ಸಂಚಾರ ನಿಯಮ ಉಲ್ಲಂಘನೆ: ಆರ್ ಸಿ ಮೇಲಲ್ಲ, ಡಿಎಲ್ ಮೇಲೆ ಕೇಸು
ಬೆಂಗಳೂರು, ಜನವರಿ 24 : ಬೇರೆಯವರ ವಾಹನ ಪಡೆದು ಸಂಚಾರ ನಿಯಮ ಉಲ್ಲಂಘಿಸುವ ಚಾಲಕರು ಎಚ್ಚರಿಕೆಯಿಂದಿರಬೇಕು. ಏಕೆಂದರೆ ಇನ್ನುಮುಂದೆ ಸಂಚಾರ ನಿಯಮ ಉಲ್ಲಂಘಿಸುವ ಚಾಲಕರ ಚಾಲನಾ ಪರವಾನಗಿ ಆಧರಿಸಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಡಿಎಲ್ ಅಮಾನತಿಗೂ ಶಿಫಾರಸ್ಸು ಮಾಡಲಿದ್ದಾರೆ. ಪ್ರಸ್ತುತ ನಗರ ಸಂಚಾರ ಪೊಲೀಸರು ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ನೋಂದಣಿ ಪತ್ರ( ಆರ್ ಸಿ) ಆಧರಿಸಿ ಪ್ರಕರಣ ದಾಖಲಿಸುತ್ತಿದ್ದಾರೆ. ವಾಹನದ ಮಾಲೀಕ ಬೇರೆ ಇದ್ದು, ಚಾಲಕ ನಿಯಮ ಉಲ್ಲಂಘಿಸಿದರೂ ಮಾಲೀಕನ ವಿರುದ್ಧವೇ ಪ್ರಕರಣ ದಾಖಲಾಗುತ್ತಿದೆ.
ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ ವಾಹನದ ಆರ್ ಸಿ ಅಮಾನತಿಗೆ ಶಿಫಾರಸ್ಸು ಮಾಡಲಾಗುತ್ತಿದೆ. ಚಾಲಕನ ತಪ್ಪಿಗೆ ಮಾಲೀಕ ಅಮಾನತಿ ಶಿಕ್ಷೆ ಅನುಭವಿಸುವುದನ್ನು ತಪ್ಪಿಸುವ ಉದ್ದೇಶದಿಂದ ಇನ್ನುಮುಂದೆ ನಿಯಮ ಉಲ್ಲಂಘನೆ ವೇಳೆ ಚಾಲಕನ ಡಿಎಲ್ ಆಧರಿಸಿ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ರಸ್ತೆಗಳಲ್ಲಿ ನಿರ್ಲಕ್ಷ್ಯದ ಚಾಲನೆ, ಡ್ರಿಂಕ್ ಅಂಡ್ ಡ್ರೈವ್, ಸಿಗ್ನಲ್ ಜಂಪ್, ನೋ ಪಾರ್ಕಿಂಗ್, ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ ಸೇರಿದಂತೆ ಇತರೆ ಸಂಚಾರ ನಿಯಮ ಉಲ್ಲಂಘಿಸಿದಾಗ ಸಂಚಾರ ಪೊಲೀಸರು ವಾಹನದ ಆರ್ ಸಿ ಆಧರಿಸಿ ದಂಡ ವಿಧಿಸುತ್ತಾರೆ.
ಬೆಂಗಳೂರು ನಗರದಲ್ಲಿ ಕಳೆದ ಆರು ದಿನಗಳಲ್ಲಿ 3807 ವಾಹನಗಳನ್ನು ತಪಾಸಣೆ ನಡೆಸಿರುವ ಸಾರಿಗೆ ಇಲಾಖೆ ವಿಶೇಷ ತನಿಖಾ ತಂಡಗಳು, ಸಾರಿಗೆ ನಿಯಮ ಉಲ್ಲಂಘಿಸಿದ560 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, 18 ವಾಹನ ಜಪ್ತಿ ಮಾಡಿದೆ.











Click it and Unblock the Notifications