ಬೆಂಗಳೂರಿಗರಿಗೆ ರಸ್ತೆ ಗುಂಡಿಗಳಿಂದ ಬಿಗ್ ರಿಲೀಫ್!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಎಷ್ಟು ಕಿರಿಕಿರಿ ನೀಡುತ್ತಿದೆಯೋ? ಅದೇ ಪ್ರಮಾಣದಲ್ಲಿ ತಲೆಬಿಸಿ ಕೊಡುವ ವಿಚಾರ ಅಂದ್ರೆ ರಸ್ತೆ ಗುಂಡಿಗಳು. ಮಳೆಬಂದರೆ ಗುಂಡಿ ಕಾಣದೆ ವಾಹನ ಸಮೇತ ಬೀಳುವ ಘಟನೆಗಳು, ಅಪಘಾತಗಳು ಸಾಮಾನ್ಯ. ಹೀಗಾಗಿ ರಸ್ತೆಗಿಳಿದವರೆಲ್ಲ ಗುಂಡಿಗಳಿಗೆ ಹಿಡಿಶಾಪ ಹಾಕುತ್ತಲೇ ಸಂಚರಿಸುತ್ತಿದ್ದರು.
ಈ ವಿಚಾರ ರಾಜ್ಯ ಸರ್ಕಾರಕ್ಕೂ ದೊಡ್ಡ ತಲೆನೋವಾದ ಕಾರಣ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಬೇಕು ಎಂದು ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.

ಇನ್ನು 15 ದಿನಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಯಾವುದೇ ಗುಂಡಿಗಳು ಕಣ್ಣಿಗೆ ಕಾಣಿಸಬಾರದು. ಎರಡು ವಾರಗಳ ನಂತರ ನಾನೇ ಖುದ್ದಾಗಿ ಇಡೀ ಬೆಂಗಳೂರು ನಗರವನ್ನು ಸುತ್ತಾಡಲಿದ್ದೇನೆ. ಆಗ ಪ್ರತಿ ರಸ್ತೆಯನ್ನು ಕೂಡ ಪರಿಶೀಲಿಸುತ್ತೇನೆ. ಅಷ್ಟರಲ್ಲಿ ಗುಂಡಿಗಳು ಮಾಯವಾಗಿರಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಖಡಕ್ ಸೂಚನೆ ನೀಡಿದ್ದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ರಸ್ತೆ ಗುಂಡಿಗಳನ್ನು 15 ದಿನಗಳೊಳಗೆ ಮುಚ್ಚಿರಬೇಕು. ನಗರದಲ್ಲಿ ರಸ್ತೆಗುಂಡಿಗಳ ಬಗ್ಗೆ ಹಲವು ಕಂಪ್ಲೇಂಟ್ಗಳು ಬರುತ್ತಿವೆ. 'ರಸ್ತೆ ಗುಂಡಿ ಗಮನ' ಎಂಬ ಆ್ಯಪ್ ಮೂಲಕವೂ ಜನರು ರಸ್ತೆ ಗುಂಡಿಗಳ ಫೋಟೊ ತೆಗೆದು ಅಪ್ಲೋಡ್ ಮಾಡುವ ವ್ಯವಸ್ಥೆ ಇದೆ. ಆದರೂ ನಗರದ ಹಲವೆಡೆ ರಸ್ತೆ ಹಾಳಾಗಿರುವ ಬಗ್ಗೆ ದೂರು ಬರುತ್ತಿದೆ. ಮಳೆಗಾಲ ಆಗಿರುವುದರಿಂದ ಗುಂಡಿಗಳ ಸಮಸ್ಯೆ ಹೆಚ್ಚಾಗಿದೆ. ಇದನ್ನು ಶೀಘ್ರವಾಗಿ ಪರಿಹರಿಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಸೂಚಿಸಿದ್ದರು.

ಡಿಸಿಎಂ ಆದೇಶದ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ರಸ್ತೆಗಳಿಗಿಳಿದಿದ್ದು, ಖುದ್ದು ಅಲ್ಲೇ ನಿಂತು ರಸ್ತೆ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡ ಇಂದು ಪೂರ್ವ ವಲಯದ ಶಾಂತಲಾನಗರ ವ್ಯಾಪ್ತಿಯ ವಾರ್ ಮೆಮೋರಿಯಲ್ ಜಂಕ್ಷನ್ ಬಳಿ ರಸ್ತೆ ಗುಂಡಿ ಹಾಗೂ ಪಾದಚಾರಿ ಮಾರ್ಗ ದುರಸ್ತಿ ಕಾರ್ಯವನ್ನು ಪರಿಶೀಲಿಸಿ ಶೀಘ್ರ ಸರಿಪಡಿಸಲು ಸೂಚನೆ ನೀಡಿದರು.
ಇತ್ತ ದಕ್ಷಿಣ ವಲಯ ಆಯುಕ್ತರಾದ ವಿನೋತ್ ಪ್ರಿಯಾ ರವರ ನೇತೃತ್ವದಲ್ಲಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬರುವ ಬಿಟಿಎಂ ಬಡಾವಣೆ, 2ನೇ ಹಂತ, ಪೋಸ್ಟ್ ಅಫೀಸ್ ಹತ್ತಿರ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯಿತು. ನಿನ್ನೆ ರಾತ್ರಿ ಕೂಡ ನಗರದ ಹಲವು ಭಾಗಗಳಲ್ಲಿ ಬಿಬಿಎಂಪಿ ಅಧಿಕಾರಿಗಳು ಫೀಲ್ಡಿಗಿಳಿದು ಕೆಲಸ ಮಾಡಿದ್ದಾರೆ.

ಬಿಜೆಪಿಯ ಗುಂಡಿ ಕೊಡುಗೆಗೆ ಅಂತ್ಯ: ಇನ್ನು ಈ ವಿಚಾರವಾಗಿ ಕಾಂಗ್ರೆಸ್ ಸರ್ಕಾರಕ್ಕೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿಯು, ʼಅತಿ ಹೆಚ್ಚು ರಸ್ತೆ ಗುಂಡಿಗಳು ಹಾಗೂ ಅಲ್ಲಲ್ಲೆ ಬಿದ್ದಿರುವ ಕಸದ ರಾಶಿಗಳನ್ನು ಕಂಡರೆ ಕರ್ನಾಟಕ ಎಂದು ತಿಳಿಯಿರಿʼ ಎಂದು ಟಾಂಗ್ ನೀಡಿದೆ. ಇದಕ್ಕೆ ಟ್ವೀಟ್ ಮೂಲಕವೇ ಉತ್ತರ ನೀಡಿರುವ ರಾಜ್ಯ ಕಾಂಗ್ರೆಸ್, ಪ್ರಿಯ ಬಿಜೆಪಿಯವರೇ..ನಿಮ್ಮ ನಾಲ್ಕು ವರ್ಷಗಳ ಆಡಳಿತದ ವೈಫಲ್ಯವನ್ನು ನೀವೇ ಒಪ್ಪಿಕೊಳ್ಳುತ್ತಿರುವುದಕ್ಕೆ ಶಬ್ಬಾಸ್ ಹೇಳಲೇಬೇಕು! ಎಂದು ಕೌಂಟರ್ ನೀಡಿದೆ.
ನಾಲ್ಕು ವರ್ಷದ ಆಡಳಿತದಲ್ಲಿ ಬೆಂಗಳೂರಿನ ರಸ್ತೆಗಳ ನಾಲ್ಕು ಗುಂಡಿಗಳನ್ನೂ ದುರಸ್ತಿ ಮಾಡದೆ ಕಮಿಷನ್ ಲೂಟಿಯಲ್ಲಿ ಕಾಲ ಕಳೆದಿದ್ದನ್ನು ಜನತೆಗೆ ನೆನಪಿದೆ. ರಸ್ತೆ ಗುಂಡಿಗಳ ವಿಚಾರವಾಗಿ ಹತ್ತಾರು ಬಾರಿ ಹೈಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿದ್ದನ್ನು ಇಡೀ ರಾಜ್ಯ ನೋಡಿದೆ. ರಸ್ತೆ ಗುಂಡಿಗಳಿಗೆ 30ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ರಸ್ತೆ ಗುಂಡಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಡಿ.ಕೆ.ಶಿವಕುಮಾರ್ ಅವರು ಗುಂಡಿ ಮುಚ್ಚುವ ಸಂಕಲ್ಪ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಗುಂಡಿ ಕೊಡುಗೆಗೆ ಅಂತ್ಯ ಹಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿರುಗೇಟು ನೀಡಿದೆ.











Click it and Unblock the Notifications