'ಎಲ್ಲ ವಾರ್ಡ್ ಗಳಲ್ಲಿ ತುರ್ತು ಸೇವಾ ವಾಹನಗಳಿಗೆ ಸ್ಥಳಾವಕಾಶ ಒದಗಿಸಿ'
ಬೆಂಗಳೂರು, ಡಿಸೆಂಬರ್ 15 : ಬೆಂಗಳೂರಿನ ಎಲ್ಲ ವಾರ್ಡ್ ಗಳಲ್ಲಿ ತುರ್ತು ಸೇವಾ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಒದಗಿಸುವಂತೆ ಅಗ್ನಿಶಾಮಕ ಇಲಾಖೆ ಬಿಬಿಎಂಪಿಗೆ ಪತ್ರ ಬರೆದಿದೆ.
ಮಿತಿ ಮೀರಿದ ಸಂಚಾರ ದಟ್ಟಣೆಯಿಂದ ಅಗ್ನಿಶಾಮಕ ದಳದ ವಾಹನಗಳು ತುರ್ತು ಸೇವೆಗೆ ಸೂಕ್ತ ಸಮಯದಲ್ಲಿ ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೆಂಗಳೂರಿನ ಎಲ್ಲ ವಾರ್ಡ್ ಗಳಲ್ಲಿ ತುರ್ತು ಸೇವಾ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಒದಗಿಸುವಂತೆ ಅಗ್ನಿಶಾಮಕ ಇಲಾಖೆ ಬಿಬಿಎಂಪಿಗೆ ಪತ್ರ ಬರೆದಿದೆ.
ಬೆಂಕಿಯಂತಹ ಅವಘಡಗಳು ಸಂಭಿವಿಸಿದಾಗ ಬುಲೆಟ್ ಬೈಕ್, ಜೀಪ್, ಟೆಂಪೊ, ನೀರಿನ ಟ್ಯಾಂಕ್ ಗಳಂತಹ ಅಗ್ನಿಶಾಮಕ ತುರ್ತು ವಾಹನಗಳು ನಿಗದಿತ ಪ್ರದೇಶವನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಯಾವುದೇ ಬೆಂಕಿ ಅನಾಹುತ ಸಂಭವಿಸಿದಾಗ ಮೊಟ್ಟ ಮೊದಲು ಅಗ್ನಿಶಾಮಕ ವಾಹನಗಳೇ ಸ್ಥಳಕ್ಕೆ ತಲುಪಬೇಕು.

ಆದರೆ ಇಕ್ಕಟ್ಟಾದ ರಸ್ತೆ ಹಾಗೂ ಸಂಚಾರ ದಟ್ಟಣೆಯಿಂದ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ಮನವರಿಕೆ ಮಾಡಿದೆ.ಇತ್ತೀಚೆಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಮೇಯರ್ ಜತೆಗೆ ನಡೆಸಿದ ಸಭೆಯಲ್ಲಿ ಈ ಕುರಿತು ಬಿಬಿಎಂಪಿಗೆ ಮನವರಿಕೆ ಮಾಡಿಕೊಟ್ಟಿದ್ದು, ತುರ್ತು ಸಂದರ್ಭಗಳಲ್ಲಿ ವಾಹನಗಳು ಎಲ್ಲೆಂದರಲ್ಲಿ ಸಂಚರಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಆಯಾ ವಾರ್ಡ್ ಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಅತ್ಯಂತ ತುರ್ತಾಗಿ ಜನರಿಗೆ ಸ್ಪಂದಿಸಬಹುದು ಎಂದು ವಿವರಿಸಲಾಗಿದೆ.
ಅಗ್ನಿ ಶಾಮಕ ಇಲಾಖೆ ನಿಯಮಾವಳಿ ಪ್ರಕಾರ ಪ್ರತಿ ಐವತ್ತು ಸಾವಿರ ಜನರಿಗೆ ಅಥವಾ ಪ್ರತಿ ಎರಡು ಕಿ.ಮೀ ಗಳ ವ್ಯಾಪ್ತಿಯಲ್ಲಿ ಒಂದು ಅಗ್ನಿಶಾಮಕ ಠಾಣೆ ಇರಬೇಕು. ಆದರೆ ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಈವರೆಗೆ ಕೇವಲ 20 ಅಗ್ನಿಶಾಮಕ ಠಾಣೆಗಳನ್ನು ಮಾತ್ರ ಸ್ಥಾಪಿಸಲಾಗಿದೆ.
ಇಲ್ಲಿರುವ ಎತ್ತರದ ಕಟ್ಟಡಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು ಹಾಗೂ ಬೃಹತ್ ಕಚೇರಿ ಕಟ್ಟಡಗಳಿಗೆ ಸೂಕ್ತ ಸೇವೆ ಒದಗಿಸಬೇಕಾದರೆ ಈಗಿರುವ ಅಗ್ನಿಶಾಮಕಗಳ ಸಂಖ್ಯೆ ದುಪ್ಪಟ್ಟಾಗಬೇಕು. ಆದರೆ ಬೆಂಗಳೂರು ನಗರದಲ್ಲಿ ಅಂತಹ ಅವಕಾಶಗಳಿಲ್ಲ.ಆದ್ದರಿಂದ ಆಯಾ ವಾರ್ಡ್ ಗಳಲ್ಲಿ ತುರ್ತು ಸೇವಾ ವಾಹನಗಳನ್ನು ಅಳವಡಿಸುವುದು ಅಗತ್ಯವಾಗಿದೆ ಎಂದು ಅಗ್ನಿಶಾಮಕ ಇಲಾಖೆ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications