ಬೆಂಗಳೂರಿನಲ್ಲಿ ಮೂರು ಇಂಟೆಗ್ರೇಟೆಡ್ ಟೌನ್ಶಿಪ್-ಎಲ್ಲೆಲ್ಲಿ ಹಾಗೂ ತಗಲುವ ವೆಚ್ಚ ಎಷ್ಟು?-ಮಾಹಿತಿ, ವಿವರ ತಿಳಿಯಿರಿ
Integrated Townships In Benagluru: ರಾಜ್ಯ ರಾಜಧಾನಿ ಬೆಂಗಳೂರು ನಗರ ದಿನದಿಂದ ದಿನಕ್ಕೆ ವಿಸ್ತರಣೆ ಆಗುತ್ತಲೇ ಇದ್ದು, ಅಭಿವೃದ್ಧಿ ಕಾರ್ಯಗಳು ಕೂಡ ನಡೆಯುತ್ತಿವೆ. ಇನ್ನೂ ಇದೀಗ ನಗರದ ಮೂರು ಕಡೆ ಇಂಟಿಗ್ರೇಟೆಡ್ ಟೌನ್ಶಿಪ್ ನಿರ್ಮಾಣ ಮಾಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಸ್ತಾಪ ಮಾಡಿದ್ದಾರೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಇದಕ್ಕೆ ತಗಲುವ ವೆಚ್ಚ ಎಷ್ಟು ಎಂದು ಇಲ್ಲಿ ತಿಳಿಯಿರಿ.
ಬೆಂಗಳೂರಿನ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತರಣೆ ಆಗುತ್ತಲೇ ಇದೆ. ಆದ್ದರಿಂದ ಬೆಂಗಳೂರಿನ ಈ ಮೂರು ಪ್ರದೇಶಗಳನ್ನು ಪ್ರತ್ಯೇಕ ಹಾಗೂ ಇಂಟಿಗ್ರೇಟೆಡ್ ಟೌನ್ಶಿಪ್ಗಳಾಗಿ ಅಭಿವೃದ್ದಿಪಡಿಸಲು ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಸ್ತಾಪ ಮಾಡಿದ್ದಾರೆ.

ನಗರದ ಬಿಡದಿ, ಮಾಗಡಿ ಸಮೀಪದ ಸೋಲೂರು ಹಾಗೂ ಹೊಸಕೋಟೆ ತಾಲ್ಲೂಕಿನ ನಂದಗುಡಿಯ ಮೂರು ಟೌನ್ಶಿಪ್ ರಚನೆಗೆ ಹಸಿರು ನಿಶಾನೆ ತೋರಿದ್ದಾರೆ. ಈ ಹಿನ್ನೆಲೆ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (BMRDA) ಯೋಜನೆಗಳನ್ನು ರೂಪಿಸುತ್ತಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಇನ್ನು ಪೂರ್ವಸಿದ್ಧತಾ ಕಾರ್ಯದ ಭಾಗವಾಗಿ, ಈ ಮೂರು ಪ್ರದೇಶಗಳನ್ನು ಮೆಟ್ರೋದೊಂದಿಗೆ ಸಂಪರ್ಕ ಕಲ್ಪಿಸುವ ಸಾಧ್ಯತೆಯನ್ನು ಅಧ್ಯಯನ ಮಾಡಲು BMRDA ನಮ್ಮ ಮೆಟ್ರೋಗೆ ಪತ್ರ ಬರೆದಿದೆ. ಪ್ರತ್ಯೇಕವಾಗಿ, ಕುಡಿಯುವ ನೀರು ಸರಬರಾಜು ಮಾಡುವ ಜೊತೆ ಮೂಲ ಸೌಕರ್ಯಗಳನ್ನು ರಚನೆ ಮಾಡಲು BWSSBಗೂ ಪತ್ರ ಬರೆದಿದೆ.
ಪ್ರಾಧಿಕಾರವು ಮೂರೂ ಕಡೆಗಳಲ್ಲಿ ಸ್ವಾಧೀನಪಡಿಸಿಕೊಳ್ಳಲು ಬೇಕಾದ ದೊಡ್ಡ ಪ್ರಮಾಣದ ಭೂಮಿಗಾಗಿ ರಾಜ್ಯ ಸರ್ಕಾರದ ಅನುಮೋದನೆಯನ್ನು ಕೋರಿದೆ. ಎರಡನೇಯದಾಗಿ, ಪ್ರಾಧಿಕಾರವು ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಸಜ್ಜಾಗುತ್ತಿದೆ ಮತ್ತು ಬೆಂಗಳೂರು ನಗರ ಜಿಲ್ಲಾಡಳಿತವು ಸಾಮಾಜಿಕ ಪರಿಣಾಮದ ಮೌಲ್ಯಮಾಪನ ಅಧ್ಯಯನವನ್ನು ಕೈಗೊಳ್ಳಲಿದೆ. 'ಸ್ಯಾಟಲೈಟ್ ಟೌನ್ ರಿಂಗ್ ರೋಡ್ಗೆ ಸಂಪರ್ಕಗೊಂಡಿರುವ ಕಾರಣ ನಾವು ಮೂರು ಪ್ರದೇಶಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ," ಎಂದು ಪ್ರಾಧಿಕಾರದ ಮೆಟ್ರೋಪಾಲಿಟನ್ ಕಮಿಷನರ್ ರಾಜೇಂದ್ರ ಪಿ.ಚೋಳನ್ ಹೇಳಿದರು.
ಬಿಡದಿಯನ್ನು ಮೊದಲು ತೆಗೆದುಕೊಳ್ಳಲಾಗುವುದು. ಇದು ನಾಲ್ಕು ಹೆದ್ದಾರಿಗಳಿಂದ ಆವೃತ ಆಗಿದೆ. ಅಲ್ಲಿ ನಾವು ಸಮಗ್ರ ಟೌನ್ಶಿಪ್ ಅನ್ನು ಯೋಜಿಸುತ್ತಿದ್ದೇವೆ. ಇದು ಲಾಜಿಸ್ಟಿಕ್ ಪಾರ್ಕ್ಗಳು, ಡೇಟಾ ಸೆಂಟರ್ಗಳು ಇತ್ಯಾದಿ ಮತ್ತು ಎತ್ತರದ ವಸತಿ ಘಟಕಗಳಂತಹ ವಾಣಿಜ್ಯ ಮಿಶ್ರಣವನ್ನು ಹೊಂದಿರುತ್ತದೆ. ಅಲ್ಲದೇ ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇಯಲ್ಲಿ ನಂದಗುಡಿಯನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ನೆಲಮಂಗಲ, ಮಾಗಡಿಗೆ ಮತ್ತು ಬೆಂಗಳೂರಿಗೆ ಸಮೀಪವಿರುವ ಸೋಲೂರನ್ನು ಪಟ್ಟಿ ಮಾಡಲಾಗಿದ್ದು ಬಿಡದಿ ನಂತರ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಮೂರು ಪ್ರದೇಶಗಳು ರಾಮನಗರ ಮತ್ತು ಸಾತನೂರು ಸೇರಿದಂತೆ ಐದು ಉಪನಗರಗಳ ಭಾಗವಾಗಿದ್ದವು. 2006ರಲ್ಲಿ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಮಗ್ರ ಅಭಿವೃದ್ಧಿಗೆ ಪ್ರಸ್ತಾಪಿಸಲಾಯಿತು. ಆದರೆ, ರಾಜ್ಯದಲ್ಲಿ ಸರ್ಕಾರ ಬದಲಾದ ನಂತರ ಈ ಪ್ರಸ್ತಾವನೆ ಟೇಕಾಫ್ ಆಗಿರಲಿಲ್ಲ.
ಕಳೆದ ನವೆಂಬರ್ನಲ್ಲಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರವು 8,000 ಚದರ ಕಿಲೋ ಮೀಟರ್ಗಳಲ್ಲಿ 12 ಸ್ಥಳೀಯ ಯೋಜನಾ ಪ್ರಾಧಿಕಾರಗಳನ್ನು ಒಳಗೊಂಡಿರುವ BMRDA ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಅಧಿಕಾರದೊಂದಿಗೆ ಗ್ರೇಟರ್ ಬೆಂಗಳೂರು ಡೆವಲಪ್ಮೆಂಟ್ ಅಥಾರಿಟಿಯನ್ನು ರಚಿಸಿತು.
ಬಿಡಿಎ, ಜಿಬಿಡಿಎಯು ಉದ್ದೇಶಿತ ಸಮಗ್ರ ಟೌನ್ಶಿಪ್ಗಳಲ್ಲಿ ಭೂಸ್ವಾಧೀನ ಮತ್ತು ಎಂಜಿನಿಯರಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಅದರಲ್ಲೂ ಬೆಂಗಳೂರಿನ ಅಭಿವೃದ್ದಿಗಾಗಿ ಡಿ.ಕೆ.ಶಿವಕುಮಾರ್ ವಿಶೇಷ ಒತ್ತು ನೀಡುತ್ತಿರುವುದರಿಂದಲೂ ಈ ಯೋಜನೆಗಳು ಚಾಲನೆ ಪಡೆದುಕೊಂಡಿವೆ ಎಂದು ಹೇಳಲಾಗುತ್ತಿದೆ.












Click it and Unblock the Notifications