ಹೆಣ್ಣಿನ ಕಣ್ಣೀರು, ಸಿಂಗಲ್ ಟೇಕ್ ವರ್ಕೌಟ್ ಆಗಿಲ್ಲ: ಮುನಿರತ್ನ ನಾಗಾಲೋಟ
ಬೆಂಗಳೂರು, ನ 10: ರಾಜರಾಜೇಶ್ವರಿ ನಗರ ಅಸೆಂಬ್ಲಿ ಉಪಚುನಾವಣೆಯ ಮತಎಣಿಕೆ ಚಾಲ್ತಿಯಲ್ಲಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಲೀಡ್ ಅನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮೊದಲ ಸುತ್ತಿನಿಂದಲೇ ಮುನಿರತ್ನ ಲೀಡ್ ಕಾಯ್ಡುಕೊಂಡಿದ್ದರು.
Recommended Video
ಹನ್ನೆರಡನೇ ರೌಂಡಿನ ಮತ ಎಣಿಕೆ ಮುಕ್ತಾಯಗೊಂಡಿದ್ದು ಬಿಜೆಪಿ ಅಭ್ಯರ್ಥಿ ಮುನಿರತ್ನ 64,852, ಕಾಂಗ್ರೆಸ್ ಅಭ್ಯರ್ಥಿ ಎಚ್.ಕುಸುಮಾ 33,625 ಮತ್ತು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ 2,256 ಮತಗಳನ್ನು ಪಡೆದಿದ್ದಾರೆ.
ಆ ಮೂಲಕ, ಮುನಿರತ್ನ 31,235 ಮತಗಳ ಭಾರೀ ಲೀಡ್ ನಿಂದ ಮುಂದಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಜಯಘೋಷಾ ಮುಗಿಲು ಮುಟ್ಟಿದೆ. ಕೊರೊನಾ ಸಾಮಾಜಿಕ ಅಂತರವೂ ಇಲ್ಲಿ ಧೂಳೀಪಟವಾಗಿದೆ.

ಈ ಅಸೆಂಬ್ಲಿ ಚುನಾವಣೆಯ ಪ್ರಚಾರದ ವೇಳೆ ಮುನಿರತ್ನ ಕುಸುಮಾ ಅವರ ಅತ್ತೆ ಗೌರಮ್ಮ (ಡಿ.ಕೆ.ರವಿ ತಾಯಿ) ಕಣ್ಣೀರು ಹಾಕಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿ ಲೇವಡಿ ಮಾಡಿದ್ದರು. ಇನ್ನು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ನಾನು ನಿಮ್ಮ ಮನೆ ಮಗಳು, ನನ್ನನ್ನು ಗೆಲ್ಲಿಸಿ ಎಂದು ಸಾಕಷ್ಟು ಬಾರಿ ಕಣ್ಣೀರು ಹಾಕಿ ಪ್ರಚಾರ ಮಾಡಿದ್ದರು.
ಕ್ಷೇತ್ರದ ಉಪಚುನಾವಣೆಗೆ ಎಚ್.ಕುಸುಮಾ ಅವರ ಹೆಸರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇಳಿಬರುತ್ತಿದ್ದ ವೇಳೆ, ಡಿ.ಕೆ.ರವಿ ಅವರ ತಾಯಿ ಗೌರಮ್ಮ, ಕುಸುಮಾ ವಿರುದ್ದ ಕಿಡಿಕಾರಿದ್ದರು. ಆದರೆ, ಚುನಾವಣೆಗೆ ಒಂದೆರಡು ದಿನ ಇರಬೇಕು ಎನ್ನುವ ಹೊತ್ತಿನಲ್ಲಿ ಉಲ್ಟಾ ಹೊಡೆದು ಸೊಸೆಯ ಪರವಾಗಿ ಮಾತನಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಮುನಿರತ್ನ, "ಹತ್ತು ದಿನದ ಹಿಂದೆ ಜಗುಲಿಯ ಮೇಲೆ ಕೂತು ಏನೋ ಮಾತಾಡಿದ್ದರು. ಈಗ ಲಕ್ಷಾಂತರ ರೂಪಾಯಿಯ ಸೋಫಾದ ಮೇಲೆ ಕೂತು ಮಾತನಾಡುತ್ತಿದ್ದಾರೆ. ಅವರು ಎಷ್ಟು ಚೆನ್ನಾಗಿ ಒಂದೇ ಟೇಕ್ ನಲ್ಲಿ ಮಾತನಾಡಿ ಮುಗಿಸಿದ್ದಾರೆ. ನಮ್ಮ ಕಲಾವಿದರಿದ್ದಾರೆ, ಹತ್ತತ್ತು ಟೇಕ್ ತೆಗೆದುಕೊಳ್ಳುತ್ತಾರೆ"ಎಂದು ವ್ಯಂಗ್ಯವಾಡಿದ್ದರು.












Click it and Unblock the Notifications