ನಮ್ಮ ಮೆಟ್ರೋ ಸುರಂಗ ಮಾರ್ಗಕ್ಕೆ ಚೀನಾದಿಂದ ಬರಲಿದೆ ಯಂತ್ರ
ಬೆಂಗಳೂರು, ಡಿಸೆಂಬರ್ 18: ನಮ್ಮ ಮೆಟ್ರೋ ಸುರಂಗ ಕಾರ್ಯಕ್ಕೆ ಚೀನಾದಿಂದ ಯಂತ್ರವನ್ನು ತರಿಸಲಾಗುತ್ತಿದೆ.
ಶಿವಾಜಿನಗರ ವೆಲ್ಲಾರ ಜಂಕ್ಷನ್ ಸೇರಿದಂತೆ ನಗರದ ವಿವಿಧೆಡೆ ನಮ್ಮ ಮೆಟ್ರೋ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಎಲ್ ಅಂಡ್ ಟಿ ಕಂಪನಿ ಚೀನಾದಿಂದ ಸುರಂಗ ಕೊರೆಯುವ ಯಂತ್ರವನ್ನು ಬಳಕೆ ಮಾಡುತ್ತಿದ್ದಾರೆ.
ಗ್ರೀನ್ ಲೈನ್ ಗೆ ಆರು ಬೋಗಿಯ ಮತ್ತೆರಡು ಮೆಟ್ರೋ ಟ್ರೈನ್
ಚೀನಾದ ರೈಲ್ವೆ ಕನ್ಸ್ಟ್ರಕ್ಷನ್ ಹೆವಿ ಇಂಡಸ್ಟ್ರಿ ಕಾರ್ಪೊರೇಷನ್ ಸುರಂಗ ಕೊರೆಯುವ ನಾಲ್ಕು ಯಂತ್ರ ಪೂರೈಕೆ ಮಾಡಲಿದೆ. ಡಿಸೆಂಬರ್ ಕೊನೆಯ ಅಥವಾ ಜನವರಿ ಮೊಸಲ ವಾರದಲ್ಲಿ ಟಿಬಿಎಂಗಳು ನಗರಕ್ಕೆ ಬರಲಿವೆ. ಈ ಯಂತ್ರ ದಿನಕ್ಕೆ ಎರಡರಿಂದ ಮೂರು ಮೀಟರ್ಗಳಷ್ಟು ಸುರಂಗವನ್ನು ಕೊರೆಯುವ ಸಾಮರ್ಥ್ಯವನ್ನು ಹೊಂದಿದೆ.
ಒಂದನೇ ಹಂತದ ಯೋಜನೆಯಲ್ಲಿ ಚಿಕ್ಕಪೇಟೆ, ಚಿಕ್ಕಲಾಲ್ಬಾಗ್, ಕೆಆರ್ ಮಾರುಕಟ್ಟೆ, ಮಾಗಡಿ ರಸ್ತೆ, ಕೆಆರ್ ವೃತ್ತಗಳಲ್ಲಿ ಸುರಂಗ ಮಾರ್ಗದ ಕಾಮಗಾರಿಗಾಗಿ ಸಿಡಿಮದ್ದುಗಳನ್ನು ಬಳಕೆ ಮಾಡಿದ್ದರಿಂದ ಕೆಲವು ಕಟ್ಟಡಗಳಲ್ಲಿ ಬಿರುಕು ಉಂಟಾಗಿತ್ತು. ಹಾಗಾಗಿ ಸುರಂಗ ಕೊರೆಯಲು ಅತ್ಯಾಧುನಿಕ ಯಂತ್ರವನ್ನು ಬಳಕೆ ಮಾಡಲಾಗುತ್ತಿದೆ.
ಜನವರಿಯಲ್ಲಿ ಕಾಮಗಾರಿ ಆರಂಭ
ಈ ಯಂತ್ರಗಳು ಆಗಮಿಸಿರುವ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಶಿವಾಜಿನಗರ ಹಾಗೂ ವೆಲ್ಲಾರ ಜಂಕ್ಷನ್ ನಡುವಿನ ಪ್ರಾಥಮಿಕ ಹಂತದ ಕಾಮಗಾರಿಯನ್ನು ಜನರವರಿ ಮೊದಲ ವಾರದಿಂದಲೇ ಆರಂಭಿಸಲಿದೆ.
ನೆಲದಾಳದಲ್ಲಿ ಯಂತ್ರ ಅಳವಡಿಕೆ
ಯಂತ್ರಗಳು ಬಂದ ಬಳಿಕ ಅವುಗಳನ್ನು ನೆಲದಾಳದಲ್ಲಿ ಅಳವಡಿಸಲು ಅಗತ್ಯ ಸಿದ್ಧತೆಗಾಗಿ ಈ ಕಾಮಗಾರಿ ನಡೆಯಲಿದೆ. ಒಂದು ಬಾರಿ ಯಂತ್ರ ಬಂದ ನಂತರ ಅವುಗಳನ್ನು ನೆಲದಾಳದಲ್ಲಿ ಅಳವಡಿಸಿ, ಸುರಂಗ ಕೊರೆಯುವ , ಸುರಂಗ ಕೊರೆಯುವ ಕೆಲಸ ಆರಂಭಿಸಲು ಒಂದು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಯಂತ್ರಗಳು ಜನವರಿ ಮಾಸಾಂತ್ಯಕ್ಕೆ ನಗರಕ್ಕೆ ಬಂದರೂ ಸುರಂಗ ಕೊರೆಯುವ ಯಂತ್ರ ಕೆಲಸ ಆರಂಭವಾಗುವುದು ಫೆಬ್ರರಿಯಲ್ಲಿ.
ಗೊಟ್ಟಿಗೆರೆ-ನಾಗವಾರ (21.42 ಕಿ.ಮೀ ಮಾರ್ಗ)
ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ಸ್ವಾಗತ್ ಕ್ರಾಸ್-ನಾಗವಾರದವರೆಗೆ 13 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಮೊದಲಿಗೆ ಶಿವಾಜಿನಗರ-ವೆಲ್ಲಾರ ಜಂಕ್ಷನ್ ಮಾರ್ಗದಲ್ಲಿ ಎರಡು ಟಿಬಿಎಂಗಳನ್ನು ಅಳವಡಿಸಿ ಸುರಂಗ ಮಾರ್ಗ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಸ್ವಾಧೀನ ವಿವಾದ ಇನ್ನೂ ಬರೆಹರಿದಿಲ್ಲ
ಈ ಮಾರ್ಗದಲ್ಲಿ ಭೂಸ್ವಾಧೀನ ಕುರಿತು ಸೇಂಟ್ಸ್ ಚರ್ಚ್ ಹಾಗೂ ಸ್ಥಳೀಯ ಮಿಲಿಟರಿ ಪ್ರಾಧಿಕಾರದ ನಡುವೆ ವಿವಾದ ಬಗೆಹರಿಯದ ಕಾರಣ ಈ ಭಾಗದಲ್ಲಿ ಸಧ್ಯಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ. ಈಗಿರುವ ವಿವಾದ ಬಗೆಹರಿಸಲು ಬಿಎಂಆರ್ಸಿಎಲ್ ಮುಂದಾಗಿದೆ. ಬಹುತೇಕ ಜನವರಿ ಮೊದಲ ವಾರದಲ್ಲಿ ಕಾಮಗಾರಿಗೆ ಮರು ಚಾಲನೆ ಸಿಗುವ ಸಾಧ್ಯತೆ ಇದೆ.