Breaking: ರಾಜ್ಯಸಭೆ ಚುನಾವಣೆ, ಜಿಜೆಡಿ ಅಭ್ಯರ್ಥಿಗಳು ಘೋಷಣೆ
ಭುವನೇಶ್ವರ ಮೇ 29: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಬಿಜು ಜನತಾ ದಳ(ಜಿಜೆಡಿ) ತನ್ನ ಅಭ್ಯರ್ಥಿಗಳ ಹೆಸರನ್ನು ಭಾನುವಾರ ಪ್ರಕಟಿಸಿದೆ.
ಒಡಿಶಾದ ಮೂರು ಸದ್ಯಸರ ಅಧಿಕಾರಾವಧಿ ಪುರ್ಣಗೊಂಡಿದ್ದು, ಮತ್ತೊಬ್ಬ ಸದಸ್ಯರು ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯ ನಾಲ್ಕು ಸ್ಥಾನಗಳು ತೆರವಾಗಿತ್ತು.
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಬಿಜೆಡಿ ಹೊಸ ಮುಖಗಳಿಗೆ ಆದ್ಯತೆ ನೀಡಿದೆ. ಪಕ್ಷದ ವಕ್ತಾರರಾದ ಸುಲತಾ ಡಿಯೊ, ರಾಜ್ಯ ಸರಕಾರದ ಮಾಧ್ಯಮ ಸಲಹೆಗಾರ ಮಾನಸ್ ಮಂಗರಾಜ್ ಮತ್ತು ಪಶ್ಚಿಮ ಒಡಿಶಾದ ಬುಡಕಟ್ಟು ಜನಾಂಗಕ್ಕೆ ಸೇರಿದ ನಿರಂಜನ್ ಬಿಶಿ ಅವರನ್ನು ಬಿಜೆಡಿ ನಾಮನಿರ್ದೇಶನ ಮಾಡಿದೆ. ಅಲ್ಲದೇ ಹಿರಿಯ ನಾಯಕ ಸಸ್ಮಿತ್ ಪಾತ್ರಾ ಅವರನ್ನು ಮೇಲ್ಮನೆಗೆ ಎರಡನೇ ಬಾರಿಗೆ ಪಕ್ಷವು ನಾಮನಿರ್ದೇಶನ ಮಾಡಿದೆ.

ಗೆಲುವು ಬಹುತೇಕ ಖಚಿತ; ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಡಿ ಅಭ್ಯರ್ಥಿಗಳ ಗೆಲುವು ಬಹುತೇಕ ಖಚಿತವಾಗಿದೆ. ಏಕೆಂದರೆ ಎರಡು ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಒಡಿಶಾ ವಿಧಾನಸಭೆಯಲ್ಲಿ ಅಗತ್ಯ ಬಲವನ್ನು ಹೊಂದಿಲ್ಲ. ಹೀಗಾಗಿ ಈ ಪಕ್ಷಗಳಿಂದ ನಾಮಪತ್ರ ಸಲ್ಲಿಸುವ ಸಾಧ್ಯತೆಯು ಕಡಿಮೆ.

ಸಸ್ಮಿತ್ ಪಾತ್ರಾ, ಪ್ರಸನ್ನ ಆಚಾರ್ಯ ಮತ್ತು ಎನ್. ಭಾಸ್ಕರ್ ರಾವ್ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯಸಭೆ ಸ್ಥಾನಗಳು ತೆರವಾಯಿತು. ಇನ್ನೊಂದೆಡೆ, ಬಿಜೆಡಿ ನಾಯಕ ಸುಭಾಷ್ ಚಂದ್ರ ಸಿಂಗ್ ಅವರು ಕಟಕ್ ಮುನ್ಸಿಪಲ್ ಕಾರ್ಪೊರೇಶನ್ ನ ಮೇಯರ್ ಆಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತಮ್ಮ ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ಬಿಜೆಡಿಯ ಅಭ್ಯರ್ಥಿಗಳು ಮಂಗಳವಾರ ತಮ್ಮ ನಾಮತ್ರಗಳನ್ನು ಸಲ್ಲಿಸುವ ಸಾಧ್ಯತೆಯಿದೆ. ರಾಜ್ಯಸಭೆ ಚುನಾವಣೆಗೆ ಜೂನ್ 10ರಂದು ಮತದಾನ ನಡೆಯಲಿದ್ದು, ಅದೇ ದಿನ ಸಂಜೆ ಫಲಿತಾಂಶ ಪ್ರಕಟವಾಗಲಿದೆ. ಏತನ್ಮಧ್ಯೆ, ಜೂನ್ 13ರಂದು ಒಡಿಶಾ ವಿಧಾನಸಭೆಯ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.












Click it and Unblock the Notifications