Bengaluru Second Airport: ಹೊಸೂರು ಏರ್ಪೋರ್ಟ್ ಯೋಜನೆಗೆ ವಿಜಯ್ ಬ್ರೇಕ್? ನಗರದ 2ನೇ ವಿಮಾನ ನಿಲ್ದಾಣಕ್ಕೆ ಬಿಗ್ ಬೂಸ್ಟ್!
Bengaluru Second Airport: ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತೊಡಕಾಗಿರುವ ಪ್ರಮುಖ ವಿಷಯವೊಂದು ಬಗೆಹರಿಯುವ ಸಾಧ್ಯತೆ ಇದೆ. ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಈ ಹಿಂದಿನ ಎಂ.ಕೆ ಸ್ಟಾಲಿನ್ ಅವರ ಆಡಳಿತ ಅವಧಿಯಲ್ಲಿ ಜಾರಿ ಮಾಡಲು ಮುಂದಾಗಿದ್ದ ಹಲವು ಯೋಜನೆಗಳನ್ನು ಕೈಬಿಟ್ಟಿದೆ. ಅಲ್ಲದೆ ಹಲವು ಈ ಹಿಂದಿನ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಹಲವು ನಿರ್ಧಾರಗಳನ್ನು ಕೈಬಿಡುವುದಕ್ಕೆ ಮುಂದಾಗಿದೆ. ಹೀಗಾಗಿ, ಉದ್ದೇಶಿತ ಹೊಸೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯನ್ನು ಸಹ ಕೈಬಿಡುವ ಸಾಧ್ಯತೆ ಇದೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ ಮೊದಲನೆಯದಾಗಿ ಹೊಸೂರಿನಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಈ ಭಾಗದಲ್ಲಿ ಎರಡು ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ರೈತರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ಹೊಸೂರು ಭಾಗದಲ್ಲಿ ಮೆಟ್ರೋ ವಿಸ್ತರಣೆ ಅಥವಾ ಅಭಿವೃದ್ಧಿ ಯೋಜನೆಯ ಬಗ್ಗೆಯೂ ಚರ್ಚೆ ನಡೆದಿದೆ. ಈ ಕಾರಣಕ್ಕೆ ಉದ್ದೇಶಿತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಯನ್ನು ಕೈ ಬಿಡುವ ಸಾಧ್ಯತೆ ಇದೆ. ಇದು ಪರೋಕ್ಷವಾಗಿ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಲಾಭವಾಗಲಿದೆ. ಹೇಗೆ ಎನ್ನುವ ಲೆಕ್ಕಾಚಾರ ಇಲ್ಲಿದೆ.
ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹಲವು ತೊಡಕುಗಳು ಎದುರಾಗಿತ್ತು. ಅದರಲ್ಲಿ ತಮಿಳುನಾಡು ಸರ್ಕಾರವು ಬೆಂಗಳೂರಿನಿಂದ ಕೆಲವೇ ಕಿ. ಮೀ ದೂರದಲ್ಲಿ ಇರುವ ತಮಿಳುನಾಡಿನ ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆಯೂ ಒಂದು. ಈ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಮೂಲಕ ಬ್ರ್ಯಾಂಡ್ ಬೆಂಗಳೂರಿನ ಲಾಭ ಹಾಗೂ ಬೆಂಗಳೂರಿನಿಂದ ಪ್ರಯಾಣಿಸುವವರು ಹೊಸೂರು ವಿಮಾನ ನಿಲ್ದಾಣಕ್ಕೆ ಬರುವಂತೆ ಮಾಡುವ ಲೆಕ್ಕಾಚಾರವನ್ನೂ ಸಹ ತಮಿಳುನಾಡು ಮಾಡಿಕೊಂಡಿತ್ತು.

ಇದಕ್ಕೂ ಮೊದಲು ಬೆಂಗಳೂರಿನ ನಮ್ಮ ಮೆಟ್ರೋವನ್ನು ತಮಿಳುನಾಡಿನ ಹೊಸೂರಿಗೆ ವಿಸ್ತರಣೆ ಮಾಡುವಂತೆ ತಮಿಳುನಾಡು ಸರ್ಕಾರವು ಮನವಿ ಮಾಡಿತ್ತು. ಆದರೆ, ಈ ಮನವಿಗೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾದ ಮೇಲೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿತ್ತು.
ಸ್ಟಾಲಿನ್ ಸರ್ಕಾರದ ಯೋಜನೆಗಳನ್ನು ಕೈಬಿಟ್ಟ ವಿಜಯ್ ಸರ್ಕಾರ
ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು, ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಡಿಎಂಕೆ ಸರ್ಕಾರದ ಅವಧಿಯಲ್ಲಿ ಅನುಮೋದನೆ ಪಡೆದಿದ್ದ 246 ಕೋಟಿ ರೂಪಾಯಿ ಮೌಲ್ಯದ 46 ದೇವಾಲಯ ಸಂಬಂಧಿತ ಯೋಜನೆಗಳನ್ನು ಅಧಿಕೃತವಾಗಿ ರದ್ದುಗೊಳಿಸಿದೆ. ಮದುವೆ ಮಂಟಪಗಳು, ವಾಣಿಜ್ಯ ಸಂಕೀರ್ಣಗಳು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ (HR&CE) ಸ್ಥಗಿತಗೊಳಿಸಿದೆ.
ಈ ಯೋಜನೆಗಳನ್ನು ರದ್ದುಗೊಳಿಸಲು ಕಾನೂನು ಸಂಬಂಧಿತ ಅಡೆತಡೆಗಳು, ದೇವಾಲಯಗಳ ಮೇಲೆ ಉಂಟಾಗುವ ಆರ್ಥಿಕ ಹೊರೆ ಹಾಗೂ ದೇವಾಲಯದ ನಿಧಿಯನ್ನು ಧಾರ್ಮಿಕ ಮತ್ತು ಭಕ್ತಿಪರ ಉದ್ದೇಶಗಳಿಗೆ ಮಾತ್ರ ಕಟ್ಟುನಿಟ್ಟಾಗಿ ಬಳಸಬೇಕು ಎಂಬ ಕಾರಣಗಳನ್ನು ವಿಜಯ್ ಸರ್ಕಾರ ಪ್ರಮುಖವಾಗಿ ಉಲ್ಲೇಖಿಸಿದೆ. ಇದರೊಂದಿಗೆ ಮುಖ್ಯವಾಗಿ ವಿಜಯ್ ಆಡಳಿತವು ರಾಜ್ಯ ಹಣಕಾಸಿನ ಕುರಿತು 120 ಪುಟಗಳ ಶ್ವೇತಪತ್ರವನ್ನು ಬಿಡುಗಡೆ ಮಾಡಿದೆ. ಹಿಂದಿನ ಡಿಎಂಕೆ ಆಳ್ವಿಕೆಯಲ್ಲಿ ರಾಜ್ಯದ ಬಾಕಿ ಇರುವ ನೇರ ಸಾಲವು 13 ಲಕ್ಷ ಕೋಟಿ ರೂ. ಹೆಚ್ಚು ದ್ವಿಗುಣಗೊಂಡಿದೆ ಎಂದು ಆರೋಪಿಸಿದೆ. ಇದು ರಾಜ್ಯ ವಿಧಾನಸಭೆಯಲ್ಲಿ ಆಡಳಿತಾರೂಢ ಟಿವಿಕೆ ಮತ್ತು ಡಿಎಂಕೆ ವಿರೋಧ ಪಕ್ಷದ ನಡುವೆ ತೀವ್ರ ಚರ್ಚೆಗಳಿಗೆ ಕಾರಣವಾಗಿತ್ತು.
ಈ ಎಲ್ಲ ಕಾರಣಗಳಿಂದ ತಮಿಳುನಾಡು ಸರ್ಕಾರವು ಹೊಸೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡುವ ಸಾಧ್ಯತೆಯೂ ಇದೆ.














Click it and Unblock the Notifications