ಕಾಂಗ್ರೆಸ್ ಪಕ್ಷ ಹೆಸರಿನ ಬದಲು ಭಯೋತ್ಪಾದಕ ಪಕ್ಷ ಅಂತ ಇರಬೇಕಿತ್ತು:ರೇಣುಕಾಚಾರ್ಯ
ಬೆಂಗಳೂರು, ಡಿಸೆಂಬರ್ 20: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಪ್ರತಿಭಟನೆಯ ಸಂದರ್ಭದಲ್ಲಿ ಮಂಗಳೂರಿನಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಇದು ಕಾಂಗ್ರೆಸ್ ಬೆಂಬಲಿತ ಪ್ರತಿಭಟನೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಗೋಲಿಬಾರ್ ನಿಂದ ಸಾವನ್ನಪ್ಪಿದ ಯುವಕರ ಸಾವಿನ ಹೊಣೆಯನ್ನು ಕಾಂಗ್ರೆಸ್ ನ ಯು.ಟಿ.ಖಾದರ್ ಹೊರಬೇಕು. ಅವರು ಮಂಗಳೂರಿಗೆ ಬೆಂಕಿ ಹಚ್ಚುವ ಹೇಳಿಕೆಯಿಂದ ಪ್ರಚೋದಿತಗೊಂಡು ಗಲಭೆ ನಡೆಸಿದ್ದಾರೆ ಎಂದು ಹರಿಹಾಯ್ದರು.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರು, ಯು.ಟಿ.ಖಾದರ್ ರಾಜಕಾರಣಿ ಅಲ್ಲ, ಭಯೋತ್ಪಾದಕನ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅವರಿಂದಲೇ ಇದೆಲ್ಲ ಆಗಿದ್ದು ಎಂದು ಅಕ್ರೋಶ ವ್ಯಕ್ತಪಡಿಸಿದರು.

ಇನ್ನು ಕಾಂಗ್ರೆಸ್ ನವರಿಗೆ ಯಾವುದೇ ಕೆಲಸವಿದ್ದಂತಿಲ್ಲ, ಪೌರತ್ವ ಕಾಯ್ದೆ ಅಂತ ಹಿಡಿದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಏನೂ ಗೊತ್ತಿಲ್ಲದ ಮುಗ್ಧರನ್ನು ಕರೆದುಕೊಂಡು ಬಂದು ಪ್ರತಿಭಟಿಸಲು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷ ಅದು ಒಂದು ಪಕ್ಷವಲ್ಲ, ಕಾಂಗ್ರೆಸ್ ಅಂತ ಹೆಸರಿಡುವ ಬದಲು ಭಯೋತ್ಪಾದಕ ಪಕ್ಷ ಅಂತ ಹೆಸರಿಡಬೇಕಿತ್ತು ಎಂದು ಕಿಡಿಕಾರಿದರು. ದೇಶದ ತುಂಬಾ ಗಲಭೆ ಮಾಡಿಸುವುದೇ ಕಾಂಗ್ರೆಸ್ ನ ಕೆಲಸ, ದೇಶ ಶಾಂತವಾಗಿರುವುದು ಅದಕ್ಕೆ ಇಷ್ಟವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪೌರತ್ವ ಕಾಯ್ದೆಯಿಂದ ಯಾರಿಗೂ ನಷ್ಟವಿಲ್ಲ, ಯಾರೂ ಭಯ ಪಡುವ ಅವಶ್ಯಕತೆ ಇಲ್ಲ ಎಂದರು. ಕಾಂಗ್ರೆಸ್ ಗೆ ಓಟ್ ಬ್ಯಾಂಕ್ ನ ಚಿಂತೆ ಹೀಗಾಗಿ ತಲೆ ಕೆಡಿಸಿಕೊಂಡಿದೆ. ಅಕ್ರಮ ವಲಸಿಗರ ಬಗ್ಗೆ ಕಾಂಗ್ರೆಸ್ ಗೆ ಕನಿಕರ ಜಾಸ್ತಿಯಾಗಿದೆ ಹೊರತು ಭಾರತೀಯರ ಮೇಲಿಲ್ಲ ಎಂದು ಹೇಳಿದರು.












Click it and Unblock the Notifications