ಇಂಧನ ಖಾತೆ ಸಿಗಲೆಂದು ಕಾಂಗ್ರೆಸ್ಸಿಗರು ಶುಭ ಹಾರೈಸಿದ್ದರು: ಮುನಿರತ್ನ
ಬೆಂಗಳೂರು, ನ 5: ಆರ್.ಆರ್.ನಗರದ ಅಸೆಂಬ್ಲಿ ಉಪಚುನಾವಣೆ ಮುಗಿದ ನಂತರವೂ ಕಾಂಗ್ರೆಸ್ ವಿರುದ್ದ ವಾಗ್ದಾಳಿ ಮುಂದುವರಿಸಿರುವ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ, ನನ್ನನ್ನು ಬಿಜೆಪಿಗೆ ಕಳುಹಿಸಿದ್ದು ಕಾಂಗ್ರೆಸ್ಸಿಗರೇ ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಬಿಟ್ಟು ನಾವೆಲ್ಲಾ ಬಿಜೆಪಿಗೆ ಹೋದಾಗ, ನಮಗೆ ಶುಭ ಕೋರಿದವರು ಇದ್ದಾರೆ. ನಿಮಗೆಲ್ಲಾ ಒಳ್ಳೆಯದಾಗಲಿ, ಒಳ್ಳೆ ಸ್ಥಾನ ನಿಮಗೆ ಸಿಗಲಿ ಎಂದು ಹಾರೈಸಿದ್ದಾರೆ. ನಮಗೆ ಆಶೀರ್ವಾದ ಮಾಡಿ ಬಿಜೆಪಿಗೆ, ಹಿರಿಯ ಕಾಂಗ್ರೆಸ್ ಮುಖಂಡರು ಕಳುಹಿಸಿದ್ದಾರೆ"ಎಂದು ಮುನಿರತ್ನ ಹೇಳಿದ್ದಾರೆ.
"ನನಗಂತೂ ಅತ್ಯಂತ ಸ್ಪಷ್ಟವಾಗಿ ನೀನು ಪವರ್ ಮಿನಿಸ್ಟರ್ ಆಗಬೇಕೆಂದು ಹೇಳಿ ಕಳುಹಿಸಿದ್ದಾರೆ. ಯಡಿಯೂರಪ್ಪನವರು ಕೊಟ್ಟ ಮಾತನ್ನು ತಪ್ಪುವುದಿಲ್ಲ"ಎಂದು ಹೇಳಿರುವ ಮುನಿರತ್ನ, ಆ ಕಾಂಗ್ರೆಸ್ ಮುಖಂಡರ ಹೆಸರನ್ನು ಹೇಳಲು ನಿರಾಕರಿಸಿದ್ದಾರೆ.

"ಈ ಭೂಮಂಡಲದಲ್ಲಿ ಯಾವ ದೇವರನ್ನು ಅವರು ಹೆಚ್ಚಾಗಿ ನಂಬುತ್ತಾರೋ, ಅಲ್ಲಿಗೆ ಬಂದು ಪ್ರಮಾಣ ಮಾಡಲು ಸಿದ್ದನಿದ್ದೇನೆ. ದಿನಾಂಕ, ಸಮಯ ಅವರು ನಿಗದಿ ಪಡಿಸಲಿ"ಎಂದು ಡಿ.ಕೆ.ಶಿವಕುಮಾರ್ ಗೆ ಪರೋಕ್ಷವಾಗಿ ಮುನಿರತ್ನ ಚಾಲೆಂಜ್ ಮಾಡಿದ್ದಾರೆ.
"ನಕಲಿ ವೋಟರ್ ಕಾರ್ಡ್ ಇದೆ ಎಂದು ಚುನಾವಣಾ ಆಯೋಗವೂ ಹೇಳಿಲ್ಲ, ಸರ್ವೋಚ್ಚ ನ್ಯಾಯಾಲಯವೂ ಹೇಳಿಲ್ಲ. ಇವರಿಗೆ ಯಾರು ಹೇಳಿದ್ದು ಎನ್ನುವುದೂ ಅಲ್ಲೇ ತೀರ್ಮಾನವಾಗಿ ಹೋಗಲಿ"ಎಂದು ಮುನಿರತ್ನ ಹೇಳಿದ್ದಾರೆ.
"ಕೊರೊನಾ ಹಾವಳಿಯ ಸಂದರ್ಭದಲ್ಲಿ ಶೇ.45ರಷ್ಟು ಮತದಾನವಾಗಿದ್ದು ಹೆಚ್ಚು. ವಾರದ ಮಧ್ಯದಲ್ಲಿ ಚುನಾವಣೆ ನಡೆದಿದೆ. ಹಲವಾರು ಕಾರ್ಖಾನೆಗಳು ಬಂದ್ ಆಗಿವೆ"ಎಂದು ಮುನಿರತ್ನ ಹೇಳಿದ್ದಾರೆ.












Click it and Unblock the Notifications