ಕೊನೆಯದಾಗಿ ಸಿಟಿ ರವಿ ಏನಂದ್ರು? ಅಸಮಾಧಾನವಿದೆಯೋ, ಇಲ್ಲವೋ?
ಬೆಂಗಳೂರು, ಆಗಸ್ಟ್ 27: ಮಂತ್ರಿ ಸ್ಥಾನದ ಅಪೇಕ್ಷೆಯೂ ನನಗಿರಲಿಲ್ಲ, ನನಗೆ ಅಸಮಾಧಾನ ಇದೆ ಎಂದು ನಾನು ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಸಚಿವ ಸಿಟಿ ರವಿ ಸ್ಪಷ್ಟಪಡಿದ್ದಾರೆ.
ಮಂತ್ರಿ ಸ್ಥಾನದ ಅಪೇಕ್ಷೆ ನನಗೆ ಇರಲಿಲ್ಲ, ಅಸಮಾಧಾನದ ಪ್ರಶ್ನೆ ಇಲ್ಲ, ರಾಜಕಾರಣದಲ್ಲಿ ಹಿಂದೆ ಮುಂದೆ ಮಾಡಿ ನನಗೆ ಅಭ್ಯಾಸ ಇಲ್ಲ, ನನ್ನದು ನೇರ ರಾಜಕಾರಣ ಎಂದರು. ನಿನ್ನೆ ವಿಶೇಷವಾಗಿ ಕಾರು ವಾಪಸ್ ಕಳುಹಿಸಿಲ್ಲ, ಪ್ರತಿ ದಿನದಂತೆ ನಿನ್ನೆಯೂ ಹೋಗಿದೆ.
ಬಿಜೆಪಿ ಬಿಟ್ಟು ಆಚೆ ಹೋಗಿ ನಾನು ರಾಜಕಾರಣ ಮಾಡುವುದು ಮೀನನ್ನು ನೀರಿನಿಂದ ಹೊರತೆಗೆದಂತೆ, ಪಕ್ಷ ನನಗೆ ಹಲವು ಅವಕಾಶ ಕೊಟ್ಟಿದೆ. ಖಾತೆಗೋಸ್ಕರ ಅಸಮಾಧಾನಗೊಳ್ಳುವವನು ನಾನಲ್ಲ ಎಂದು ಸ್ಪಷ್ಟನೆ ನೀಡಿದರು.

ಪ್ರಮಾಣ ವಚನ ಸ್ವೀಕಾರ ಮಾಡುವ ದಿನವೇ ಈಗ ಎಲ್ಲಾ ನಡೆದಿರುವ ಸೂಕ್ಷ್ಮ ಗಳನ್ನು ಹಿರಿಯರೊಬ್ಬರು ನನಗೆ ಹೇಳಿದ್ದರುಎಂದು ತಿಳಿಸಿದರು.
ನಾನು ಪಕ್ಷಕ್ಕೆಂದೂ ವಂಚನೆ ಮಾಡೋದಿಲ್ಲ, ಸಿದ್ಧಾಂತ ನಿಷ್ಠ ಸ್ವಾಭಿಮಾನಿ ಎಂದು ಹೇಳಿರುವ ಸಿ.ಟಿ.ರವಿ ಅವರು, ನಮ್ಮ ಮನೆಯಲ್ಲಿ ಯಾರೂ ಪಂಚಾಯಿತಿ ಸದಸ್ಯ ಕೂಡ ಇರಲಿಲ್ಲ. ನನ್ನ ಪಕ್ಷ ನನ್ನನ್ನು ಎಂಎಲ್ಎ ಮಾಡಿದೆ.
31 ವರ್ಷಗಳ ಹಿಂದೆ ಬೂತ್ ಕಮಿಟಿ ಅಧ್ಯಕ್ಷನಾಗಿದ್ದೆ. ನನಗೆ ಪಕ್ಷ ಹಲವು ಜವಾಬ್ದಾರಿಗಳನ್ನು ನೀಡಿದೆ. ನಾನು ಅಸಮಾಧಾನಿತನೂ ಅಲ್ಲ, ಬಂಡಾಯಗಾರನೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications