Bengaluru Traffic: ಬೆಂಗಳೂರು ಟ್ರಾಫಿಕ್ ಡಿಕೆಶಿಗೆ ತೇಜಸ್ವಿ ಸೂರ್ಯ ಬೇಡಿಕೆ ಏನು
ಬೆಂಗಳೂರು, ಆಗಸ್ಟ್ 21: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಮ್ಮ ಮೆಟ್ರೋ, ಬಿಎಂಟಿಸಿ ಸೇರಿ ಯಾವುದೇ ಸಂಚಾರ ವ್ಯವಸ್ಥೆಗಳು ಬಂದರೂ ಸಹ ಪರಿಸ್ಥಿತಿ ಸುಧಾರಣೆ ಆಗುತ್ತಿಲ್ಲ. ಈ ಹಿನ್ನಲೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಬೆಂಗಳೂರು ನಗರದ ಸಮಸ್ಯೆಗೆ ಪರಿಹಾರ ಹುಡುಕುಬೇಕು ಎಂದು ಕರೆ ನೀಡಿದ್ದಾರೆ.
ಬುಧವಾರ ತೇಜಸ್ವಿ ಸೂರ್ಯ ಈ ಕುರಿತು ಟ್ವೀಟ್ವೊಂದನ್ನು ಮಾಡಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮುಂದೆ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಉದ್ಯಾನ ನಗರಿಯ ಸಮಸ್ಯೆಯನ್ನು ಎಲ್ಲರೂ ಒಂದಾಗಿ ಬಗೆಹರಿಸುವರೇ? ಕಾದು ನೋಡಬೇಕಿದೆ.

ತೇಜಸ್ವಿ ಸೂರ್ಯ ಟ್ವೀಟ್ ವಿವರಗಳು: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಭಾನುವಾರ ಸಹ ನಗರದಲ್ಲಿ ಸಂಚಾರ ದಟ್ಟಣೆ ವಾರದ ದಿನಗಳಲ್ಲಿ ಇರುವಂತೆ ಇರುತ್ತದೆ. ಪ್ರತಿದಿನ ಸಾವಿರಾರು ಹೊಸ ಖಾಸಗಿ ವಾಹನಗಳು ರಸ್ತೆಗೆ ಇಳಿಯುತ್ತಿವೆ, ಇದು ಸಮಸ್ಯೆಯನ್ನು ಹೆಚ್ಚಿಸುತ್ತಿವೆ.
ಬೆಂಗಳೂರು ನಗರದ ನಗರದ ರಸ್ತೆಗಳು, ವಸತಿ ಪ್ರದೇಶಗಳಲ್ಲಿನ ಸಣ್ಣ ಲೈನ್ಗಳು ವಾಹನ ನಿರ್ವಹಣೆಯ ಸಾಮರ್ಥ್ಯವನ್ನು ಮೀರಿವೆ ಮತ್ತು ಹೆಚ್ಚಿನ ಹೊಸ ರಸ್ತೆಗಳನ್ನು ನಿರ್ಮಾಣ ಮಾಡಲು ಈಗ ಸ್ಥಳದ ಅಭಾವವಿದೆ. ಹೊಸ ರಸ್ತೆ ಇಲ್ಲ ಎಂದರೆ ಹೆಚ್ಚು ಖಾಸಗಿ ವಾಹನಗಳಿಗೆ ಅವಕಾಶವಿಲ್ಲ ಎಂದು ಅರ್ಥ ಎಂದು ಹೇಳಿದ್ದಾರೆ.
ರಸ್ತೆಗಿಳಿಯುವ ಖಾಸಗಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಳ ಮಾಡಲು ನಾವು ನಿಖರವಾಗಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಬಿಎಂಟಿಸಿಯಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ನಮ್ಮ ಮೆಟ್ರೋದಲ್ಲಿ ಸಹ ಪೀಕ್ ಅವರ್ನಲ್ಲಿ ಜನರ ದಟ್ಟಣೆ ಅಧಿಕವಾಗಿದೆ. ಓಲಾ, ಊಬರ್ ಸೇರಿ ಟ್ಯಾಕ್ಸಿ ಸೇವೆಗಳ ದರಗಳು ಹೆಚ್ಚಿರುವುದರಿಂದ, ಆಟೋ ಚಾಲಕರು ಸಹ ಪ್ರಯಾಣ ಕ್ಯಾನ್ಸಲ್ ಮಾಡುವುದರಿಂದ ಜನರು ಅವುಗಳನ್ನು ಬಳಸುವುದಿಲ್ಲ.
ಬೆಂಗಳೂರು ನಗರದ ಪುಟ್ಪಾತ್ ಪಾದಚಾರಿಗಳಿಗೆ ಹೆಚ್ಚು ಅನುಕೂಲವಾಗಿಲ್ಲ. ರಸ್ತೆಗಳ ಸ್ಥಿತಿಯೂ ಕೆಟ್ಟಿದೆ. ಗುಂಡಿಗಳು, ಅವೈಜ್ಞಾನಿಕ ಹಂಪ್ಸ್ಗಳ ಬಗ್ಗೆ ಗಮನ ನೀಡಬೇಕಾದ ಬಿಬಿಎಂಪಿ ಮತ್ತು ಅಧಿಕಾರಿಗಳು ಜನವಸತಿ ಪ್ರದೇಶ, ವಾಣಿಜ್ಯೋದ್ಯಮ ಬೆಳವಣಿಗೆ ನೋಡುತ್ತಾ, ಸಮಸ್ಯೆಗಳ ಬಗ್ಗೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತಿದೆ. ಇದರಿಂದಾಗಿ ನಗರದ ಜೀವನದ ಗುಣಮಟ್ಟ ಹದಗೆಡುತ್ತಿದೆ.
ತೇಜಸ್ವಿ ಸೂರ್ಯ ತಮ್ಮ ಟ್ವೀಟ್ನಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ವಿವಿಧ ಪಕ್ಷಗಳ ಸರ್ಕಾರಗಳು ಬೆಂಗಳೂರು ನಗರಕ್ಕೆ ದೂರದೃಷ್ಟಿಯಿಂದ ಕೂಡಿದ ನಾಯಕತ್ವವನ್ನು ಒದಗಿಸುವಲ್ಲಿ ವಿಫಲವಾಗಿವೆ. ಬೆಸ-ಸಮ ಮಾದರಿ ಅಥವಾ ಸಿಂಗಾಪುರ ಮಾದರಿಯನ್ನು ಜಾರಿಗೊಳಿಸಬೇಕು. ನಗರಕ್ಕೆ ದೀರ್ಘಾವಧಿಯಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಹೂಡಿಕೆಗಳನ್ನು ಹೆಚ್ಚಿಸಬೇಕು, ಖಾಸಗಿ ವಾಹನಗಳನ್ನು ಕಡಿಮೆಗೊಳಿಸಬೇಕು ಎಂದು ತೇಜಸ್ವಿ ಸೂರ್ಯ ವಿವರಣೆ ನೀಡಿದ್ದಾರೆ.
ಸದ್ಯ ನಗರಕ್ಕೆ ಸಹಾಯ ಅಗತ್ಯವಿದೆ. ನಗರದ ನಮ್ಮ ಜನರು ವಿಶೇಷವಾಗಿ ಮಧ್ಯಮ ವರ್ಗದವರ ಜೀವನ ಗುಣಮಟ್ಟವನ್ನು ಸುಧಾರಿಸಬೇಕು. ಇಂದು ನಾವು ನಮ್ಮ ಕುಟುಂಬ ಮತ್ತು ಪ್ರೀತಿಪಾತ್ರರಿಗಿಂತ ಹೆಚ್ಚು ಸಮಯವನ್ನು ಸಂಚಾರ ದಟ್ಟಣೆಯಲ್ಲಿ ಕಳೆಯುತ್ತಿದ್ದೇವೆ ಎಂದು ಸಂಸದರು ಹೇಳಿದ್ದಾರೆ.
ನಾನು ಡಿಸಿಎಂ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ. ಕೆ. ಶಿವಕುಮಾರ್ ಅವರನ್ನು ಒತ್ತಾಯಿಸುತ್ತೇನೆ. ನಗರದ ಚುನಾಯಿತ ಪ್ರತಿನಿಧಿಗಳು ಮತ್ತು ಸಂಚಾರ ನಿರ್ವಹಣಾ ತಜ್ಞರೊಂದಿಗೆ ತುರ್ತು ಸಭೆಯನ್ನು ಕರೆಯಿರಿ. ನಾವು ಸರ್ವಾನುಮತದಿಂದ ಮುಂದಿನ ಪರಿಹಾರಗಳ ಬಗ್ಗೆ ಚರ್ಚಿಸಬಹುದು.
ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ತನಕ ನಾನು ವಿಚಾರದ ಕುರಿತು ಮಾತನಾಡುತ್ತಲೇ ಇರುವೆ. ನಾವು ಪಕ್ಷ, ರಾಜಕೀಯವನ್ನು ಬದಿಗಿಟ್ಟು ನಮ್ಮ ನಗರಕ್ಕೆ ಸಹಾಯ ಮಾಡಬಹುದು ಎಂದು ಹೇಳಿದ್ದಾರೆ.












Click it and Unblock the Notifications