಸಲಹುವ ಅಸ್ತ್ರವಾಗಿದೆ. ಕೊರೊನಾ ಪಿಡುಗು ಲಕ್ಷಾಂತರ ಮಂದಿಯನ್ನು ಕಸಿದುಕೊಳ್ಳುತ್ತಿರುವ ಈ ಸಂದರ್ಭ ಹಲವು ಮಂದಿ ಜನರಿಗೆ ನೆರವಾಗಲು ಮುಂದೆ ಬರುತ್ತಿದ್ದಾರೆ.
ಮಹಿಳೆಯೊಬ್ಬರು ತಮ್ಮ ನರ್ಸ್ ವೃತ್ತಿ ತೊರೆದು, ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ನಡೆಸುತ್ತಿರುವ ತನ್ನ ಪತಿಗೆ ನೆರವಾಗುತ್ತಿರುವ ಸಂಗತಿ ಒಡಿಶಾದಲ್ಲಿ ಬೆಳಕಿಗೆ ಬಂದಿದೆ.
ಮಾನವೀಯತೆ ಮರೆತ ಆಲನಹಳ್ಳಿ ಜನರು: ಅಂತ್ಯಸಂಸ್ಕಾರ ನೆರವೇರಿಸಿದ ಪಿಎಫ್ಐ ಯುವಕರು
ಮಧುಸ್ಮಿತಾ ಪ್ರುಸ್ತಿ ಎಂಬುವರು ಕೋಲ್ಕತ್ತಾದ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇವರ ಪತಿ ಹನ್ನೊಂದು ವರ್ಷಗಳಿಂದಲೂ ಒಡಿಶಾದ ಭುವನೇಶ್ವರದಲ್ಲಿ ನಿರ್ಗತಿಕರ ಶವಗಳ ಅಂತ್ಯಸಂಸ್ಕಾರ ಮಾಡುತ್ತಾ ಸಮಾಜ ಸೇವೆ ಮಾಡುತ್ತಿದ್ದರು. ಕಳೆದ ವರ್ಷ ಕೊರೊನಾದಿಂದ ಸಾವನ್ನಪ್ಪಿದ್ದವರ ಅಂತ್ಯಸಂಸ್ಕಾರ ನಡೆಸುವುದನ್ನೂ ಆರಂಭಿಸಿದರು. ಆದರೆ ಅವರ ಕಾಲಿಗೆ ಪೆಟ್ಟು ಬಿದ್ದು ಈ ಸೇವೆಗೆ ಬ್ರೇಕ್ ಹಾಕಬೇಕಾಯಿತು.
ಇಂಥ ಸಮಯದಲ್ಲಿ ಈ ಸೇವೆ ನಿಲ್ಲಿಸಬಾರದು ಎಂದು ತೀರ್ಮಾನಿಸಿದ ಮಧುಸ್ಮಿತಾ ಅವರು ತಮ್ಮ ನರ್ಸ್ ವೃತ್ತಿಯನ್ನೇ ತೊರೆಯಲು ಮುಂದಾದರು. "ಕೋಲ್ಕತ್ತಾದ ಫೋರ್ಟಿಸ್ ಆಸ್ಪತ್ರೆಯಲ್ಲಿ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ನಾನು ನರ್ಸ್ ಆಗಿ ಕೆಲಸ ಮಾಡುತ್ತಿದ್ದೆ. ಒಂಬತ್ತು ವರ್ಷ ಆಸ್ಪತ್ರೆಯಲ್ಲಿ ಸೇವೆ ಮಾಡಿದ್ದೇನೆ. ಕಳೆದ ವರ್ಷ ನನ್ನ ಪತಿ ಕಾಲಿಗೆ ಏಟಾಗಿದ್ದು, ಅವರಿಗೆ ಕೊರೊನಾ ಸೋಂಕಿತರ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ನಾನು ಕೆಲಸ ತೊರೆದು ಒಡಿಶಾಗೆ ವಾಪಸ್ಸಾದೆ" ಎಂದು ಹೇಳಿಕೊಳ್ಳುತ್ತಾರೆ ಮಧುಸ್ಮಿತಾ.
ಕಳೆದ ವರ್ಷ ಸುಮಾರು 300 ಕೊರೊನಾ ರೋಗಿಗಳ ಅಂತ್ಯಸಂಸ್ಕಾರ ನಡೆಸಿದ್ದಾರೆ. ಎರಡೂವರೆ ವರ್ಷಗಳಲ್ಲಿ ಭುವನೇಶ್ವರದಲ್ಲಿ ಸುಮಾರು 500 ಅನಾಥ ಶವಗಳ ಅಂತ್ಯಸಂಸ್ಕಾರ ನಡೆಸಿದ್ದಾರೆ.
"ಮಹಿಳೆಯಾಗಿರುವುದರಿಂದ ಅಂತ್ಯಸಂಸ್ಕಾರ ನಡೆಸುತ್ತಿರುವುದಕ್ಕೆ ವಿರೋಧವೂ ವ್ಯಕ್ತವಾಯಿತು. ನನ್ನ ಪತಿಯ ಪ್ರದೀಪ್ ಸೇವಾ ಟ್ರಸ್ಟ್ ಅಡಿಯಲ್ಲಿ ನನ್ನ ಕೆಲಸ ಮುಂದುವರೆಸಿದೆ. ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ಮಾಡುವ ಸಂಬಂಧ ಭುವನೇಶ್ವರ ನಗರ ಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ" ಎಂದು ಹೇಳುತ್ತಾರೆ ಅವರು.
"11 ವರ್ಷಗಳಿಂದ ನಿರ್ಗತಿಕ ಶವಗಳ ಅಂತ್ಯಸಂಸ್ಕಾರ ಮಾಡುತ್ತಿದ್ದೇನೆ. ಕಳೆದ ವರ್ಷದಿಂದ ನನ್ನ ಹೆಂಡತಿ ಕೂಡ ನನ್ನ ಕೆಲಸಕ್ಕೆ ಸಾಥ್ ನೀಡಿದ್ದಾರೆ. ತರಕಾರಿ ಮಾರುವ ಕೆಲಸವನ್ನು ಮಾಡುತ್ತಿದ್ದೇವೆ" ಎಂದು ಹೇಳಿಕೊಳ್ಳುತ್ತಾರೆ ಪ್ರದೀಪ್.