'ತಾಲಿಬಾನ್ ಆಡಳಿತ ಅಫ್ಘಾನ್ನಲ್ಲಿ ಪೆಟ್ರೋಲ್ ದರ ಅಗ್ಗ ಅಲ್ಲಿಗೆ ಹೋಗಿ' ಎಂದ ಬಿಜೆಪಿ ನಾಯಕ!
ಭೋಪಾಲ್, ಆಗಸ್ಟ್ 20: "ತಾಲಿಬಾನ್ ಆಡಳಿತ ನಡೆಸುತ್ತಿರುವ ಅಫ್ಘಾನಿಸ್ತಾನದಲ್ಲಿ ಇಂಧನ ಬೆಲೆ ಕಡಿಮೆ ಇದೆ. ಹಾಗಾಗಿ ಅಲ್ಲಿಗೆ ಹೋಗಿ," ಎಂದು ಮಧ್ಯಪ್ರದೇಶದ ಬಿಜೆಪಿ ನಾಯಕರೋರ್ವರು ಹೇಳಿದ್ದಾರೆ. ಭಾರತದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಕೆಲವು ದಿನದಿಂದ ಏರಿಕೆಯಾಗುತ್ತಿಲ್ಲವಾದರೂ ಇಳಿಕೆಯಂತೂ ಆಗಿಲ್ಲ. ಹಲವಾರು ಪ್ರದೇಶಗಳಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ನೂರಕ್ಕೂ ಅಧಿಕವಾಗಿದೆ. ಈ ಹಿನ್ನೆಲೆ ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರಲ್ಲಿ ಮಾಧ್ಯಮಗಳು ಇಂಧನ ಬೆಲೆಗೆ ಸಂಬಂಧಿಸಿ ಪ್ರಶ್ನೆಯನ್ನು ಕೇಳಿದಾಗ ಈ ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದಲ್ಲಿ ಇಂಧನ ಬೆಲೆ ಕಡಿಮೆ ಇದೆ ಅಲ್ಲಿಗೆ ಹೋಗಿ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಖತ್ನಿ ಜಿಲ್ಲೆಯ ಬಿಜೆಪಿ ಘಟಕಾಧ್ಯಕ್ಷ ರಾಮ್ ರಥನ್ ಪಾಯಲ್ ಈ ಹೇಳಿಕೆಯನ್ನು ನೀಡಿದವರು. ಇನ್ನು ಮುಂದುವರಿಸಿ ಬಿಜೆಪಿ ನಾಯಕ ರಾಮ್ ರಥನ್ ಪಾಯಲ್, "ಕೊರೊನಾ ವೈರಸ್ ಸಾಂಕ್ರಾಮಿಕ ಸೋಂಕಿನ ಮೂರನೇ ಅಲೆಯು ದೇಶಕ್ಕೆ ಅಪ್ಪಳಿಸುವ ಆತಂಕದ ನಡುವೆ ಈ ಪೆಟ್ರೋಲ್ ಬೆಲೆಯ ಬಗ್ಗೆ ಪ್ರಶ್ನೆ ಕೇಳಲಾಗಿದೆ," ಎಂದು ಹೇಳಿಕೊಂಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕ ರಾಮ್ ರಥನ್ ಪಾಯಲ್ ಸುತ್ತಲ್ಲೂ ಬಿಜೆಪಿ ಪಕ್ಷದ ಕಾರ್ಯಕರ್ತರು ಸೇರಿದ್ದರು. ಯಾರೂ ಕೂಡಾ ಮಾಸ್ಕ್ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡಿರಲಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಸ್ಥಳೀಯ ವರದಿಗಾರರೊಬ್ಬರು ಬಿಜೆಪಿ ನಾಯಕ ರಾಮ್ ರಥನ್ ಪಾಯಲ್ ಬಳಿ ಪೆಟ್ರೋಲ್ ಬೆಲೆಯ ಬಗ್ಗೆ ಪ್ರಶ್ನಿಸಿದಾಗ ಇದರಿಂದ ಆಕ್ರೋಶಕ್ಕೆ ಒಳಗಾದ ರಾಮ್ ರಥನ್, "ತಾಲಿಬಾನ್ನಿಂದ ಅದನ್ನು ಪಡೆದುಕೊಳ್ಳಿ. ಅಫ್ಘಾನಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 50 ರೂಪಾಯಿ. ಆದರೆ ಅಲ್ಲಿ ಈ ಪೆಟ್ರೋಲ್ ಅನ್ನು ಯಾರೂ ಕೂಡಾ ಬಳಸುವವರು ಇಲ್ಲ. ಅಲ್ಲಿಗೆ ಹೋಗಿ ನಿಮ್ಮ ವಾಹನಕ್ಕೆ ಪೆಟ್ರೋಲ್ ತುಂಬಿಸಿಕೊಳ್ಳಿ. ಕನಿಷ್ಠ ಇಲ್ಲಿ ಸುರಕ್ಷತೆಯಾದರೂ ಇದೆ," ಎಂದಿದ್ದಾರೆ.
ಇನ್ನು ಹಣದುಬ್ಬರದ ಬಗ್ಗೆ ಮಾಧ್ಯಮಗಳ ಪ್ರಶ್ನಗೆ ಪ್ರತಿಕ್ರಿಯಿಸಿದ ರಾಮ್ ರಥನ್ ಪಾಯಲ್, "ಕೊರೊನಾ ವೈರಸ್ ಸಾಂಕ್ರಾಮಿಕ ಸೋಂಕಿನ ಮೂರನೇ ಅಲೆಯು ದೇಶವನ್ನು ಅಪ್ಪಳಿಸುವ ಆತಂಕದಲ್ಲಿ ನಾವೆಲ್ಲರೂ ಇದ್ದೇವೆ, ಆದರೆ ನೀವು ಪೆಟ್ರೋಲ್ ಬೆಲೆಯ ಬಗ್ಗೆ ಪ್ರಶ್ನೆ ಕೇಳುತ್ತಿದ್ದೀರಿ. ದೇಶವು ಯಾವ ಬಿಕ್ಕಟ್ಟಿನಲ್ಲಿ ಇದೆ ಎಂದು ನಿಮಗೆ ಕಾಣುವುದಿಲ್ಲವೇ?," ಎಂದು ಮಾಧ್ಯಮವನ್ನು ಪ್ರಶ್ನಿಸಿದ್ದಾರೆ.
ಭಾರತದ ಹಲವಾರು ಭಾಗಗಳಲ್ಲಿ ಪೆಟ್ರೋಲ್ ಬೆಲೆಯು ಲೀಟರ್ 100 ರೂಪಾಯಿಗೂ ಅಧಿಕವಾಗಿದೆ. ಹಾಗೆಯೇ ಡಿಸೇಲ್ ಬೆಲೆಯು ಸರಿಸುಮಾರು 90 ರೂಪಾಯಷ್ಟಿದೆ. ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಹಣದುಬ್ಬರ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಚರ್ಚೆಗೆ ಆಗ್ರಹಿಸಿದ್ದು ಆದರೆ ಅದಾಗಲೇ ಸಂಸತ್ತನ್ನು ಕೊನೆಗೊಳಿಸಲಾಗಿದೆ.
ಇನ್ನು ಈ ನಡುವೆ ಅಫ್ಘಾನಿಸ್ತಾನಕ್ಕೆ ಹೋಗುವಂತೆ ಸಲಹೆ ನೀಡಿರುವುದು ರಾಮ್ ರಥನ್ ಪಾಯಲ್ ಮಾತ್ರವಲ್ಲ. ಬಿಹಾರದಲ್ಲಿನ ಬಿಜೆಪಿ ನಾಯಕರು ಕೂಡಾ ಇದೇ ಸಲಹೆಯನ್ನು ನೀಡಿದ್ದಾರೆ. ಬಿಹಾರ ಬಿಜೆಪಿ ನಾಯಕ ಹರಿ ಭೂಷಣ್ ಠಾಕೂರ್, ಭಾರತದಲ್ಲಿ ಸುರಕ್ಷತೆ ಇಲ್ಲ ಎಂದು ಯಾರಿಗೂ ಭಾವಿಸುತ್ತದೆಯೋ ಅವರು ಯುದ್ಧ ನಡೆಯುತ್ತಿರುವ ರಾಷ್ಟ್ರಕ್ಕೆ ಹೋಗಬಹುದು ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಕೂಡಾ ಉಲ್ಲೇಖ ಮಾಡಿದ್ದಾರೆ.
ಬಿಸ್ಫಿ ಕ್ಷೇತ್ರದ ಶಾಸಕರಾದ ಬಿಹಾರ ಬಿಜೆಪಿ ನಾಯಕ ಹರಿ ಭೂಷಣ್ ಠಾಕೂರ್ ಎನ್ಡಿಟಿವಿಗೆ ಪ್ರತಿಕ್ರಿಯಿಸಿ, ಸುಮಾರು 20 ವರ್ಷಗಳ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ನಡೆಸಿ ರಾಷ್ಟ್ರವನ್ನು ತನ್ನ ವಶಕ್ಕೆ ಪಡೆದಿರುವುದರಿಂದ ಅದರ ನೆರೆಯ ದೇಶವಾದ ಭಾರತಕ್ಕೆ ಯಾವುದೇ ಪರಿಣಾಮ ಬೀರದು ಎಂದು ಹೇಳಿಕೊಂಡಿದ್ದಾರೆ ಎಂದು ವರದಿ ಹೇಳಿದೆ. "ತಾಲಿಬಾನ್ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಿರುವುದರಿಂದ ನೆರೆಯ ದೇಶವಾದ ಭಾರತಕ್ಕೆ ಯಾವುದೇ ಪರಿಣಾಮ ಬೀರದು. ಆದರೆ ಯಾರಿಗೆ ಇಲ್ಲಿ ಭಯವಾಗುತ್ತದೆಯೋ ಅವರು ಅಫ್ಘಾನಿಸ್ತಾನಕ್ಕೆ ಹೋಗಬಹುದು. ಅಲ್ಲಿ ಪೆಟ್ರೋಲ್, ಡಿಸೇಲ್ ಬಲೆ ಅಗ್ಗವಾಗಿದೆ. ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನಕ್ಕೆ ಹೋದ ನಂತರ ಭಾರತದ ಪ್ರಾಮುಖ್ಯತೆ ತಿಳಿಯುತ್ತದೆ," ಎಂದಿದ್ದಾರೆ.
(ಒನ್ ಇಂಡಿಯಾ)












Click it and Unblock the Notifications