ದೇವಸ್ಥಾನದಲ್ಲಿ ದಲಿತ ವಿಧ್ಯಾರ್ಥಿ ಮೇಲೆ ಹಲ್ಲೆ
ಬೆಂಗಳೂರು ಗ್ರಾಮಾಂತರ, ನ.12: ದೇವಸ್ಥಾನದಲ್ಲಿಯೇ ದಲಿತ ವಿದ್ಯಾರ್ಥಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು ವಿಜಯಪುರದಲ್ಲಿ ಕೆಲ ದಿನಗಳ ಹಿಂದೆ ನಡೆದಿದೆ.
ವಿಜಯಪುರ ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯಕ್ಕೆ ದಿಲೀಪ್ ಎಂಬುವರು ತೆರಳಿದ್ದಾಗ ದೇವಾಲಯದ ಸಮಿತಿ ಮುಖ್ಯಸ್ಥ ಹಾಗೂ ಆತನ ಸಂಗಡಿಗರು ಹಲ್ಲೆ ಮಾಡಿದ್ದಾರೆ.
ದೇವಾಲಯಕ್ಕೆ ತೆರಳಿದ್ದ ದಿಲೀಪ್ ಮೊಬೈಲ್ಗೆ ಕರೆಯೊಂದು ಬಂದಿದೆ. ದೇವಸ್ಥಾನದಲ್ಲಿ ಮೊಬೈಲ್ ಬಳಸಬಾರದೆಂದು ಪೂಜಾರಿ ಹೇಳಿದ್ದಾರೆ. ಸರಿಯೆಂದು ದಿಲೀಪ್ ದೇವಾಲಯದಿಂದ ಹೊರಗೆ ಹೋಗುವಾಗ ಅಲ್ಲಿಯೇ ಇದ್ದ ಸಮಿತಿ ಮುಖ್ಯಸ್ಥ ಪ್ರಕಾಶ್ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿರುವುದು ಕಂಡು ಪ್ರಶ್ನೆ ಮಾಡಿದ್ದಾನೆ ದಿಲೀಪ್.

ಇದರಿಂದ ಕೋಪಗೊಂಡ ಪ್ರಕಾಶ್ ದಿಲೀಪ್ಗೆ ಅವಾಚ್ಯವಾಗಿ ಬೈದಿದ್ದಾನೆ. ಇದರಿಂದ ಕೋಪಗೊಂಡ ದಿಲೀಪ್ ಎದುರು ಮಾತನಾಡಿದ್ದಾನೆ, ಕೂಡಲೇ ಪ್ರಕಾಶ್ ದಿಲೀಪ್ ಮೇಲೆ ಹಲ್ಲೆ ಮಾಡಿದ್ದಾನೆ, ಇದನ್ನು ದಿಲೀಪ್ ಪ್ರತಿರೋಧಿಸಿದಾಗ ಪ್ರಕಾಶ್ನ ಸಂಗಡಿಗರು ಒಟ್ಟು ಸೇರಿ ದೇವಾಲಯದ ಒಳಭಾಗಕ್ಕೆ ದಿಲೀಪ್ನನ್ನು ಎಳೆದುಕೊಂಡು ಹೋಗಿ ಕೊಳವೆ ಪೈಪ್ ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ.
ದೇವಸ್ಥಾನದ ಹೊರಗೆ ಇದ್ದ ದಿಲೀಪ್ರ ಅಣ್ಣ ಬಿಡಿಸಲು ಹೋದಾಗ ಆತನ ಮೇಲೆಯೂ ಹಲ್ಲೆ ಮಾಡಿದ್ದಾರೆ. ಪ್ರಕಾಶ್ ಜಾತಿ ನಿಂದನೆ ಸಹ ಮಾಡಿದ್ದಾನೆಂದು ದಿಲೀಪ್ರ ತಂದೆ, ವಕೀಲ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಘಟನೆ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಏಳು ಮಂದಿಯ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಾಗಿದ್ದು, ಪ್ರಕಾಶ್, ಆನಂದ್ ಹಾಗೂ ಮಂಜುನಾಥ್ ಅವರುಗಳನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

'ಒನ್ ಇಂಡಿಯಾ ಕನ್ನಡ'ದ ಜೊತೆ ಮಾತನಾಡಿದ ದಿಲೀಪ್ ತಂದೆ ನಾರಾಯಣಸ್ವಾಮಿ, ''ಮಗನಿಗೆ ಅಮಾನಷವಾಗಿ ಹಲ್ಲೆ ಮಾಡಲಾಗಿದೆ. ನನ್ನ ಪತ್ನಿ ಮಂಜುಳಾ ಮಾಜಿ ಪುರಸಭಾ ಅಧ್ಯಕ್ಷೆಯಾಗಿದ್ದು ಅವರು ಮಗನನ್ನು ಬಿಡಿಸಲು ಹೋದಾಗ ಅವರ ಮುಂದೆಯೇ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಲಾಗಿದೆ. ಮಗನಿಗೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಪೈಪ್ಗಳಿಂದ ಹೊಡೆದು, ಆತನ ಕತ್ತಿಗೆ ಟವೆಲ್ನಿಂದ, ವೈರ್ನಿಂದ ಬಿಗಿದು ಉಸಿರುಗಟ್ಟಿಸಲು ಯತ್ನಿಸಿದ್ದಾರೆ'' ಎಂದಿದ್ದಾರೆ.
''ಪ್ರಕರಣದ ಮುಖ್ಯ ಆರೋಪಿ ಪ್ರಕಾಶ್ ಮೀಟರ್ ಬಡ್ಡಿ ದಂಧೆಕೋರನಾಗಿದ್ದು, ಸರ್ಕಾರಿ ಜಾಗದಲ್ಲಿ ದೇವಾಲಯ ಕಟ್ಟಿದ್ದಾನೆ. ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ಘಟನೆ ನಡೆದ ಬಳಿಕ ಆರೋಪಿ ಕಡೆಯವರು ಹಣ ನೀಡಿ ರಾಜಿ ಸಂಧಾನಕ್ಕೆ ಬಂದಿದ್ದರು. ಆದರೆ ನಾವು ಹಣ ನಿರಾಕರಿಸಿದೆವು ಹಾಗಾಗಿ, ನಾವು ದೂರು ನೀಡಿದ ಎರಡು ದಿನದ ಬಳಿಕ ಪ್ರಕಾಶ್ನ ಅಣ್ಣ ನನ್ನ ಮೇಲೆ ಪ್ರತಿದೂರು ನೀಡಿದ್ದಾನೆ. ಪೊಲೀಸರು ಸಂತ್ರಸ್ತರಾದ ನಮ್ಮ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಬಂಧಿತರಲ್ಲಿ ಒಬ್ಬನಾಗಿರುವ ಆನಂದ್ ಎಂಬಾತನನ್ನು ರಾಜಕೀಯ ಪ್ರಭಾವಕ್ಕೆ ಮಣಿದು ಬಿಡುಗಡೆ ಮಾಡಿದ್ದಾರೆ'' ಎಂದು ಆರೋಪಿಸಿದ್ದಾರೆ.
ಸಂತ್ರಸ್ತರ ಮೇಲೆ ದಾಖಲಿಸಲಾಗಿರುವ ಎಫ್ಐಆರ್ ಅನ್ನು ರದ್ದು ಮಾಡಬೇಕೆಂದು ಒತ್ತಾಯಿಸಿ ಘಟನೆಯನ್ನು ಖಂಡಿಸಿ ಬಿಎಸ್ಪಿ ಪ್ರತಿಭಟನೆಯನ್ನು ನವೆಂಬರ್ 12 ರಂದು ಹಮ್ಮಿಕೊಂಡಿತ್ತು. ಆದರೆ, ಮಳೆ ಹೆಚ್ಚಾದ ಕಾರಣ ಪ್ರತಿಭಟನೆಯನ್ನು ಮುಂದೂಡಲಾಗಿದೆ.











Click it and Unblock the Notifications