ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಗೌರವ್ ಗುಪ್ತ
ಬೆಂಗಳೂರು, ಸೆಪ್ಟೆಂಬರ್ 11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿಯಾಗಿ ಗೌರವ್ ಗುಪ್ತ ಅಧಿಕಾರ ಸ್ವೀಕರಿಸಿದರು. ಚುನಾವಣೆ ನಡೆದು ಹೊಸ ಕೌನ್ಸಿಲ್ ಅಸ್ತಿತ್ವಕ್ಕೆ ಬರುವ ತನಕ ಬಿಬಿಎಂಪಿಯಲ್ಲಿ ಅಧಿಕಾರಿಗಳ ಆಡಳಿತ ನಡೆಯಲಿದೆ.
ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಸಮ್ಮುಖದಲ್ಲಿ ಗೌರವ್ ಗುಪ್ತ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಚುನಾವಣೆ ನಡೆದು ಹೊಸ ಮೇಯರ್ ಆಯ್ಕೆಯಾಗುವ ತನಕ ಆಡಳಿತಾಧಿಕಾರಿ ಪಾಲಿಕೆ ಆಡಳಿತ ನೋಡಿಕೊಳ್ಳಲಿದ್ದಾರೆ.
1990ನೇ ಬ್ಯಾಚ್ ಐಎಎಸ್ ಅಧಿಕಾರಿ ಗೌರವ್ ಗುಪ್ತ. ಬೃಹತ್ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿಯೂ ಅವರು ಮುಂದುವರೆಯಲಿದ್ದಾರೆ. ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ನಿರೀಕ್ಷೆ ಇದೆ.
ಬಿಬಿಎಂಪಿಯ ಅಧಿಕಾರ ಇನ್ನು ಅಧಿಕಾರಿಗಳ ಕೈಯಲ್ಲಿಯೇ ಇರಲಿದೆ. ಈ ಹಿಂದೆ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿ ನೇಮಿಸಲಾಗಿತ್ತು. ಈಗ ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಆಡಳಿತಾಧಿಕಾರಿ ನೇಮಕವಾಗಿದೆ.

ಚುನಾಯಿತ ಪ್ರತಿನಿಧಿಗಳ ಅವಧಿ ಅಂತ್ಯ
2015ರಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ 198 ಸದಸ್ಯರ ಅವಧಿ ಸೆಪ್ಟೆಂಬರ್ 10ಕ್ಕೆ ಅಂತ್ಯವಾಗಿದೆ. ಹೊಸದಾಗಿ ಚುನಾವಣೆ ನಡೆದು, ಮೇಯರ್ ಮತ್ತು ಉಪ ಮೇಯರ್ ಆಯ್ಕೆ ನಡೆಯುವ ತನಕ ಬಿಬಿಎಂಪಿಯ ಆಡಳಿತವನ್ನು ಆಡಳಿತಾಧಿಕಾರಿ ಗೌರವ್ ಗುಪ್ತ ನೋಡಿಕೊಳ್ಳಲಿದ್ದಾರೆ.

ಅಧಿಕಾರಿಗಳ ಆಡಳಿತ
ಬಿಬಿಎಂಪಿ ಕಚೇರಿಯಲ್ಲಿ ಇನ್ನು ಮುಂದೆ ಸದಸ್ಯರ ಓಡಾಟ ಇರುವುದಿಲ್ಲ, ಅವರ ಹಿಂಬಾಲಕರ ಗದ್ದಲಗಳು ಇರುವುದಿಲ್ಲ. ಮೇಯರ್, ಉಪ ಮೇಯರ್, ಪ್ರತಿಪಕ್ಷ ನಾಯಕ, ಸ್ಥಾಯಿ ಸಮಿತಿಗಳ ಅಧ್ಯಕ್ಷರಿಗೆ ನೀಡಿದ ವಾಹನ, ಸಿಬ್ಬಂದಿಗಳನ್ನು ವಾಪಸ್ ಪಡೆಯಲಾಗುತ್ತದೆ. ಅಧಿಕಾರಿಗಳು ಪಾಲಿಕೆ ಆಡಳಿತ ನೋಡಿಕೊಳ್ಳಲಿದ್ದಾರೆ.

ಸದ್ಯಕ್ಕಿಲ್ಲ ಚುನಾವಣೆ
ಬಿಬಿಎಂಪಿ ಚುನಾವಣೆ ಸದ್ಯಕ್ಕೆ ನಡೆಯುವುದಿಲ್ಲ. ಕರ್ನಾಟಕ ಸರ್ಕಾರ ಬಿಬಿಎಂಪಿ ವಾರ್ಡ್ಗಳ ಸಂಖ್ಯೆಯನ್ನು 198 ರಿಂದ 225ಕ್ಕೆ ಹೆಚ್ಚಿಸಲು ಮುಂದಾಗಿದೆ. ಬಿಬಿಎಂಪಿ ಕಾಯ್ದೆಗೆ ಸಮಗ್ರವಾದ ತಿದ್ದುಪಡಿ ತರಬೇಕು. ಅದಕ್ಕಾಗಿ ಅಧಿವೇಶನದಲ್ಲಿ ಅದನ್ನು ಮಂಡಿಸಲಾಗುತ್ತದೆ. ಈ ಬಗ್ಗೆ ಚರ್ಚೆ ನಡೆದು, ಸದನದ ಒಪ್ಪಿಗೆ ಸಿಗಬೇಕು. ಡಿಸೆಂಬರ್ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ.

ಮೇಯರ್ ಅವಧಿಯೂ ಹೆಚ್ಚಳ
ಬಿಬಿಎಂಪಿ ಕಾಯ್ದೆಗೆ ತಿದ್ದುಪಡಿ ತಂದರೆ ಬಿಬಿಎಂಪಿ ವಲಯಗಳ ಸಂಖ್ಯೆ 8 ರಿಂದ 12ಕ್ಕೆ ಏರಿಕೆಯಾಗಲಿದೆ. ಮೇಯರ್ ಮತ್ತು ಉಪ ಮೇಯರ್ ಅವಧಿ 12 ತಿಂಗಳಿನಿಂದ 30 ತಿಂಗಳಿಗೆ ಏರಿಕೆಯಾಗಲಿದೆ. ಬಿಬಿಎಂಪಿಗೆ ಹೆಚ್ಚು ಹಳ್ಳಿಗಳು ಸೇರಿದರೆ ವಾರ್ಡ್ಗಳ ಮರುವಿಂಗಡನೆ, ಮತದಾರರ ಪಟ್ಟಿ ತಯಾರಿ ಸೇರಿದಂತೆ ಅನೇಕ ಕೆಲಸಗಳು ನಡೆಯಬೇಕಿದೆ.












Click it and Unblock the Notifications