ಹೈಕೋರ್ಟ್ ಬಳಿಕ ಎನ್ಜಿಟಿ ಸರದಿ: ಬಿಬಿಎಂಪಿಗೆ 5 ಕೋಟಿ ದಂಡ
ಬೆಂಗಳೂರು, ಅಕ್ಟೋಬರ್ 26: ತ್ಯಾಜ್ಯ ಬೆಂಗಳೂರಿನ ಬಹುದೊಡ್ಡ ಸಮಸ್ಯೆ ಅದರ ನಿರ್ವಹಣೆಯಲ್ಲಿ ಸೋತ ಬಿಬಿಎಂಪಿಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ 5 ಕೋಟಿ ರೂ ದಂಡ ವಿಧಿಸಿದೆ.
ನಗರದ ಹೊರ ವಲಯದಲ್ಲಿರುವ ಬಾಗಲೂರಿನ ಕಲ್ಲು ಕ್ವಾರಿಯಲ್ಲಿ ಸುರಿದಿರುವ ತ್ಯಾಜ್ಯವನ್ನು ಬಯೋ ಮೈನಿಂಗ್ ಮೂಲಕ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕೆಂದು ನ್ಯಾಯಮಂಡಳಿ ಒಂದೂವರೆ ತಿಂಗಳ ಹಿಂದೆಯೇ ಇರ್ದೇಶನ ನೀಡಿತ್ತು.
ಆದರೆ ಕಸದ ಮೇಲೆ ಮಣ್ಣಿನ ಹೊದಿಕೆ ಹಾಕಿರುವ ಪಾಲಿಕೆಯು ಬಯೋ ಮೈನಿಂಗ್ ಮಾಡಿಲ್ಲ ಇದರಿಂದ ಆಕ್ರೋಶಗೊಂಡ ಮಂಡಳಿಯು ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡು 5 ಕೋಟಿ ರೂ ದಂಡ ವಿಧಿಸಿದೆ.

ಬಯೋ ಮೈನಿಂಗ್ ಪ್ರಕ್ರಿಯೆ ಹಾಗೂ ಆದೇಶ ಪಾಲನೆ ಬಗ್ಗೆ ವಿಸ್ತೃತ ವರದಿ ನೀಡುವಂತೆ ಜ.17ರಂದು ಬಿಬಿಎಂಪಿಗೆ ಸೂಚಿಸಿತ್ತು. ಆದರೆ ವೈಜ್ಞಾನಿಕ ಮಾದರಿಯಲ್ಲಿ ಕಸ ವಿಲೇವಾರಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈವರೆಗೆ ಸೂಕ್ತ ಕ್ರಮ ಕೈಗೊಳ್ಳದಿರುವುದರಿಂದ 5 ಕೋಟಿ ರೂ ದಂಡ ವಿಧಿಸಲಾಗಿದೆ.
ಬಾಗಲೂರಿನ ಕಲ್ಲು ಕ್ವಾರಿಯಲ್ಲಿ 97 ಸಾವಿರ ಟನ್ನಷ್ಟು ಕಸವನ್ನು ಭರ್ತಿ ಮಾಡಲಾಗಿದೆ. ಈ ಕಸವನ್ನು ಹೊರತೆಗೆದು ಪ್ಲಾಸ್ಟಿಕ್ ಮತ್ತು ಇತರೆ ಹಸಿ ತ್ಯಾಜ್ಯವನ್ನು ಪ್ರತ್ಯೇಕಿಸಿ ಬಯೋ ಮೈನಿಂಗ್ ಮಾಡಬೇಕೆಂದು ಎನ್ಜಿಟಿ ಆದೇಶ ನೀಡಿತ್ತು.
ಬಿಬಿಎಂಪಿ ತನ್ನ ವೈಫಲ್ಯವನ್ನು ಮುಚ್ಚಿಹಾಕುವ ಉದ್ದೇಶದಿಂದ ಆದೇಶ ಪಾಲನೆ ವರದಿ ನೀಡಿದೆಯೇ ಹೊರತು ಕರ್ತವ್ಯ ನಿಭಾಯಿಸಲು ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಎನ್ಜಿಟಿ ಹೇಳಿದೆ.












Click it and Unblock the Notifications