ನರೇಂದ್ರ ಮೋದಿ ಮಹದಾಯಿ ಬಗ್ಗೆ ಚಕಾರವೆತ್ತಲಿಲ್ಲವೇಕೆ?

ಬೆಂಗಳೂರು, ಫೆಬ್ರವರಿ 04 : ಅರಮನೆ ಮೈದಾನದಲ್ಲಿ ಜಮಾವಣೆಯಾಗಿದ್ದ ಮೂರು ಲಕ್ಷಕ್ಕೂ ಹೆಚ್ಚು ಜನ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಯಾವ ಮಾತನ್ನು ಕೇಳಲೆಂದು ಬಂದಿದ್ದರೋ, ಆ ಮಾತುಗಳು ಪ್ರಧಾನಿ ನರೇಂದ್ರ ಮೋದಿ ಅವರ ಬಾಯಿಯಿಂದ ಹೊರಬರಲೇ ಇಲ್ಲ!

ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಬಂದಿದ್ದ ಮೋದಿಯವರು, ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗಾ ತೆಗಳಿದರು, ಕೇಂದ್ರ ಸರಕಾರದ ಹಲವಾರು ಯೋಜನೆಗಳನ್ನು ಹರಿಯಬಿಟ್ಟರು, ಯಡಿಯೂರಪ್ಪನವರನ್ನು ವಾಚಾಮಗೋಚರವಾಗಿ ಹೊಗಳಿದರು. ಆದರೆ, ಮಹದಾಯಿ ನೀರು ಹಂಚಿಕೆ ಬಗ್ಗೆ ಒಂದೇ ಒಂದು ಮಾತನ್ನೂ ಆಡಲಿಲ್ಲ.

ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪನವರು ಕೃಷಿಗಾಗಿ 1 ಲಕ್ಷ ಕೋಟಿ ರುಪಾಯಿ ಮೀಸಲಿಡಲಿಡುವುದಾಗಿ ಕನಸು ಕಂಡಿದ್ದಾರೆ. ಇದೇ ಕನಸನ್ನು ಹೊಂದಿರುವ ಕೇಂದ್ರದಲ್ಲಿನ ಬಿಜೆಪಿ ಸರಕಾರ ಕೂಡ ರಾಜ್ಯದ ಸರಕಾರದ ಜೊತೆ ಕೈಜೋಡಿಸಿದರೆ ಏನಾಗುತ್ತದೆಂದು ಊಹಿಸಿ ಎಂದು ಭರ್ಜರಿ ಚಪ್ಪಾಳೆ ಗಿಟ್ಟಿಸಿದ ಮೋದಿ, ಮಹದಾಯಿ ಬಗ್ಗೆ ಏಕೆ ಪ್ರಸ್ತಾಪಿಸಲಿಲ್ಲ?

ಚಿತ್ರಗಳು : ಬೆಂಗಳೂರಿನಲ್ಲಿ ಮೋಡಿ ಮಾಡಿದ ಮೋದಿ

ಕೇಂದ್ರ ಸರಕಾರ ಮಹದಾಯಿ ವಿವಾದ ಬಗೆಹರಿಸುವಲ್ಲಿ ಮಧ್ಯಸ್ಥಿಕೆ ವಹಿಸುತ್ತಿಲ್ಲ, ಗೋವಾದಲ್ಲಿ ಬಿಜೆಪಿ ಸರಕಾರವಿದ್ದರೂ ಕರ್ನಾಟಕಕ್ಕೆ ಅದರ ಹಕ್ಕಾದ ನೀರು ದೊರಕಿಸಿಕೊಡಲು ಆಸಕ್ತಿ ತೋರುತ್ತಿಲ್ಲವೆಂದು ಕನ್ನಡಪರ ಹೋರಾಟಗಾರರು ಫೆಬ್ರವರಿ 4ರಂದು ಭಾನುವಾರ ಬೆಂಗಳೂರು ಬಂದ್ ಕರೆ ನೀಡಿತ್ತು. ಬಂದ್ ಗೆ ಅನುಮತಿ ಸಿಗದಿದ್ದರಿಂದ ಕರಾಳ ದಿನವನ್ನಾಗಿ ಆಚರಿಸಿದವು.

ವಾಟಾಳ್ ನೇತೃತ್ವದಲ್ಲಿ ಕರಾಳ ದಿನಾಚರಣೆ

ವಾಟಾಳ್ ನೇತೃತ್ವದಲ್ಲಿ ಕರಾಳ ದಿನಾಚರಣೆ

ನೂರಾರು ಕನ್ನಡ ಪರ ಹೋರಾಟಗಾರರು, ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಜಮಾಯಿಸಿದ್ದರು. ಅವರ ಜೊತೆ ಕನ್ನಡ ಲೇಖಕ, ಚಿಂತಕ ಚಂದ್ರಶೇಖರ ಪಾಟೀಲ, ಕನ್ನಡ ಚಿತ್ರರಂಗದ ಪರವಾಗಿ ಸಾರಾ ಗೋವಿಂದು, ಉತ್ತರ ಕರ್ನಾಟಕದ ಮಹದಾಯಿ ಹೋರಾಟಗಾರರು, ಪ್ರಧಾನಿಯವರಿಂದ ಮಹದಾಯಿ ಬಗ್ಗೆ ಕೇಳಲು ಉತ್ಸುಕರಾಗಿ ಕುಳಿತಿದ್ದರು.

ಮೌನ ವಹಿಸಿರುವ ಬಗ್ಗೆ ಕಾರಣವೂ ಹಲವಾರಿವೆ

ಮೌನ ವಹಿಸಿರುವ ಬಗ್ಗೆ ಕಾರಣವೂ ಹಲವಾರಿವೆ

ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಜಾಣತನದಿಂದ ಮಹದಾಯಿ ಬಗ್ಗೆ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಪ್ರಸ್ತಾಪಿಸದೆ ಜಾಣತನದಿಂದ ನುಣುಚಿಕೊಳ್ಳುತ್ತ ಬಂದಿದ್ದಾರೆ. ಇದಕ್ಕೆ ಕಾರಣಗಳೂ ಹಲವಾರಿವೆ. ಒಮ್ಮೆ ಮಹದಾಯಿ ಬಗ್ಗೆ ಬಾಯಿಬಿಟ್ಟು ನಾಲಿಗೆ ಸುಟ್ಟುಕೊಂಡಿರುವುದು ಇನ್ನೂ ಎಲ್ಲರ ಕಣ್ಣ ಮುಂದಿದೆ.

ಹುಬ್ಬಳ್ಳಿಯಲ್ಲಿ ಘಂಟಾಘೋಷವಾಗಿ ಸಾರಿದ್ದ ಯಡಿಯೂರಪ್ಪ

ಹುಬ್ಬಳ್ಳಿಯಲ್ಲಿ ಘಂಟಾಘೋಷವಾಗಿ ಸಾರಿದ್ದ ಯಡಿಯೂರಪ್ಪ

ಹುಬ್ಬಳ್ಳಿಯಲ್ಲಿ ನಡೆದಿದ್ದ 50ನೇ ದಿನದ ಪರಿವರ್ತನಾ ಸಮಾವೇಶದಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾಗವಹಿಸಿದ್ದ ಸಭೆಯಲ್ಲಿ ಯಡಿಯೂರಪ್ಪನವರು, ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ತಮಗೆ ಬರೆದಿದ್ದ ಪತ್ರವನ್ನು ಉಲ್ಲೇಘಿಸಿ, ಅವರು ಕುಡಿಯುವ ನೀರು ಬಿಡಲು ಒಪ್ಪಿದ್ದಾರೆ, ಇನ್ನು 15 ದಿನದಲ್ಲಿ ಈ ವ್ಯಾಜ್ಯವನ್ನು ಬಗೆಹರಿಸುತ್ತೇನೆ ಎಂದು ವಾಗ್ದಾನ ನೀಡಿದ್ದರು.

ತಿರುಗುಬಾಣವಾದ ಯಡಿಯೂರಪ್ಪನವರ ಮಾತು

ತಿರುಗುಬಾಣವಾದ ಯಡಿಯೂರಪ್ಪನವರ ಮಾತು

ಇದೇ ಮಾತೇ ಬಿಜೆಪಿಗೆ ತಿರುಗುಬಾಣವಾಗುತ್ತದೆಂದೆ ಯಾವ ನಾಯಕರೂ ಎಣಿಸಿರಲಿಲ್ಲ. ಗೋವಾ ಕಾಂಗ್ರೆಸ್ ಕ್ಯಾತೆ ತೆಗೆಯಿತು, ಪರಿಕ್ಕರ್ ಹಿಂದೇಟು ಹಾಕಿದರು. ಆಡಿದ ಮಾತು ನಡೆಸಿಕೊಡದ ಯಡಿಯೂರಪ್ಪನವರ ವಿರುದ್ಧ ಮಹದಾಯಿ ಹೋರಾಟಗಾರರು ತಿರುಗಿಬಿದ್ದರು. ಬೆಂಗಳೂರಿನಲ್ಲಿ ಕೂಡ ಬಿಜೆಪಿ ಕಚೇರಿಯ ಮುಂದೆ ಸತತ 5 ದಿನಗಳ ಕಾಲ ಕುಟುಂಬ ಸಮೇತರಾಗಿ ಬಂದು ಪ್ರತಿಭಟನೆ ನಡೆಸಿದರು.

ಅಮಿತ್ ಶಾ ಕೂಡ ಚಕಾರವೆತ್ತಿರಲಿಲ್ಲ

ಅಮಿತ್ ಶಾ ಕೂಡ ಚಕಾರವೆತ್ತಿರಲಿಲ್ಲ

ಚಿತ್ರದುರ್ಗದಲ್ಲಿ ಇತ್ತೀಚೆಗೆ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಭಾಗವಹಿಸಿದ್ದ ಅಮಿತ್ ಶಾ ಅವರು ಕೂಡ ಮಹದಾಯಿ ಬಗ್ಗೆ ಚಕಾರವೆತ್ತಿರಲಿಲ್ಲ. ಕೇಂದ್ರ ಸರಕಾರ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ನೀಡಿರುವ ಅನುದಾನಗಳು, ಆ ಅನುದಾನವನ್ನು ಕಾಂಗ್ರೆಸ್ ನಾಯಕರು ನುಂಗಿಹಾಕಿರುವ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿದಿದ್ದರು. ಆದರೆ, ಮಹದಾಯಿ ಸಮಸ್ಯೆ ಬಗೆಹರಿಸುವ ಬಗ್ಗೆ ಮಾತನಾಡಿರಲಿಲ್ಲ.

ಗೋವಾ ಸರಕಾರ ಬಿದ್ದುಹೋಗುವ ಅಪಾಯ

ಗೋವಾ ಸರಕಾರ ಬಿದ್ದುಹೋಗುವ ಅಪಾಯ

ಮಹದಾಯಿ ಸಮಸ್ಯೆ ಬಗೆಹರಿಸುವ ಬಗ್ಗೆ ವಾಗ್ದಾನ ನೀಡಿದರೆ, ಹುಲ್ಲಿನ ಕಡ್ಡಿಯ ಆಸರೆ ಪಡೆದಿರುವ ಗೋವಾದ ಬಿಜೆಪಿ ಸರಕಾರ ಬಿದ್ದುಹೋಗುವ ಅಪಾಯವಿದೆ. ಈ ಕಾರಣಕ್ಕಾಗಿಯೇ ಮಹದಾಯಿ ಬಗ್ಗೆ ಯಾವುದೇ ವಾಗ್ದಾನ ನೀಡದೆ ನರೇಂದ್ರ ಮೋದಿಯವರಾಗಲಿ, ಅಮಿತ್ ಶಾ ಅವರಾಗಲಿ ಜಾಣಮೌನ ವಹಿಸುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ದೇಶದ ಕನಸು ಕಾಣುತ್ತಿರುವ ಬಿಜೆಪಿಗೆ ಗೋವಾ ಸರಕಾರ ಬೀಳುವುದು ಬೇಕಿಗಿಲ್ಲ.

ಕರ್ನಾಟಕದಲ್ಲಿ ಬಿಜೆಪಿಗೆ ಮಾರಕವೋ, ಪೂರಕವೋ?

ಕರ್ನಾಟಕದಲ್ಲಿ ಬಿಜೆಪಿಗೆ ಮಾರಕವೋ, ಪೂರಕವೋ?

ಮಹಾದಾಯಿ ನೀರು ಉತ್ತರ ಕರ್ನಾಟಕಕ್ಕೆ ಹರಿಯುತ್ತದೆಂದು ಕಳೆದ ಎರಡು ವರ್ಷಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಇದು ಮಹದಾಯಿ ನ್ಯಾಯಾಧೀಕರಣದ ಮುಂದೆ ವಿಚಾರಣೆಯಲ್ಲಿದೆ. ಈ ಸಂದರ್ಭದಲ್ಲಿ ಯಾವುದೇ ಪಕ್ಷ ಕೂಡ ವಾಗ್ದಾನ ನೀಡಲು ಸಾಧ್ಯವಿಲ್ಲ. ಆದರೆ, ಬಿಜೆಪಿ ನಾಯಕರು ಇಚ್ಛಾಶಕ್ತಿ ವ್ಯಕ್ತಪಡಿಸಿದರೆ ಇದು ಖಂಡಿತ ಸಾಧ್ಯ ಎಂಬುದು ರೈತರ ಅನಿಸಿಕೆ. ಇದು ಕರ್ನಾಟಕದಲ್ಲಿ ಬಿಜೆಪಿಗೆ ಮಾರಕವೋ, ಪೂರಕವೋ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+