ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರದಲ್ಲಿ ತಳಮಳ ಮೂಡಿಸಿದ ಮಾಯಾವತಿ
Recommended Video
ಭೋಪಾಲ್, ಏಪ್ರಿಲ್ 30: ಮಧ್ಯಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ ಹಾಗೂ ಪಕ್ಷೇತರರ ಸಹಾಯದಿಂದ ಸರ್ಕಾರ ರಚಿಸಿರುವ ಕಾಂಗ್ರೆಸ್ಗೆ ಸಂಕಟವೊಂದು ಶುರುವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಅನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಎಸ್ಪಿ ಜತೆಗೂಡಿ ಚುನಾವಣಾ ಅಖಾಡಕ್ಕೆ ಇಳಿದಿರುವ ಬಿಎಸ್ಪಿ ನಾಯಕಿ ಮಾಯಾವತಿ, ರಾಜ್ಯದಲ್ಲಿ ಕಾಂಗ್ರೆಸ್ಗೆ ನೀಡಿರುವ ಬೆಂಬಲವನ್ನು ಹಿಂದಕ್ಕೆ ಪಡೆದುಕೊಳ್ಳುವ ಬೆದರಿಕೆ ಹಾಕಿದ್ದಾರೆ.
ಇದಕ್ಕೆ ಕಾರಣವಾಗಿದ್ದು, ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಲೋಕಸಭೆಯ ಅಭ್ಯರ್ಥಿ ತಮ್ಮ ಉಮೇದುವಾರಿಕೆಯಿಂದ ಹಿಂದೆ ಸರಿದು ಕಾಂಗ್ರೆಸ್ಗೆ ಬೆಂಬಲ ನೀಡಿರುವುದು.
ಗುನಾ ಲೋಕಸಭೆ ಕ್ಷೇತ್ರದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ಬಿಎಸ್ಪಿಯ ಲೋಕೇಂದ್ರ ಸಿಂಗ್ ರಜಪೂತ್ ಸೋಮವಾರ ತಮ್ಮ ಉಮೇದುವಾರಿಕೆಯಿಂದ ಹಿಂಪಡೆದು ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿರಾದಿತ್ಯ ಸಿಂದಿಯಾ ಅವರಿಗೆ ಬೆಂಬಲ ಸೂಚಿಸಿದ್ದರು.
ಈ ಘಟನೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಇರಿಸುಮುರಿಸು ಉಂಟುಮಾಡಿದೆ. ಹೀಗಾಗಿ ಅವರು ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮರುಪರಿಶೀಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಕಾಂಗ್ರೆಸ್, ಬಿಜೆಪಿಗಿಂತ ಕಡಿಮೆಯೇನಲ್ಲ ಎಂದು ಲೋಕೇಂದ್ರ ಸಿಂಗ್ ಕಾಂಗ್ರೆಸ್ ಸೇರ್ಪಡೆಯಿಂದ ಆಕ್ರೋಶಗೊಂಡು ಮಾಯಾವತಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ಗೆ ಬೆಂಬಲ ನೀಡಿದ ಅಭ್ಯರ್ಥಿ
ಗುನಾ ಲೋಕಸಭೆ ಕ್ಷೇತ್ರದಿಂದ ಸಮಾಜವಾದಿ ಹಾಗೂ ಬಹುಜನ ಸಮಾಜ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿದ್ದ ಲೋಕೇಂದ್ರ ಸಿಂಗ್ ರಜಪೂತ್ ಕಾಂಗ್ರೆಸ್ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದರು. ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಹೂವಿನ ಹಾರ ಹಾಕಿದ್ದ ಫೋಟೊವನ್ನು ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿರಾದಿತ್ಯ ಸಿಂದಿಯಾ ಟ್ವೀಟ್ ಮಾಡಿದ್ದರು.
'ಯುವ ಅಭ್ಯರ್ಥಿ ಲೋಕೇಂದ್ರ ಸಿಂಗ್, ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ತಮ್ಮ ಬೆಂಬಲವನ್ನು ನೀಡಿದ್ದಾರೆ. ಅವರನ್ನು ನಮ್ಮ ಕಾಂಗ್ರೆಸ್ ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇವೆ' ಎಂದು ಅವರು ಟ್ವೀಟ್ ಮಾಡಿದ್ದರು.

ಎಚ್ಚರಿಕೆ ನೀಡಿದ ಮಾಯಾವತಿ
'ಬಿಎಸ್ಪಿ ಅಭ್ಯರ್ಥಿಗೆ ಹೆದರಿಸಿ ಮತ್ತು ಬೆದರಿಸಿ ಹಾಗೂ ಬಲವಂತವಾಗಿ ಬಿಎಸ್ಪಿ ತ್ಯಜಿಸುವಂತೆ ಮಾಡಲಾಗಿದೆ. ಆದರೆ, ಬಿಎಸ್ಪಿಯು ತನ್ನದೇ ಸ್ವಂತ ಚಿಹ್ನೆಯೊಂದಿಗೆ ಸ್ಪರ್ಧಿಸುವ ಮೂಲಕ ಉತ್ತರ ನೀಡಲಿದೆ. ಜತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮುಂದುವರಿಸುವುದರ ಕುರಿತು ಪರಿಶೀಲನೆ ಮಾಡುತ್ತೇವೆ' ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.

ಸರ್ಕಾರದ ಸ್ಥಿತಿಗತಿ ಹೇಗಿದೆ?
ಒಂದು ವೇಳೆ ಮಾಯಾವತಿ ತಮ್ಮ ಬೆಂಬಲ ಹಿಂದಕ್ಕೆ ಪಡೆದುಕೊಂಡರೆ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರದ ಸ್ಥಿತಿ ಡೋಲಾಯಮಾನವಾಗಲಿದೆ. 230 ಸೀಟುಗಳ ವಿಧಾನಸಭೆಯಲ್ಲಿ ಬಹುಮತಕ್ಕೆ 116 ಸೀಟುಗಳು ಬೇಕು. ಪ್ರಸ್ತುತ ಬಿಎಸ್ಪಿ, ಎಸ್ಪಿ ಮತ್ತು ನಾಲ್ವರು ಪಕ್ಷೇತರರ ಸಹಾಯದಿಂದ ಕಾಂಗ್ರೆಸ್ 120 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಈ ಮೂವರು ಶಾಸಕರು ಬೆಂಬಲ ಹಿಂದಕ್ಕೆ ಪಡೆದುಕೊಂಡರೂ ಸರ್ಕಾರ ಬೀಳುವುದಿಲ್ಲ. ಆದರೆ, ಪಕ್ಷೇತರರು ಸಹ ಹಿಂದೆ ಸರಿದರೆ ಅದಕ್ಕೆ ಹೊಡೆತ ಬೀಳಲಿದೆ. ಬಿಜೆಪಿ ಇಲ್ಲಿ 109 ಸೀಟುಗಳನ್ನು ಹೊಂದಿದ್ದು, ಸರ್ಕಾರ ರಚಿಸುವುದು ಸಾಧ್ಯವಾಗುವುದಿಲ್ಲ.

ಒಂದು ಸ್ಥಾನ ಕುಸಿತ
ಕಾಂಗ್ರೆಸ್ ಒಟ್ಟು 114 ಕ್ಷೇತ್ರಗಳಲ್ಲಿ ಗೆದ್ದಿತ್ತು. ಆದರೆ, ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ದಾರಿಮಾಡಿಕೊಡುವ ಸಲುವಾಗಿ ಚಿಂದ್ವಾರಾ ಕ್ಷೇತ್ರ ಶಾಸಕ ರಾಜೀನಾಮೆ ನೀಡಿದ್ದರು. ಇದರಿಂದ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯೆ 113ಕ್ಕೆ ಕುಸಿದಿದೆ.
ಬಿಎಸ್ಪಿಯ ಇಬ್ಬರು ಶಾಸಕರ ಬೆಂಬಲವನ್ನು ಹಿಂದಕ್ಕೆ ಪಡೆದರೆ ಸರ್ಕಾರದ ಶಾಸಕರ ಸಂಖ್ಯೆ 118ಕ್ಕೆ ಕುಸಿಯಲಿದೆ. ಬಿಎಸ್ಪಿಯನ್ನು ಅನುಸರಿಸಿ ಎಸ್ಪಿ ಕೂಡ ತನ್ನ ಏಕೈಕ ಶಾಸಕನ ಬೆಂಬಲ ಹಿಂಪಡೆದರೆ ಮತ್ತೊಂದು ಸ್ಥಾನ ಕಳೆದುಕೊಳ್ಳಲಿದೆ.












Click it and Unblock the Notifications