ಬೆಳ್ಳಂದೂರು ಕೆರೆ ಬಳಿಕ ವರ್ತೂರು ಕೆರೆಯಲ್ಲಿ ಬೆಂಕಿ, ಆತಂಕ
ಬೆಂಗಳೂರು, ಜನವರಿ 21: ಬೆಳ್ಳಂದೂರು ಕೆರೆಯಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಂಡು ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಇದೀಗ ವರ್ತೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದಷ್ಟೇ ಅಲ್ಲದೆ ಸುಮಾರು 10 ಎಕರೆ ಪ್ರದೇಶ ಸುಟ್ಟು ಭಸ್ಮವಾಗಿದೆ.
ಇದು ಮೊದಲನೇ ಬಾರಿ ಅಲ್ಲ, ಎರಡನೇ ಬಾರಿ ವರ್ತೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ಬೆಂಕಿಗೆ ನಿಜವಾದ ಕಾರಣ ತಿಳಿದುಬಂದಿಲ್ಲ, ಒಂದು ಕಾರ್ಖಾನೆಗಳ ರಾಸಾಯನಿಕಗಳು ನೀರಿಗೆ ಸೇರಿ ಅದರಿಂದ ಬೆಂಕಿ ಹತ್ತಿಕೊಂಡಿರು ಸಾಧ್ಯತೆ ಇದೆ, ಇನ್ನು ತ್ಯಾಜ್ಯಕ್ಕೆ ಬೆಂಕಿ ಹಚ್ಚಿದ್ದು ಆ ಬೆಂಕಿ ಕೆರೆಯನ್ನು ಆವರಿಸಿಕೊಂಡಿರುವ ಸಾಧ್ಯತೆಯೂ ಕೂಡ ಹೆಚ್ಚಿದೆ.
ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ತೂಬರಹಳ್ಳಿ ಹಾಗೂ ಸಿದ್ದಾಪುರ ಗ್ರಾಮಗಳ ನಡುವಿನ ಕೆರೆ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆರೆಯ ನಡುವೆ ದಟ್ಟ ಹೊಗೆ ಕಂಡ ಸ್ಥಳೀಯರು ಭಯಗೊಂಡು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು. ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಹಲವು ನಿಮಿಷಗಳವರೆಗೆ ನೀರು ಹಾಯಿಸಿದರೂ ಪ್ರಯೋಜನವಾಗಲಿಲ್ಲ.

ಕೆರೆಯ ಮಧ್ಯಭಾಗದಲ್ಲಿ ಬೆಂಕಿ ಉರಿಯುತ್ತಿದ್ದುದರಿಂದ ಅಷ್ಟು ದೂರಕ್ಕೆ ನೀರು ಹಾಯಿಸುವುದು ಕೂಡ ಕಷ್ಟವಾಯಿತು. ನಂತರ ದೋಣಿಯ ಮೂಲಕ ತೆರಳಿದ ಸಿಬ್ಬಂದಿ ಹಲವು ಗಂಟೆಗಳವರೆಗೆ ಕಸರತ್ತು ನಡೆಸಿ ಬೆಂಕಿ ಆರಿಸಿದರು.
ವರ್ತೂರು ಕೆರೆ ಸಮೀಪ ರಾಶಿಯಾಗಿ ಬಿದ್ದಿದ್ದ ಕಸಕ್ಕೆ ಬೆಂಕಿ ಕೊಟ್ಟಿದ್ದೇ ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣಎಂದು ಕೆಲ ನಿವಾಸಿಗಳು ದೂರಿದ್ದಾರೆ. ಕಸದಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿ ಕೆರೆಯ ಹುಲ್ಲಿಗೂ ವ್ಯಾಪಿಸಿದೆ ಎನ್ನಲಾಗಿದೆ.
ಬೆಳ್ಳಂದೂರು ಕೆರೆಗೆ ಕೈಗಾರಿಕೆಯ ಕೊಳಚೆ ನೀರು ಹರಿಯುತ್ತಿದ್ದುದರಿಂದ ನೊರೆ ಉಂಟಾಗುತ್ತಿದೆ. ಈ ನೊರೆಯಲ್ಲಿ ಬೆಂಕಿ ಉರಿಯಲು ಸಹಾಯ ಮಾಡುವ ರಾಸಾಯನಿಕವಿದೆ ಎಂದು ದೃಢಪಟ್ಟಿದೆ.
ಇದೇ ರೀತಿ ವರ್ತೂರು ಕೆರೆಯ ನೀರು ಕೂಡ ಕಲುಷಿತವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಈ ಭಾಗದಲ್ಲಿ ಕಾರ್ಖಾನೆಗಳಿಂದ ಹರಿಯುವ ಕೊಳಚೆ ನೀರನ್ನು ಸಂಪೂರ್ಣವಾಗಿ ತಡೆಗಟ್ಟಲಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications