ಗಂಡನ ಉಸಿರು ಗಟ್ಟಿ ಹತ್ಯೆ ಮಾಡಿ ಹೃದಯಾಘಾತ ಎಂದು ನಾಟಕವಾಡಿದ್ದ ಪತ್ನಿ
ಬೆಂಗಳೂರು, ಮಾರ್ಚ್ 01: ಸಾಮಾನ್ಯವಾಗಿ ಮೂಗರ್ಜಿಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಇತ್ತೀಚೆಗೆ ಸರ್ಕಾರ ಅಂತೂ ಮೂಗರ್ಜಿಗಳನ್ನು ಪರಿಶೀಲಿಸಬೇಡಿ ಎಂದು ಸುತ್ತೋಲೆ ಕೂಡ ಹೊರಡಿಸಿಬಿಟ್ಟಿದೆ. ಆದರೆ ಮೂಗರ್ಜಿಯೊಂದು ನೀಡುವ ಸುಳಿವು ದೊಡ್ಡ ದೊಡ್ಡ ಹಗರಣ ಬಯಲಿಗೆ ಎಳೆಯುತ್ತವೆ. ಲೋಕಾಯುಕ್ತ ಸಂಸ್ಥೆಗೆ, ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಮೂಗರ್ಜಿಗಳೇ ಮೂಲ ಸೋರ್ಸ್. ಮೂಗರ್ಜಿ ನೀಡಿದ ಸಣ್ಣ ಸುಳಿವಿನಿಂದ ಕೊಲೆ ಪ್ರಕರಣವೊಂದರ ರಹಸ್ಯ ಬಯಲಾಗಿದೆ. ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎನ್ನಲಾದ ವ್ಯಕ್ತಿಯ ಕೊಲೆ ರಹಸ್ಯವನ್ನು ಮೂಗರ್ಜಿ ಬಯಲಿಗೆ ಎಳೆದಿದೆ.

ಹೃದಯಾಘಾತ
ಆ ಮಹಿಳೆ ಹೆಸರು ಸರ್ವರಿ ಬೇಗಂ, ತನ್ನ ಪುತ್ರನೊಂದಿಗೆ ಹೆಗ್ಗನಹಳ್ಳಿಯಲ್ಲಿ ವಾಸವಾಗಿದ್ದಳು. ಪತಿ ಮಹಮದ್ ಹಂಜಲ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಬರುತ್ತಿದ್ದ. ಕಳೆದ ಫೆ. 10 ರಂದು ಮಹಮದ್ ಹಂಜಲ್ ಸಾವನ್ನಪ್ಪಿದ್ದ. ಹೃದಯಾಘಾತದಿಂದ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾರೆ ಎಂದು ಪತ್ನಿ ಸರ್ವರಿ ಬೇಗಂ ಕಣ್ಣೀರು ಹಾಕಿ ತನ್ನ ಗಂಡನ ಕಾರ್ಯ ಮುಗಿಸಿ ಬಂದಿದ್ದರು. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ.

ಕೊಲೆ ಬಗ್ಗೆ ಮಹತ್ವದ ಸುಳಿವು
ಮಹಮದ್ ಹಂಜಲ ಮೃತಪಟ್ಟು ಒಂದು ವಾರದ ನಂತರ ರಾಜಗೋಪಾಲನಗರ ಪೊಲೀಸ್ ಠಾಣೆಗೆ ಮೂಗರ್ಜಿಯೊಂದು ಬಂದಿತ್ತು. ಅದರಲ್ಲಿ ಮಹಮದ್ ಹಂಜಲನನ್ನು ಆಕೆಯ ಪತ್ನಿಯೇ ಕೊಲೆ ಮಾಡಿದ್ದಾರೆ. ಆನಂತರ ಮಣ್ಣು ಮಾಡಿದ್ದಾರೆ. ಪ್ರಕರಣ ಯಾರಿಗೂ ಗೊತ್ತಾಗಬಾರದು ಎಂದು ಹೃದಯಾಘಾತ ನಾಟಕವಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಎಂದು ಅಪರಿಚಿತ ವ್ಯಕ್ತಿಯೊಬ್ಬರು ಬರೆದಿದ್ದರು. ಸಾಮಾನ್ಯವಾಗಿ ಯಾವ ಇಲಾಖೆಯಲ್ಲೂ ಮೂಗರ್ಜಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಪೊಲೀಸರಿಗೆ ಅದು ಬಹುದೊಡ್ಡ ಮಾಹಿತಿ. ಅದರಂತೆ ಮೂಗರ್ಜಿ ಮೂಲ ಹಿಡಿದು ತನಿಖೆ ನಡೆಸಿದ ರಾಜಗೋಪಾಲ ನಗರ ಪೊಲೀಸರು ಮೃತನ ಪತ್ನಿ ಸರ್ವರಿ ಬೇಗಂ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ಶೀಲ ಶಂಕಿಸಿದ್ದಕ್ಕೆ ಹತ್ಯೆ
ಮೂಗರ್ಜಿ ಸುಳಿವಿನ ಮೇರೆಗೆ ಸರ್ವರಿ ಬೇಗಂಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಪತಿ ಮಹಮದ್ ಹಂಜಲ ಶೀಲ ಶಂಕಿಸಿ ಪದೇ ಪದೇ ಜಗಳ ಮಾಡುತ್ತಿದ್ದ. ಅಲ್ಲದೇ ಕುಟುಂಬದ ಜವಾಬ್ಧಾರಿ ಏನೂ ವಹಿಸಿಕೊಂಡಿರಲಿಲ್ಲ. ಹೀಗಾಗಿ ಇಬ್ಬರ ನಡುವೆ ವೈಮಸ್ಯ ಉಂಟಾಗಿ ತನ್ನ ಮಗನ ಜತೆ ಸೇರಿ ಹತ್ಯೆ ಮಾಡಲು ಸಂಚು ರೂಪಿಸಿ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
Recommended Video

ಸುಪಾರಿ ಹತ್ಯೆ
ಇನ್ನು ಕೆಲಸದ ನಿಮಿತ್ತ ಹೊರಗೆ ಹೋಗಿ ಬಂದಿದ್ದ ಗಂಡನಿಗೆ ಫೆ. 10 ರಂದು ರಾತ್ರಿ ನಿದ್ರೆ ಮಾತ್ರೆ ಕೊಟ್ಟಿದ್ದಾರೆ. ನಿದ್ದೆ ಮತ್ತಿನಲ್ಲಿ ಮಲಗಿದ್ದ ಗಂಡನ ಉಸಿರು ಗಟ್ಟಿಸಿ ಪುತ್ರ ಶಫಿ ಉರ್ ರೆಹಮಾನ್ ಕೊಲೆ ಮಾಡಿದ್ದಾರೆ. ಇದು ಯಾರಿಗೂ ಅನುಮಾನ ಬಾರದಂತೆ ಕಾರ್ಯ ಮುಗಿಸಲು ಮಹದಮ್ ಸೈಫ್, ಸಯ್ಯದ್ ಅವೆಜ್ ಪಾಷಾ, ಅಪ್ತಾಬ್ ಗೆ 4 ಲಕ್ಷ ರೂ. ಸುಪಾರಿ ನೀಡಿದ್ದು, ಅದರಂತೆ ಹೃದಯಾಘಾತ ಎಂದು ಬಿಂಬಿಸಿದ್ದಾರೆ. ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 98 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ರಾಜಗೋಪಾಲನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂಗರ್ಜಿ ನೀಡಿದ ಸುಳಿವಿನಿಂದ ಕೊಲೆ ರಹಸ್ಯ ಬಯಲು ಮಾಡಿದ ಪೊಲೀಸರ ಕಾರ್ಯ ವನ್ನು ಅಧಿಕಾರಿಗಳು ಶ್ಲಾಘಿಸಿದ್ದಾರೆ.












Click it and Unblock the Notifications