ಮಧ್ಯ ಪ್ರದೇಶ ಅತಂತ್ರ? ಯಾರ ಕೈಗೂ ಸಿಗದ ಪ್ರಳಯಾಂತಕಿ ಮಾಯಾವತಿ
Recommended Video
ಭೋಪಾಲ್, ಡಿಸೆಂಬರ್ 11 : ಮಧ್ಯ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ತಕ್ಕಡಿಯಂತೆ ಕ್ಷಣಕ್ಷಣಕ್ಕೂ ಏರುಪೇರಾಗುತ್ತಿದ್ದು, ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ನಾಯಕರ ಹೃದಯದ ಬಡಿತವೂ ಏರುಪೇರಾಗುವಂತೆ ಮಾಡುತ್ತಿದೆ.
230 ಸ್ಥಾನಗಳಿರುವ ಮಧ್ಯ ಪ್ರದೇಶದಲ್ಲಿ ಸರಳ ಬಹುಮತಕ್ಕೆ ಬೇಕಿರುವುದು 116 ಸ್ಥಾನಗಳು. ಸದ್ಯದ ಟ್ರೆಂಡ್ ಪ್ರಕಾರ, ಕಾಂಗ್ರೆಸ್ ಮತ್ತು ಬಿಜೆಪಿ ಜಿದ್ದಾಜಿದ್ದಿ ಫೈಟ್ ನೀಡುತ್ತಿದ್ದು, ಎರಡೂ ಹೆಚ್ಚೂಕಡಿಮೆ ಸರಿಸಮಾನವಾಗಿ ಸಾಗುತ್ತಿವೆ. ಕಾಂಗ್ರೆಸ್ ಅಲ್ಪ ಮೇಲುಗೈ ಸಾಧಿಸಿದರೂ ಸ್ಪಷ್ಟ ಬಹುಮತ ಪಡೆಯುವುದು ಕಷ್ಟಕಷ್ಟಕಷ್ಟ.
ಪಂಚರಾಜ್ಯ ಚುನಾವಣೆ ಫಲಿತಾಂಶ LIVE: ರಾಜಸ್ಥಾನದಲ್ಲಿ ಬಿಜೆಪಿಗೆ ಮುಖಭಂಗ
ಹೀಗಾಗಿ, ಯಾವ ಪಕ್ಷದ ಜೊತೆಯೂ ಮೈತ್ರಿ ಮಾಡಿಕೊಳ್ಳದೆ, ಅದರಲ್ಲಿಯೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಭರ್ಜರಿ ಚಳ್ಳೆಹಣ್ಣು ತಿನ್ನಿಸಿದ್ದ ಬಹುಜನ ಸಮಾಜ ಪಕ್ಷದ ಅಧಿನಾಯಕಿ ಮಾಯಾವತಿ ಇದ್ದಕ್ಕಿದ್ದಂತೆ ಕಿಂಗ್ ಮೇಕರ್ ಸ್ಥಾನ ಆಕ್ರಮಿಸಿಕೊಂಡುಬಿಟ್ಟಿದ್ದಾರೆ.
ಬಿಜೆಪಿ ವಿರೋಧಿ ವಿಪಕ್ಷಗಳ ಸಭೆ: ಮಾಯಾವತಿ ಗೈರು, ಕೇಜ್ರಿವಾಲ್ ಹಾಜರು
ಕಳೆದ ಚುನಾವಣೆಯಲ್ಲಿ ಕೇವಲ 4 ಸ್ಥಾನ ಮಾತ್ರ ಗೆದ್ದಿದ್ದ ಬಿಎಸ್ಪಿ ಈ ಬಾರಿ 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಯ ಪರಿಸ್ಥಿತಿ ನೋಡಿದರೆ, ಕಾಂಗ್ರೆಸ್ ಪಕ್ಷ ಕೆಲವೇ ಸ್ಥಾನಗಳಿಂದ ಬಹುಮತದಿಂದ ವಂಚಿತವಾಗಲಿದೆ. ಇದೇ ಸ್ಥಿತಿ ಬಿಜೆಪಿಯದ್ದೂ ಆಗಲಿದೆ.
ಮಾಯಾವತಿ ಜೊತೆ ಮುರಿದಿಬಿದ್ದಿದ್ದ ಮೈತ್ರಿ
ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಹುಜನ ಸಮಾಜ ಪಕ್ಷದ ನಡುವೆ ಚುನಾವಣೆಗೂ ಮುನ್ನ ಮೈತ್ರಿಯ ಮಾತುಕತೆ ನಡೆಯುತ್ತಲೇ ಇತ್ತು. ಆದರೆ, ಬಿಎಸ್ಪಿ ನಾಯಕಿ ಮಾಯಾವತಿ ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದರಿಂದ ಮೈತ್ರಿ ಮುರಿದುಬಿದ್ದಿತ್ತು. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿನ ಹಲವಾರು ಸ್ಥಳೀಯ ನಾಯಕರಿಗೆ ಭರ್ಜರಿ ಚಳ್ಳೆಹಣ್ಣು ತಿನ್ನಿಸಿದ್ದ ಮಾಯಾವತಿ, ಕಡೆಗೆ ಯಾವುದೇ ಪಕ್ಷದೊಡನೆ ಮೈತ್ರಿಯಿಲ್ಲ, ನಾವು ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ ಎಂದು ಘಂಟಾಘೋಷಿಸಿದ್ದರು.
ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ವಿನಃ, ಕಾಂಗ್ರೆಸ್ ಬಳಿ ಭಿಕ್ಷೆ ಬೇಡಲ್ಲ: ಮಾಯಾವತಿ
ರಾಹುಲ್ ತಂತ್ರಗಾರಿಕೆಯ ಒಂದು ಭಾಗ
ಬಹುಜನ ಸಮಾಜ ಪಕ್ಷದೊಡನೆ ಮೈತ್ರಿ ಮಾಡಿಕೊಳ್ಳದಿರುವುದು ರಾಹುಲ್ ಗಾಂಧಿ ಅವರ ತಂತ್ರಗಾರಿಕೆಯ ಒಂದು ಭಾಗವೇ ಎಂದು ಅಂದು ವ್ಯಾಖ್ಯಾನಿಸಲಾಗಿತ್ತು. ಏಕೆಂದರೆ, ಮಾಯಾವತಿಯಂಥ ಪ್ರಳಯಾಂತಕಿ ನಾಯಕಿಯೊಡನೆ ಹೆಣಗುವುದು ಅಷ್ಟು ಸುಲಭದ ಮಾತಲ್ಲ. ಸೀಟು ಹಂಚಿಕೆ ಮಾಡಿಕೊಂಡಿದ್ದರೆ ಹಿನ್ನಡೆ ಆಗುವುದು ಕಾಂಗ್ರೆಸ್ಸಿಗೆ ಎಂದು ಅರಿತಿದ್ದ ರಾಹುಲ್ ಗಾಂಧಿ ಅವರು ಕೂಡ ಮಾಯಾವತಿ ಜೊತೆ ಸ್ನೇಹದ ಹಸ್ತ ಚಾಚಲು ಅಷ್ಟು ಮುಂದಾಗಲಿಲ್ಲ.
ಮಾಯಾವತಿ ಜೊತೆ ಮತ್ತದೇ ಮಿಸ್ಟೇಕ್ ಮಾಡುತ್ತಿರುವ ರಾಹುಲ್ ಗಾಂಧಿ
ಕಿಂಗ್ ಮೇಕರ್ ಆಗಲಿದ್ದಾರಾ ಮಾಯಾವತಿ
ಈಗ ಅತಂತ್ರ ಸ್ಥಿತಿ ನಿರ್ಮಾಣವಾದರೆ ಮಾಯಾವತಿ ಜೊತೆ ಕೈಚಾಚದೆ ಗತ್ಯಂತರವೇ ಇಲ್ಲದಂತಾಗಿದೆ. ಬಿಜೆಪಿ ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡಬೇಕೆಂದು ಹೊರಟಿದ್ದರೆ, ಕಾಂಗ್ರೆಸ್ ಶತಾಯಗತಾಯ ಬಿಜೆಪಿ ಸರಕಾರ ಸ್ಥಾಪನೆಯಾಗಲೇಬಾರದು ಎಂದು ಎಂಥ ರಾಜಕೀಯ ಪಕ್ಷದ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಿದೆ. ಇದಕ್ಕೆ ನಿದರ್ಶನ ಕರ್ನಾಟಕದಲ್ಲಿಯೇ ಸಿಗುತ್ತದೆ. ಕೇವಲ 35 ಸ್ಥಾನ ಗೆದ್ದಿದ್ದ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕುಳ್ಳರಿಸಿತು. ಇದೇ ತಂತ್ರಗಾರಿಕೆಯನ್ನು ಮಧ್ಯ ಪ್ರದೇಶದಲ್ಲಿಯೂ ಮಾಡಿದರೆ ಅಚ್ಚರಿಯಿಲ್ಲ.
ಆದರೆ, ಮಾಯಾವತಿ ಎಲ್ಲಿದ್ದಾರೆ?
ಆದರೆ, ಮಾಯಾವತಿ ಎಲ್ಲಿದ್ದಾರೆ? ಮಧ್ಯ ಪ್ರದೇಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವುದು ಹೆಚ್ಚೂಕಡಿಮೆ ಖಚಿತವಾಗಿರುವುದರಿಂದ ಮತ್ತು ಅತಿದೊಡ್ಡ ಪಕ್ಷಕ್ಕೆ ತಮ್ಮ ಸಾಂಗತ್ಯ ಬೇಕಾಗಿರುವುದರಿಂದ ಮಾಯಾವತಿ ಬೇಡಿಕೆಯಲ್ಲಿದ್ದಾರೆ. ಅಂತಿಮ ಫಲಿತಾಂಶ ಪ್ರಕಟವಾಗುವವರೆಗೆ ಯಾರ ಕೈಗೂ ಸಿಗಬಾರದೆಂದು ಅವರು ನಿರ್ಧರಿಸಿದಂತಿದೆ. ಸದ್ಯಕ್ಕೆ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬ ಮಾಹಿತಿಯಿದೆ.