ಹಣಕೊಟ್ಟು ಜನರನ್ನು ಸೇರಿಸುತ್ತಿದ್ದಾನೆ ಕುಮಾರಸ್ವಾಮಿ ಎಂದ ಜಮೀರ್
ಬೆಂಗಳೂರು, ಏಪ್ರಿಲ್ 30 : ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಇತ್ತೀಚೆಗಷ್ಟೆ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿರುವ ಜಮೀರ್ ಅಹಮದ್ ಖಾನ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ಪರವಾಗಿ ಮತಯಾಚನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರ ವಿರುದ್ಧ ಏಕವಚನದಲ್ಲಿ ದಾಳಿ ನಡೆಸಿ ಚನ್ನಪಟ್ಟಣ ಹಾಗೂ ರಾಮನಗರಕ್ಕೆ ಬರಬೇಡ ಎಂದು ಹೇಳಲು ಕುಮಾರಸ್ವಾಮಿ ಯಾರು, ಅವನ ಅನುಮತಿ ಪಡೆದೇ ನಾನು ಕ್ಷೇತ್ರಕ್ಕೆ ಬರಬೇಕೆ, ನಾನು ಬಂದು ಹೋದ ಬಳಿಕ ಸುಮಾರು 30 ಲಕ್ಷ ಹಣ ಹಂಚಿ ಜನರನ್ನು ಸೇರಿಸಿ ಸಮಾವೇಶ ಮಾಡಿದ್ದಾನೆ ಎಂದು ಜಮೀರ್ ವಾಗ್ದಾಳಿ ನಡೆಸಿದರು.
ವೈರಲ್ ಆಯ್ತು ಬಾಲಕೃಷ್ಣ-ನಿಖಿಲ್ ಕುಮಾರಸ್ವಾಮಿಯ ವಾಕ್ಸಮರ
ಕುಮಾರಸ್ವಾಮಿ ಹಣಕೊಟ್ರು ಸೇರಿದ್ದು 200 ಜನ ಮಾತ್ರ: ಕುಮಾರಸ್ವಾಮಿ ಹಣಕೊಟ್ಟು ಜನರನ್ನು ಸೇರಿಸುತ್ತಾನೆ. ಆತನ ಅಭಿಮಾನಕ್ಕೆ ಜನ ಸೇರೋದಿಲ್ಲ .ನಾನು ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿಲ್ಲ, ರಾಜ್ಯದ 52 ಕ್ಷೇತ್ರದಲ್ಲಿ ಈವರೆಗೆ ಪ್ರಚಾರ ಮಾಡಿದ್ದೇನೆ.
ಮೈಸೂರು ಭಾಗದಲ್ಲಿ ನನ್ನ ಸಮುದಾಯದ ಜನ ನನ್ನ ನಂಬಿ ಕಾಂಗ್ರೆಸ್ ಸೇರೋದನ್ನ ನೋಡಿ. ನನ್ನ ಸಮುದಾಯದ ಜನರನ್ನ ತುರುಕರು ಕಾಸುಕೊಟ್ಟರೆ ಬರ್ತಾರೆ ಅಂತ ಜರಿದಿದ್ದಾರೆ. ನನ್ನ ಜನ ಕಾಸಿಗೆ ಬದುಕಿಲ್ಲ. ಕೊಂಡುಕೊಳ್ಳಲು ಅವರು ಯಾರು. ಮುಸ್ಲಿಂರನ್ನು ಜರಿದು ಈಗ ನಾನು ಮಾತನಾಡಿಲ್ಲ ಎಂದು ಹೇಳುತ್ತಾರೆ ಎಂದು ಜಮೀರ್ ಆಕ್ರೋಶ ವ್ಯಕ್ತಪಡಿಸಿದರು.