ದಿಗ್ವಿಜಯ್ ವಿರುದ್ಧ ಪ್ರಜ್ಞಾ ಸಿಂಗ್ ಕಣಕ್ಕೆ, ಭೋಪಾಲ್ ನಲ್ಲಿ ಕದನ ಕುತೂಹಲ
ನವದೆಹಲಿ, ಏಪ್ರಿಲ್ 17: ಮಧ್ಯಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಬಿಜೆಪಿ ಅಧಿಕೃತವಾಗಿ ಘೋಷಿಸಿದೆ.
2008 ರ ಮಾಲೇಗಾಂವ್ ಸ್ಫೋಟದ ಆರೋಪಿಯಾಗಿ ಬಂಧನಕ್ಕೊಳಗಾಗಿದ್ದ ಸಾಧ್ವಿ ಅವರನ್ನು ಇತ್ತೀಚೆಗಷ್ಟೇ ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯ ಆರೋಪ ಮುಕ್ತಗೊಳಿಸಿತ್ತು. ಬುಧವಾರ ಬೆಳಗ್ಗೆಯಷ್ಟೇ ಅಧಿಕೃತವಾಗಿ ಬಿಜೆಪಿ ಸೇರಿದ ಪ್ರಜ್ಞಾ ಸಿಂಗ್ ಅವರು, ದಿಗ್ವಿಜಯ್ ಸಿಂಗ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಎದುರಿಸಲಿದ್ದಾರೆ.
ಮಂಗಳವಾರವಷ್ಟೇ, ತಾನು ದಿಗ್ವಿಜಯ್ ಸಿಂಗ್ ಅವರನ್ನು ಎದುರಿಸಲು ಸಿದ್ಧ ಎಂದು ಸಾಧ್ವಿ ಹೇಳಿದ್ದರು. ನಂತರ ಬಿಜೆಪಿ ಸೇರಿ ಅಭ್ಯರ್ಥಿಯಾದರು. "ನಾನು 16 ವರ್ಷ ವಯಸ್ಸಿನವಳಾದಾಗಿನಿಂದಲೂ ಭೋಪಾಲಿನಲ್ಲೇ ವಾಸವಿದ್ದೇನೆ. ಭೋಪಾಲ್ ಎಂದರೆ ನನಗೆ ಇಷ್ಟ. ಈ ಭಾಗದ ಜನರ ಸೇವೆ ಮಾಡುವ ಆಸೆ ನನಗೆ. ಅದಕ್ಕೆಂದೇ ಚುನಾವಣೆಗೆ ನಿಲ್ಲಲು ನಿರ್ಧರಿಸಿದ್ದೇನೆ" ಎಂದು ಸಾಧ್ವಿ ಹೇಳಿದ್ದಾರೆ. ಈ ಕ್ಷೇತ್ರದಲ್ಲಿ 1989 ರಿಂದಲೂ ಕಾಂಗ್ರೆಸ್ ಗೆಲುವು ಸಾಧಿಸಿಲ್ಲ! 2014 ರಲ್ಲೂ ಬಿಜೆಪಿಯ ಅಲೋಕ್ ಸಂಜರ್ ಎಂಬುವವರು ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಈ ಕ್ಷೇತ್ರದಿಂದ ಕಾಂಗ್ರೆಸ್ ದಿಗ್ವಿಜಯ್ ಸಿಂಗ್ ರಂಥ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದರಿಂದ ಬಿಜೆಪಿ ಸಾಧ್ವಿ ಅವರನ್ನು ಕಣಕ್ಕಿಳಿಸಿದೆ. ಅವರಿಗೆ ಎಬಿವಿಪಿ ಮೂಲಕ ಸಮಾಜದ ಎಲ್ಲಾ ಸ್ತರದ ಜನರ ಪರಿಚಯ, ಸಂಪರ್ಕವೂ ಇರುವುದರಿಂದ ಆಕೆ ಗೆಲ್ಲಬಹುದು ಎಂಬುದು ಲೆಕ್ಕಾಚಾರ. ಅದೂ ಆಲ್ಲದೆ ಅವರಿಗೆ ಎನ್ ಐಎ ಕ್ಲೀನ್ ಚಿಟ್ ನೀಡಿರುವುದರಿಂದ ಮತ್ತುಜೈಲಿನಿಂದ ಹೊರಬಂದಿರುವುದರಿಂದ ಅನುಕಂಪದ ಅಲೆಯೂ ಕೆಲಸ ಮಾಡಬಹುದು ಎಂದು ಬಿಜೆಪಿ ಅವರನ್ನು ಕಣಕ್ಕಿಳಿಸಿದೆ.

ಮಧ್ಯಪ್ರದೇಶದಲ್ಲಿ ಒಟ್ಟು ಏಪ್ರಿಲ್ 29 ರಿಂದ ಮೇ 19 ರವರೆಗೆ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಹೂರಬೀಳಲಿದೆ.












Click it and Unblock the Notifications