ಮಹದಾಯಿ ಬಗ್ಗೆ ಮೋದಿ ಮೌನಕ್ಕೆ ಬಿಜೆಪಿಗರು ಕೊಟ್ಟ ಕಾರಣ ಇದು
ಬೆಂಗಳೂರು, ಫೆಬ್ರವರಿ 05: ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ನಾಯಕರು ತೋರಿದ ಉದ್ವೇಗ ಅಚ್ಚರಿ ಉಂಟುಮಾಡಿದೆ ಇದೇ ವೇಗವನ್ನು ಅಭಿವೃದ್ಧಿಗೆ ನೀಡಿದ್ದರೆ ಕರ್ನಾಟಕ ರಾಜ್ಯ ಅತ್ಯುತ್ತಮ ಸ್ಥಾನದಲ್ಲಿರುತಿತ್ತು ಎಂದು ಬಿಜೆಪಿ ರಾಜ್ಯ ಮುಖಂಡರು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ನಿನ್ನೆ ನಗರಕ್ಕೆ ಬಂದು ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ತಮ್ಮ ಭಾಷಣದಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸಿದ ಬೆನ್ನಲ್ಲೆ ಕಾಂಗ್ರೆಸ್ ಮುಖಂಡರು ಎದುರು ಪ್ರತಿಕ್ರಿಯೆಗಳನ್ನು ನೀಡಿದ್ದರು. ಹೀಗಾಗಿ ಬಿಜಪಿಯ ಮುಖಂಡರಾದ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮತ್ತು ಕೆ.ಎಸ್.ಈಶ್ವರಪ್ಪ, ಶಾಸಕ ಸುರೇಶ್ ಕುಮಾರ್, ಅಶ್ವತ್ಥ್ ನಾರಾಯಣ್ ಅವರು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವರ್ತನೆ ಬಗ್ಗೆ ಮಾತನಾಡಿದರು.
ನರೇಂದ್ರ ಮೋದಿ ಮಹದಾಯಿ ಬಗ್ಗೆ ಚಕಾರವೆತ್ತಲಿಲ್ಲವೇಕೆ?
ಮಹದಾಯಿ ಕುರಿತು ಮೋದಿ ಮೌನದ ಬಗ್ಗೆ ಮಾತನಾಡಿದ ಅವರು 'ಮಹದಾಯಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಲು ಬಯಸುವುದಿಲ್ಲ ನ್ಯಾಯಾಧಿಕರಣದ ಮುಂದೆ ಇರುವ ವಿಷಯವನ್ನು ರ್ಯಾಲಿಯಲ್ಲಿ ಮಾತನಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಮೋದಿ ಅವರು ಆ ಕುರಿತು ಮಾತನಾಡಲಿಲ್ಲ. ಅಂತರರಾಜ್ಯ ವಿವಾದಗಳನ್ನು ರಾಜಕೀಯ ಸಭೆಗಳಲ್ಲಿ ಪ್ರಸ್ತಾಪಿಸುವುದು ಎಷ್ಟು ಸೂಕ್ತ ಎಂದು ಯೋಚಿಸಬೇಕಿದೆ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.
ರಾಜಕೀಯ ಕಾರಣಕ್ಕಾಗಿ ರಾಜ್ಯಕ್ಕೆ ಬಂದ ಮೋದಿ ಅವರನ್ನು ಸ್ವಾಗತಿಸುವುದು ರಾಜ್ಯದ ಮುಖ್ಯಮಂತ್ರಿ ಅಥವಾ ಮಂತ್ರಿಗಳಿಗೆ ಇರಬೇಕಾಗಿದ್ದ ಶಿಷ್ಟಾಚಾರ ಆದರೆ ಅದನ್ನು ಬಿಟ್ಟು ರಾಜಕೀಯ ದ್ವೇಷದಿಂದಾಗಿ ಮೋದಿ ಅವರನ್ನು ಸ್ವಾಗತಿಸಲಿಲ್ಲ, ಇದು ಪ್ರಧಾನಿಗೆ ಹಾಗೂ ರಾಜ್ಯದ ಜನಕ್ಕೆ ಮಾಡಿದ ಅವಮಾನ ಎಂದು ಗುಡುಗಿದರು.

ಶೇ 80 ರಷ್ಟು ಹಣ ಕೇಂದ್ರದ್ದು
ಬಜೆಟ್ನಲ್ಲಿ ಬೆಂಗಳೂರಿಗೆ ನೀಡಲಾಗಿರುವ ಸಬ್ ಅರ್ಬನ್ ರೈಲಿಗೆ ತಗಲುವ ವೆಚ್ಚದ ಶೇ 60 ಪ್ರತಿಷತ ಹಣವನ್ನು ರಾಜ್ಯ ಸರ್ಕಾರ ನೀಡುತ್ತದೆ ಎಂದು ಪರಮೇಶ್ವರ್ ಅವರು ಹೇಳಿರುವ ಮಾತು ಸಂಪೂರ್ಣ ಸುಳ್ಳು ಯೋಜನೆಯ ಶೇ 80 ಹಣವನ್ನು ಭಾರತ ಕೇಂದ್ರವೇ ನೀಡಲಿದೆ ಎಂದು ಅವರು ಸ್ಪಷ್ಟಪಡಿಸಿದರು.

15.7 ರಷ್ಟು ಹೂಡಿಕೆ ಅಷ್ಟೆ
ಪ್ರಧಾನಿ ಮೋದಿ ಆಗಮನದಂದು ಕಾಂಗ್ರೆಸ್ ಕೆಲವು ಸ್ವಾಗತ ಬೋರ್ಡ್ಗಳನ್ನು ಹಾಕಿದೆ ಅದರಲ್ಲಿ ಬಂಡವಾಳ ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯಕ್ಕೆ ಸ್ವಾಗತ ಎಂದು ಬರೆಯಲಾಗಿದೆ. ಆದರೆ ಬಹುತೇಕ ಬಂಡವಾಳ ಹೂಡಿಕೆ ಕೇವಲ ಆಶ್ವಾಸನೆ ಅಷ್ಟೆ 15.7 ರಷ್ಟು ಮಾತ್ರವೇ ಬಂಡವಾಳ ಹೂಡಿಕೆ ಆಗಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಯೋಗಿ ಬಂದ ಮೇಲೆ ಸುಧಾರಣೆ
ಸಿದ್ದರಾಮಯ್ಯ, ಪರಮೇಶ್ವರ್ ಅವರು ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ ಆದರೆ ಅದರ ಔಚಿತ್ಯವಾದರೂ ಏನು ಎಂದ ಬಿಜೆಪಿ ಮುಖಂಡರು ಯೋಗಿ ಆದಿತ್ಯನಾಥ ಅವರ ಆಗಮನದ ನಂತರ ಅಲ್ಲಿನ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಕರ್ನಾಟಕಕ್ಕಿಂತಲೂ ಉತ್ತಮವಾದ ಕಾನೂನು ಸುವ್ಯವಸ್ಥೆ ಅಲ್ಲಿದೆ ಎಂದು ಅವರು ಹೇಳಿದರು.

ಎಲ್ಲರಿಗೂ ಲೆಕ್ಕ ಕೇಳುವ ಹಕ್ಕಿದೆ
ಕಂದಾಯದ ಹಣವನ್ನು ಯಾವ ಉದ್ದೇಶಕ್ಕೆ ಖರ್ಚು ಮಾಡಲಾಗಿದೆ ಎಂದು ಕೇಳುವ ಅಧಿಕಾರ ಎಲ್ಲ ಜನರಿಗೆ ಇದೆ, ಜನಪ್ರತಿನಿಧಿಗಳಿಗೂ ಇದೆ ಹಾಗಾಗಿಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸಿದ್ದರಾಮಯ್ಯ ಅವರನ್ನು ಲೆಕ್ಕ ಕೇಳಿದ್ದಾರೆ. ಆದರೆ ಅದಕ್ಕೆ ಮುಖ್ಯಮಂತ್ರಿಗಳು ಅಹಂಕಾರದ ಉತ್ತರ ನೀಡಿದ್ದು ಕೇಂದ್ರ ಭಿಕ್ಷೆ ನೀಡುತ್ತಿಲ್ಲ ಎಂದಿದ್ದಾರೆ ಎಂದು ಬೇಸರಗೊಂಡರು.












Click it and Unblock the Notifications