ಮೋದಿಯಂತೆ ಒಬ್ಬರೇ ದೇಶವಾಳುವ ಕನಸು ಕಾಣುತ್ತಿಲ್ಲ, ಜನರೊಂದಿಗೆ ಸಾಗುತ್ತೇವೆ: ರಾಹುಲ್
ಕಲಬುರಗಿ, ಮಾರ್ಚ್ 18: ಮೋದಿ ಪ್ರಧಾನಿಯಾಗಿ ಬರುವವರೆಗೂ ದೇಶದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಹೇಳುತ್ತಾರೆ, ಆದರೆ ಭಾರತ ನಿರ್ಮಾಣ ಪಕ್ರಿಯೆಯು 50 ವರ್ಷಗಳಿಂದಲೂ ಚಾಲ್ತಿಯಲ್ಲಿದೆ ಎಂಬುದನ್ನು ಅವರು ಮರೆತು ಮಾತನಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ದೇಶದ ಚೌಕೀದಾರ ಎನ್ನುತ್ತ ದೇಶವನ್ನು ಒಬ್ಬರೇ ಆಳುವ ಕನಸು ಕಾಣುತ್ತಿದ್ದಾರೆ. ಆದರೆ ಕಾಂಗ್ರೆಸ್ ಜನರ ಜೊತೆಯಲ್ಲಿ ದೇಶವನ್ನು ಅಭಿವೃದ್ಧಿಪಡಿಸುವ ಕನಸನ್ನು ಕಾಣುತ್ತಿದೆ ಎಂದು ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಐದು ಬಗೆಯ ತೆರಿಗೆಯನ್ನು ತೆಗೆದು ಏಕರೂಪ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುತ್ತೇವೆ. ಹಾಗೂ ಬಡವ, ಶ್ರೀಮಂತರಿಗೆ ಭೇದ ಭಾವ ತೋರದೆ ಎಲ್ಲರನ್ನೂ ಸಮಾನವಾಗಿ ಕೊಂಡೊಯ್ಯುವ ಪ್ರಮಾಣ ಮಾಡುತ್ತೇವೆ ಎಂದರು.

ಸಾಮಾನ್ಯ ಜನರಿಗಾಗಿ ಕನಿಷ್ಠ ವೇತನ ನಿಯಮವನ್ನು ಜಾರಿಗೆ ತರುತ್ತೇವೆ, ಬಡತನ ರೇಖೆಗಿಂತಲೂ ಕಡಿಮೆ ಇರುವವರಿಗೆ ಕನಿಷ್ಠ ವೇತನವನ್ನು ನೀಡುತ್ತೇವೆ, ಜೊತೆಗೆ ರೈತರ ಸಾಲ ಮನ್ನಾ ಮಾಡುತ್ತೇವೆ, ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅವರ ಉತ್ಪನ್ನಗಳಿಗೆ ತಕ್ಕದಾದ ಕಾರ್ಖಾನೆಗಳನ್ನು ನಿರ್ಮಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಮೋದಿ ನಾನು ನಿಮ್ಮ ಚೌಕೀದಾರನೆನ್ನುತ್ತಿದ್ದರು, ಬಳಿಕ ಶ್ರೀಮಂತರಿಗೆ ಕಳ್ಳದಾರಿ ತೋರಿಸಿ ಸಿಕ್ಕಿಹಾಕಿಕೊಂಡ ಬಳಿಕ ನೀವೆಲ್ಲರೂ ಚೌಕೀದಾರರೇ ಎಂದು ಮಾತನ್ನು ಬದಲಾಯಿಸಿದರು ಎಂದರು.












Click it and Unblock the Notifications