ನಮ್ಮ ರಾಜ್ಯದಲ್ಲೂ ಉಚಿತ ಕೊರೋನಾ ವ್ಯಾಕ್ಸಿನ್ ಕೊಡ್ತೀವಿ: ಶ್ರೀರಾಮುಲು
ಬೆಂಗಳೂರು, ಅಕ್ಟೋಬರ್ 24: ನಮ್ಮ ರಾಜ್ಯದಲ್ಲಿಯೂ ಉಚಿತವಾಗಿ ಕೊರೋನಾ ವೈರಸ್ ಲಸಿಕೆ ಕೊಡುತ್ತೇವೆ ಎಂದು ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.
ಬೆಂಗಳೂರಿನ ಆರ್ ಆರ್ ನಗರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಶನಿವಾರ ಜಾಲಹಳ್ಳಿ ವಾರ್ಡ್ನಲ್ಲಿ ಪ್ರಚಾರ ನಡೆಸಿದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಈ ಭಾಗದ ಅಭಿವೃದ್ಧಿಗಾಗಿ ಮುನಿರತ್ನ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ರಾಜ್ಯದ ಜನತೆಗೆ ಉಚಿತವಾಗಿ ಕೊರೊನಾ ವೈರಸ್ ಲಸಿಕೆ ನೀಡುವ ಸಂಬಂಧ ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
ಜನರ ಜೀವದ ಪ್ರಶ್ನೆಯಾಗಿರುವುದರಿಂದ ಉಚಿತ ಲಸಿಕೆ ಸಿಗುತ್ತದೆ. ನಮ್ಮ ಸರ್ಕಾರಕ್ಕೆ ಜನರಿಗಿಂತ ದೊಡ್ಡದು ಯಾವುದೂ ಇಲ್ಲ. ಸಂದರ್ಭ ಬಂದರೆ ನಮ್ಮ ರಾಜ್ಯದಲೂ ಉಚಿತ ವ್ಯಾಕ್ಸಿನ್ ಸಿಗುತ್ತೆ. ಉಚಿತ ವ್ಯಾಕ್ಸಿನ್ ಕೊಡುವ ಬಗ್ಗೆ ಸಿಎಂ ಯಡಿಯೂರಪ್ಪ ಪ್ರಕಟಣೆ ಮಾಡುತ್ತಾರೆ ಎಂದಿದ್ದಾರೆ. ಮುಂದೆ ಓದಿ.

ವ್ಯಾಕ್ಸಿನ್ ತಾಕತ್ತಿ ವಿಷಯವಲ್ಲ
ಬಿಹಾರ ಬಿಜೆಪಿ ಪ್ರಣಾಳಿಕೆಯಲ್ಲಿ ಉಚಿತವಾಗಿ ಕೊರೋನಾ ವ್ಯಾಕ್ಸಿನ್ ಭರವಸೆ ವಿಚಾರದ ಬಗ್ಗೆ ಮಾತನಾಡಿದ ಅವರು, ಬಿಹಾರ ಪ್ರಣಾಳಿಕೆ ಬಗ್ಗೆ ನಾನು ಚರ್ಚೆ ಮಾಡಲು ಇಷ್ಟಪಡುವುದಿಲ್ಲ. ಲಸಿಕೆಯ ಬಗ್ಗೆ ಯಾರೂ ರಾಜಕಾರಣ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರು ತಾಕತ್ ಇದ್ರೆ ರಾಜ್ಯದಲ್ಲಿ ಉಚಿತ ಲಸಿಕೆ ಕೊಡಿ ಅಂತ ಸವಾಲು ಹಾಕಿದ್ದಾರೆ. ವ್ಯಾಕ್ಸಿನ್ ವಿಚಾರ ತಾಕತ್ತಿನ ವಿಷಯ ಅಲ್ಲ. ಜನರ ಉಳಿವು ಅಳಿವಿನ ವಿಷಯ. ಕೊರೋನಾ ನಿರ್ವಹಣೆಯನ್ನು ನಮ್ಮ ಸರ್ಕಾರ ಉತ್ತಮವಾಗಿ ನಿರ್ವಹಿಸಿದೆ ಎಂದು ಹೇಳಿದ್ದಾರೆ.

ಎರಡೂ ಕಡೆ ಬಿಜೆಪಿಗೆ ಜಯ
ಆರ್ ಆರ್ ನಗರದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಬೇಕು ಅನ್ನುವುದು ಅವರ ಪಕ್ಷದವರ ಮನಸ್ಸಿನಲ್ಲಿಯೇ ಇದೆ. ಆರ್ ಆರ್ ನಗರದಲ್ಲಿ ಮುನಿರತ್ನ ಮತ್ತು ಶಿರಾದಲ್ಲಿ ರಾಜೇಶ್ ಗೌಡ ಗೆಲುವು ಖಚಿತ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದಿದ್ದಾರೆ.

ಒಡೆದು ಆಳುವುದು ಕಾಂಗ್ರೆಸ್ ಕೆಲಸ
ಆರ್ ಆರ್ ನಗರ ಕ್ಷೇತ್ರದಲ್ಲಿ ರೆಡ್ಡಿ ವರ್ಸಸ್ ಒಕ್ಕಲಿಗ ಫೈಟ್ ಇದೆ ಎಂಬ ಅಭ್ಯರ್ಥಿ ಕುಸುಮಾ ತಂದೆ ಹನುಮಂತರಾಯಪ್ಪ ಮತ್ತು ಕಾಂಗ್ರೆಸ್ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಈಗಾಗಲೇ ಲಿಂಗಾಯತ ಸಮುದಾಯವನ್ನು ಒಡೆದು ಆಳೋದಿಕ್ಕೆ ಹೋಗಿತ್ತು. ಟಿಪ್ಪು ಜಯಂತಿಯನ್ನು ಆಚರಣೆಗೆ ತಂದು ಸ್ವಾಸ್ಥ್ಯವನ್ನು ಹಾಳು ಮಾಡಿದರು. ಈಗ ಹೊಸದಾಗಿ ಬೆಂಗಳೂರಿಗೆ ರೆಡ್ಡಿ-ಒಕ್ಕಲಿಗ ಅನ್ನೋದನ್ನು ತರ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು
Recommended Video

ಕಾಂಗ್ರೆಸ್ ಅವನತಿಗೆ ಕಾರಣ
ಕಾಂಗ್ರೆಸ್ ನಲ್ಲಿ ಈ ಸಂಸ್ಕೃತಿ ಇರುವುದರಿಂದಲೇ ಪಕ್ಷ ಇವತ್ತು ಹೀಗೆ ಆಗಿರುವುದು. ನಮ್ಮದೇಶ, ನಾವೆಲ್ಲ ಒಂದು ಅನ್ನುವ ಮನೋಭಾವ ಕಾಂಗ್ರೆಸ್ ನಲ್ಲಿ ಇಲ್ಲ. ಮನಸುಗಳನ್ನು ಒಡೆದು ಆಳುವುದು ಕಾಂಗ್ರೆಸ್ ಸಂಸ್ಕೃತಿ. ಇದು ನೀಚತನದ ಸಂಸ್ಕೃತಿ. ಕಾಂಗ್ರೆಸ್ ನ ಈ ಸಂಸ್ಕೃತಿ ರಾಜ್ಯಕ್ಕೆ ದೇಶಕ್ಕೆ ಮಾರಕ. ಕಾಂಗ್ರೆಸ್ ಪರಿಸ್ಥಿತಿ ಇವತ್ತು ಈ ರೀತಿ ಆಗಲು ಅದರ ಈ ನಡೆಗಳೇ ಕಾರಣ ಎಂದು ಟೀಕಿಸಿದರು.












Click it and Unblock the Notifications