ಮಾರ್ಕೆಟ್ ಫ್ಲೈ ಓವರ್ನಿಂದ ಹಣ ಎಸೆದು, ಟ್ರಾಫಿಕ್ ಜಾಮ್ ಮಾಡಿದ್ದು ಯಾಕೆ ಗೊತ್ತೆ? ಪೊಲೀಸರು ಹೇಳಿದ್ದು ಹೀಗೆ
ಬೆಂಗಳೂರು, ಜನವರಿ. 25: ಮಂಗಳವಾರ ಬೆಂಗಳೂರು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು ಕೆ.ಆರ್.ಮಾರುಕಟ್ಟೆಯ ಫ್ಲೈ ಓವರ್ನಲ್ಲಿ ಸುರಿದ ಹಣದ ಮಳೆಯಿಂದಾಗಿ. ಜನರು ಹಣವನ್ನು ತೆಗೆದುಕೊಳ್ಳಲು ಸಂಚಾರ ದಟ್ಟಣೆ ಉಂಟು ಮಾಡಿದ ಕಾರಣದಿಂದಾಗಿ.
ಹೌದು, ಕೆ.ಆರ್.ಮಾರುಕಟ್ಟೆಯ ಫ್ಲೈ ಓವರ್ನಿಂದ ಮಂಗಳವಾರದಂದು 30 ವರ್ಷದ ವ್ಯಕ್ತಿಯೊಬ್ಬ ಹಣದ ನೋಟುಗಳನ್ನು ಎಸೆದು ಸಿಲಿಕಾನ್ ಸಿಟಿಯ ಪ್ರಮುಖ ಸಗಟು ಮಾರುಕಟ್ಟೆಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಜನರು ನೋಟುಗಳನ್ನು ತೆಗೆದುಕೊಳ್ಳಲು ಮುಗಿಬಿದ್ದ ಕಾರಣ ಸಂಚಾರ ದಟ್ಟಣೆ ಉಂಟಾಗಿತ್ತು. ಈಗ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಹಣ ಎಸೆದಿದ್ದ ವ್ಯಕ್ತಿಯ ವಶ
ಹೀಗೆ ಕೆ.ಆರ್.ಮಾರುಕಟ್ಟೆಯ ಮೇಲ್ಸೇತುವೆಯಿಂದ ಹಣವನ್ನು ಎಸೆದ ವ್ಯಕ್ತಿಯನ್ನು ಅರುಣ್ ಎಂದು ಗುರುತಿಸಲಾಗಿದೆ. ಈಗ ಹಾಗೆ ಮಾಡಲು ಕಾರಣವೆನು ಎಂದು ಪೊಳಿಸರು ತಿಳಿಸುತ್ತಾರೆ ಓದಿ.
ಪ್ರಚಾರಕ್ಕಾಗಿ ಇಷ್ಟು ದೊಡ್ಡ ಟ್ರಾಫಿಕ್ ಜಾಮ್ ಉಂಟುಮಾಡಿದರೆ?
ತನ್ನನ್ನು ತಾನು ಈವೆಂಟ್ ಮ್ಯಾನೇಜರ್ ಎಂದು ಹೇಳಿಕೊಳ್ಳಲು ಪ್ರಯತ್ನಿಸುತ್ತಿರುವ ಆರೋಪಿ ಅರುಣ್ ಪ್ರಚಾರಕ್ಕಾಗಿ ಇಂತಹ ಕೆಲಸ ಮಾಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಏಕೆಂದರೆ ಈತ ತನ್ನ ಈಗಾಗಲೇ ಆತ ಕೆ.ಆರ್.ಮಾರ್ಕೆಟ್ ಫ್ಲೈಓವರ್ನಿಂದ ಹಣದ ನೋಟುಗಳನ್ನು ಜನರತ್ತ ಎಸೆಯುತ್ತಿರುವ ದೃಶ್ಯ ಸೇರಿದಂತೆ ಹಲವು ವಿಡಿಯೋಗಳ ತುಣುಕುಗಳನ್ನು ಬಿಡುಗಡೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನಸಂದಣಿ ಇರುತ್ತದೆ ಎಂದು ಕೆ.ಆರ್.ಮಾರ್ಕೆಟ್ ಆಯ್ಕೆ
"ಆರೋಪಿ ಅರುಣ್ ಆಂಕರ್ ಮತ್ತು ಈವೆಂಟ್ ಮ್ಯಾನೇಜರ್ ಆಗಿರುವುದರಿಂದ ಜನಪ್ರಿಯತೆ ಮತ್ತು ಪ್ರಚಾರಕ್ಕಾಗಿ ಇದನ್ನು ಮಾಡಿದ್ದಾರೆ ಎಂದು ವಿಚಾರಣೆಯ ಸಮಯದಲ್ಲಿ ನಮಗೆ ತಿಳಿದು ಬಂದಿದೆ. ಈತ ತನ್ನ ಸ್ನೇಹಿತ ಸತೀಶ್ ಜೊತೆ ಮಂಗಳವಾರ ಬೆಳಗ್ಗೆ ಫ್ಲೈಓವರ್ ಬಳಿ ಬಂದು ಹಣ ಎಸೆದಿದ್ದಾರೆ" ಎಂದು ಬೆಂಗಳೂರು ಪಶ್ಚಿಮ ಪೊಲೀಸ್ ಉಪ ಆಯುಕ್ತ (ಡಿಸಿಪಿ) ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಕೆ.ಆರ್.ಮಾರ್ಕೆಟ್ ಜನಸಂದಣಿ ಇರುವ ಸ್ಥಳವಾದ್ದರಿಂದ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡರು. ಹಣ ಎಸೆಯುವ ವಿಡಿಯೋಗಳನ್ನು ಅವರು ತಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ನಲ್ಲಿಯೂ ಹಂಚಿಕೊಂಡಿದ್ದಾರೆ ಎಂದು ಡಿಸಿಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದಾರೆ.
'ನನ್ನ ಉದ್ದೇಶ ಸರಿಯಾಗಿದೆ, ಸಮಯ ಕೊಡಿ ಹೇಳುತ್ತೇನೆ'
ಇನ್ನು, ಇಷ್ಟು ದೊಡ್ಡ ನಾಟಕ ಮಾಡಿರುವ ಆರೋಪಿ ಅರುಣ್ "ಟ್ರಾಫಿಕ್ ಜಾಮ್ ಅನ್ನು ಉಂಟುಮಾಡಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಆದರೆ ನನ್ನ ಉದ್ದೇಶಗಳು ಸರಿಯಾಗಿವೆ. ನನಗೆ ಸ್ವಲ್ಪ ಸಮಯ ಕೊಡಿ. ನಾನು ಏಕೆ ಹಾಗೆ ಹಣವನ್ನು ಎರಚಿದೆ ಎಂದು ವಿವರಿಸುತ್ತೇನೆ" ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆದ ವಿಡಿಯೋಗಳಲ್ಲಿ, ಅರುಣ್ 10 ರೂಪಾಯಿಯ ನೋಟುಗಳ ಸುಮಾರು 3 ರಿಂದ 4 ಬಂಡಲ್ಗಳನ್ನು ಜನರ ಕಡೆಗೆ ಎಸೆಯುತ್ತಿರುವುದನ್ನು ಕಾಣಬಹುದು. ಇನ್ನೊಂದು ವಿಡಿಯೋದಲ್ಲಿ ಜನರು ನೋಟುಗಳನ್ನು ಎತ್ತಿಕೊಳ್ಳುವ ಯತ್ನದಲ್ಲಿ ರಸ್ತೆ ಮಧ್ಯಕ್ಕೆ ಓಡಿ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಕಂಡುಬಂದಿದೆ. ಇದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ನೋಟಿಸ್ಗೆ ಉತ್ತರಿಸದಿದ್ದಕ್ಕೆ ವಶಕ್ಕೆ ಪಡೆದ ಪೊಲೀಸರು
ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ, ಸಿಟಿ ಮಾರ್ಕೆಟ್ ಪೊಲೀಸರು ಸ್ವಯಂ ಪ್ರೇರಿತರಾಗಿ ಅರುಣ್ ವಿರುದ್ಧ ಪ್ರಕರಣ ದಾಖಳಿಸಿಕೊಂಡಿದ್ದಾರೆ. ಸೆಕ್ಷನ್ 283 (ಸಾರ್ವಜನಿಕ ಮಾರ್ಗದಲ್ಲಿ ಅಪಾಯ ಅಥವಾ ಅಡಚಣೆ ಉಂಟು ಮಾಡುವುದು) ಮತ್ತು 290 , ಭಾರತೀಯ ದಂಡ ಸಂಹಿತೆಯ (IPC) ಮತ್ತು ಕರ್ನಾಟಕ ಪೊಲೀಸ್ ಕಾಯಿದೆಯ 92 (D) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಒಟ್ಟಾರೆ, ಕೊರಳಲ್ಲಿ ಗಡಿಯಾರ ನೇತು ಹಾಕಿಕೊಂಡು, ಬ್ಯಾಗಿನಲ್ಲಿ ಹಣದ ಕಂತೆಗಳನ್ನು ಇಟ್ಟುಕೊಂಡು ಫೈಓವರ್ ಮೇಲೆ ಜನರಿಗೆ ತೊಂದರೆ ಕೊಡುತ್ತಾ ಹಣವನ್ನು ಎಸೆಯುತ್ತಿದ್ದ ವ್ಯಕ್ತಿಯನ್ನು ನೋಡಿ ಮೊದಲಿಗೆ ಹಲವರು ಬುದ್ಧಿ ಭ್ರಮಣೆಯಾಗಿದೆ ಎಂದುಕೊಂಡಿದ್ದರು. ಆದರೆ, ಪೊಲೀಸರಿಗೆ ತನ್ನ ಬುದ್ದಿ ಸರಿಯಾಗಿದೆ. ನಾನು ವಿದ್ಯಾವಂತ ಎಂದು ಆರೋಪಿ ಹೇಳಿಕೊಂಡಿದ್ದಾರೆ.