ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ಹೆಚ್ಚಳಕ್ಕೆ ಖಂಡನೆ
ಬೆಂಗಳೂರು, ಮೇ 28: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 20-30 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಆಮ್ ಆದ್ಮಿ ಪಕ್ಷ ಖಂಡಿಸಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಅವರು, 'ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಬೆನ್ನಲ್ಲೇ ಭುಗಿಲೆದ್ದಿರುವ ಆರ್ಥಿಕ ಬಿಕ್ಕಟ್ಟಿಗೆ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಇದರ ಜೊತೆಗೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 20-30 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡುವ ನಿರ್ಧಾರ ಸರಿ ಅಲ್ಲ' ಎಂದಿದ್ದಾರೆ.
'ರಾಜ್ಯದಲ್ಲಿ ಹತ್ತು ಮಹಾನಗರ ಪಾಲಿಕೆಗಳು, 58 ನಗರ ಸಭೆಗಳು ಸೇರಿದಂತೆ ಎಲ್ಲಾ ಪುರಸಭೆ, ಪಟ್ಟಣ ಪಂಚಾಯತ್ಗಳಲ್ಲಿ ಜನಾಭಿಪ್ರಾಯವನ್ನು ತೆಗೆದುಕೊಳ್ಳದೆ, ಏಕಾಏಕಿ ತೆರಿಗೆ ಹೆಚ್ಚಳ ಮಾಡಿರುವುದು ಖಂಡನೀಯ. ಸ್ವಯಂ ಘೋಷಿತ ತೆರಿಗೆ ಪ್ರಕಾರ ಕನಿಷ್ಟ ಶೇ. 15 ದರವನ್ನು ಪ್ರತಿ 3 ವರ್ಷಕ್ಕೊಮ್ಮೆ ಹೆಚ್ಚಳ ಮಾಡುವ ನಿಯಮವನ್ನು ಮುಂದಿಟ್ಟುಕೊಂಡು ಕೊರೊನಾವೈರಸ್ ಸಂದರ್ಭದಲ್ಲಿ ಜನರಿಂದ ತೆರಿಗೆ ವಸೂಲಿ ಮಾಡಲು ಮುಂದಾಗಿರುವುದು ಎಷ್ಟು ಸರಿ?' ಎಂದು ಪ್ರಶ್ನಿಸಿದ್ದಾರೆ.

'ಉದ್ಯೋಗವಿಲ್ಲದೆ, ವ್ಯಾಪಾರ ವಹಿವಾಟಿನಿಂದಾಗಿ ಆದಾಯವಿಲ್ಲದೇ ಕಂಗೆಟ್ಟಿರುವ ಜನರಿಗೆ ಈಗ ಹೆಚ್ಚಿನ ಹೊರೆ ಹಾಕುವುದು ಅಮಾನವೀಯ ನಡೆಯಾಗಿದೆ. ಪಾಲಿಕೆಗಳ ಅಭಿವೃದ್ಧಿಯ ಕಡೆಗೆ ನಿರ್ಲಕ್ಷ್ಯ ತೋರಿ, ಆಸ್ತಿ ತೆರಿಗೆ ಹೆಚ್ಚಿಸಿ ಸುಲಿಗೆಗೆ ಇಳಿದಿರುವುದನ್ನು ಆಮ್ ಆದ್ಮಿ ಪಕ್ಷ ವಿರೋಧಿಸುತ್ತದೆ' ಎಂದಿದ್ದಾರೆ.












Click it and Unblock the Notifications