ಹಲಸೂರು ಕೆರೆಗೆ STP:ಫೆಬ್ರವರಿಯಿಂದ ಕಾರ್ಯಾರಂಭ
ಬೆಂಗಳೂರು, ಜನವರಿ 12: ಹಲಸೂರು ಕೆರೆಗೆ ತ್ಯಾಜ್ಯ ನೀರು ಸೇರದಂತೆ ತಡೆಯಲು ನಿರ್ಮಿಸುತ್ತಿರುವ ಎಸ್ ಟಿಪಿ ಫೆಬ್ರವರಿಯಿಂದ ಕಾರ್ಯಾರಂಭಗೊಳ್ಳಲಿದೆ. ನಗರದ ಸ್ವಚ್ಛ ಕೆರೆ ಎಂದು ಹೆಸರು ಪಡೆದಿರುವ ಹಲಸೂರು ಕೆರೆಗೆ ಶೀಘ್ರವೇ ಎಸ್ ಟಿಪಿ ಭಾಗ್ಯ ದೊರೆಯಲಿದೆ.
126 ಎಕರೆ ವಿಸ್ತೀರ್ಣವಿರುವ ಹಲಸೂರು ಕೆರೆ ಮಡಿವಾಳ ಹಾಗೂ ಸ್ಯಾಂಕಿ ಕೆರೆಯಂತೆಯೇ ಹೆಸರು ಪಡೆದಿದೆ. ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಸಾರ್ವಜನಿಕರು ವಾಯುವಿಹಾರ, ಜಾಗಿಂಗ್ ಮಾಡುತ್ತಾರೆ. ಪ್ರತಿ ವರ್ಷ ಗಣೇಶ ಮೂರ್ತಿಗಳು ವಿಸರ್ಜನೆಯಾಗುತ್ತಿದ್ದರಿಂದ ಕೆರೆ ಕಲುಷಿತಗೊಳ್ಳುತ್ತಿತ್ತು. ಬಳಿಕ ಇದಕ್ಕಾಗಿ ಕೆರೆ ಸಮೀಪದ ಪ್ರತ್ಯೇಕವಾಗಿ ಕಲ್ಯಾಣಿ ನಿರ್ಮಿಸಲಾಯಿತು.
ಇದರಿಂದಾಗಿ ಕೆರೆಗೆ ರಾಸಾಯನಿಕ ಸೇರುವುದು ಕಡಿಮೆಯಾಯಿತು. ಆದರೆ ಕೆರೆಗೆ ರಾಜಕಾಲುವೆಯಿಂದ ತ್ಯಾಜ್ಯ ನೀರು ಸೇರುವುದನ್ನು ತಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಬೆಂಗಳೂರು ಜಲಮಂಡಳಿಯು ೨ ಎಂಎಲ್ ಡಿ ಸಾಮರ್ಥ್ಯದ ಎಸ್ ಟಿಪಿ ನಿರ್ಮಿಸುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ. ಫೆಬ್ರವರಿ ಮಧ್ಯಭಾಗದಲ್ಲಿ ಇದಕ್ಕೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ.

ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವ ಹಲಸೂರು ಕೆರೆಯಲ್ಲಿ ಕಳೆದ ವರ್ಷ ಬೃಹತ್ ಪ್ರಮಾಣದಲ್ಲಿ ಮೀನುಗಳು ಸತ್ತು ರಾಶಿ ಬಿದ್ದತ್ತು. ಕೆರೆಗೆ ಕೊಳಚೆ ನೀಡು ಹರಿದಿದ್ದರಿಂದ ಈ ಸಮಸ್ಯೆ ಸೃಷ್ಟಿಯಾಗಿತ್ತು. ಕೆರೆಯಲ್ಲಿ ಮೀನುಗಾರಿಕೆ ಮಾಡುತ್ತಿದ್ದವರಿಗೆ ಅಪಾರ ನಷ್ಟ ಉಂಟಾಗಿತ್ತು. ಪ್ರಮುಖವಾಗಿ ಕದಿರೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಕೆರೆಗೆ ಕೊಳಚೆ ನೀಡು ಹರಿಯುತ್ತಿದೆ.
ಇದಕ್ಕೆ ಕಡಿವಾಣ ಹಾಕಲು ಕೆರೆ ಆವರಣದಲ್ಲಿ 30/30 ವಿಸ್ತೀರ್ಣದ ಜಾಗದಲ್ಲಿ ದ್ವತೀಯ ಹಂತದ ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗಿದೆ. ಈ ಎಸ್ ಟಿಪಿ ಕದಿರೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ರಾಜಕಾಲುವೆ ಮೂಲಕ ಹರಿದುಬರುತ್ತಿರು ತ್ಯಾಜ್ಯ ನೀರನ್ನುಶುದ್ಧೀಕರಣ ಮಾಡಲಿದೆ.
ಬಳಿಕ ಇದನ್ನು ಕೆರೆಗೆ ಹರಿಸಲಾಗುತ್ತದೆ. ಎಸ್ ಟಿಪಿಯಲ್ಲಿ ಸಂಸ್ಕರಣೆಗೊಂಡ ನಂತರ ಈ ನೀರು ಮರುಬಳಕೆಗೆ ಯೋಗ್ಯವಾಗಲಿದೆ. ಸದ್ಯಕ್ಕೆ ಈ ನೀರನ್ನು ಕೆರೆಗೆ ಬಿಡಲು ಚಿಂತಿಸಲಾಗಿದೆ. ಪ್ರತಿನಿತ್ಯ 2 ದಶಲಕ್ಷ ಲೀಟರ್ ನೀರನ್ನು ಎಸ್ಟಿಪಿ ಶುದ್ಧೀಕರಿಸುತ್ತದೆ. 8ಕೋಟಿ ವೆಚ್ಚದಲ್ಲಿ ಎಸ್ ಟಿ ಪಿ ನಿರ್ಮಿಸಲಾಗುತ್ತಿದೆ.












Click it and Unblock the Notifications