"ಸಿಡಿ ಸ್ಫೋಟ" ದೂರಿನಿಂದ ದೂರ ಸರಿಯುವ ಕಲ್ಲಹಳ್ಳಿ ಮಾರ್ಗ ಬಂದ್?
ಬೆಂಗಳೂರು, ಮಾರ್ಚ್ 08 : ಮಾಜಿ ಸಚಿವ ರಮೇಶ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಸಂಬಂಧ ಸಲ್ಲಿಸಿದ್ದ ದೂರನ್ನು ವಾಪಸು ಪಡೆಯುವ ದಿನೇಶ್ ಕಲ್ಲಹಳ್ಳಿ ಪ್ರಯತ್ನಕ್ಕೆ ಹಿನ್ನೆಡೆಯಾಗಿದೆ. ಕಲ್ಲಹಳ್ಳಿ ದೂರು ವಾಪಸು ನೀಡುವಂತೆ ಕೋರಿ ವಕೀಲರ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಕಬ್ಬನ್ ಪಾರ್ಕ್ ಪೊಲೀಸರು ತಿರಸ್ಕರಿಸಿದ್ದಾರೆ. ದಿನೇಶ್ ಕಲ್ಲಹಳ್ಳಿಯೇ ಖುದ್ದು ಬರುವಂತೆ ಪೊಲೀಸರು ಹೇಳಿ ಕಳಿಸಿದ್ದಾರೆ. ಹೀಗಾಗಿ ದೂರು ಪಡೆಯುವ ಕಲ್ಲಹಳ್ಳಿ ಪ್ರಯತ್ನಕ್ಕೆ ಹಿನ್ನೆಡೆಯಾಗಿದ್ದು, ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ಈ ಬೆಳವಣಿಗೆಯಿಂದ ಪರಾಗಲು ದಿನೇಶ್ ಕಲ್ಲಹಳ್ಳಿ ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ಈ ದೂರು ಪ್ರಕರಣದಿಂದ ದೂರ ಸರಿಯುವ ಕಲ್ಲಹಳ್ಳಿ ಪ್ರಯತ್ನ ಸಫಲವಾಗುತ್ತಾ ? ಅನ್ನೋ ಪ್ರಶ್ನೆ ಎದುರಾಗಿದೆ.

ಅಜ್ಞಾತವಾಸಿ ಜಾರಕಿಹೊಳಿ
ಅಶ್ಲೀಲ ಸಿಡಿ ಸ್ಫೋಟಗೊಂಡ ಕ್ಷಣದಿಂದ ಈವರೆಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಲ್ಲೂ ಕಾಣಿಸಿಕೊಂಡಿಲ್ಲ. ಸಹೋದರರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅಜ್ಞಾತವಾಸಿಯಾಗಿರುವ ಅಣ್ಣನ ಮುಂದಿನ ನಡೆ ಬಗ್ಗೆ ಸಹೋದರ ಬಾಲಚಂದ್ರ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಎದುರು ಕೆಲ ಸ್ಫೋಟಕ ಸಂಗತಿಗಳನ್ನು ಬಹಿರಂಗ ಪಡಿಸಿದ್ದರು. ಇದೊಂದು ನಕಲಿ ಸಿಡಿ. ನಮ್ಮ ಅಣ್ಣನನ್ನು ಹನಿ ಟ್ರ್ಯಾಪ್ ಮಾಡಲಾಗಿದೆ. ಇದರ ಹಿಂದೆ ಎರಡು ಮೂರು ತಂಡ ಇದೆ ಎಂಬ ಶಂಕೆ ವ್ಯಕ್ತಪಡಿಸಿದ್ದರು. ವಿಪರ್ಯಾಸವೆಂದರೆ ದಿನೇಶ್ ಕಲ್ಲಹಳ್ಳಿ ದೂರು ವಾಪಸು ಪಡೆಯುವ ಬಗ್ಗೆಯೂ ಬಾಲಚಂದ್ರ ಜಾರಕಿಹೊಳಿ ಪ್ರಸ್ತಾಪ ಮಾಡಿದ್ದರು. ದೂರು ವಾಪಸು ಪಡೆಯುವ ಪ್ರಕ್ರಿಯೆ ನೋಡಿಕೊಂಡು ಮುಂದಿನ ಹೆಜ್ಜೆ ಇಡುವುದಾಗಿಯೂ ಹೇಳಿಕೆ ನೀಡಿದ್ದರು. ಕೆಲವು ಸಚಿವರು ಹಾಗೂ ಶಾಸಕರ ಒತ್ತಾಯದ ಮೇರೆಗೆ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಯಿಂದ ತನಿಖೆಗೆ ಒಳಪಡಿಸಲು ತೀರ್ಮಾನಿರುವುದಾಗಿಯೂ ಹೇಳಿದ್ದರು.

ದೂರು ವಾಪಸು ಸುಲಭವಲ್ಲ
ಇದೀಗ ದಿನೇಶ್ ಕಲ್ಲಹಳ್ಳಿ ದೂರು ವಾಪಸು ಪಡೆದರೆ ಕಾನೂನಾತ್ಮಕವಾಗಿ ಇನ್ನೂ ಕಷ್ಟ ಎದುರಾಗಲಿದೆ. ದಿನೇಶ್ ಕಲ್ಲಹಳ್ಳಿ ದೂರು ಮಾತ್ರ ನೀಡಿಲ್ಲ. ಅನ್ಯಾಯ ಆಗಿದೆ ಎಂದ ಮಹಿಳೆ ಜತೆ ಅಶ್ಲೀಲವಾಗಿ ನಡೆದುಕೊಂಡಿರುವ ಸಚಿವರ ಸಿಡಿ ಕೂಡ ಬಿಡುಗಡೆಯಾಗಿದೆ. ಈವರೆಗೂ ಎಫ್ಐಆರ್ ಆಗದ ಕಾರಣ ದೂರು ವಾಪಸು ಪಡೆಯಲು ಅವಕಾಶವಿದೆ ಎನ್ನಲಾಗುತ್ತಿದೆ. ಇನ್ನೊಂದಡೆ ದೂರಿನಿಂದ ರಾಜ್ಯದಲ್ಲಿ ದೊಡ್ಡ ಮಟ್ಟಡದ ಬೆಳವಣಿಗೆ ಆಗಿವೆ. ಒಂದು ವೇಳೆ ದೂರು ಅರ್ಜಿ ಕಾನೂನಾತ್ಮಕವಾಗಿಯೇ ವಾಪಸು ಪಡೆದಲ್ಲಿ, ಮುಂದೆ ಇಡಬೇಕಾದ ಹೆಜ್ಜೆ ಕುರಿತು ಪೊಲೀಸರು ಕೂಡ ಕಾನೂನು ಸಲಹೆ ಮೊರೆ ಹೋಗಿದ್ದಾರೆ.
ದಿನೇಶ್ ಕಲ್ಲಹಳ್ಳಿ ದೂರು ವಾಪಸು ಪಡೆದರೂ, ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿ ಪ್ರಕರಣ ತನಿಖೆ ನಡೆಸುವ ಅವಕಾಶವಿದೆ. ಇನ್ನು ದೂರು ಕೊಟ್ಟು ವಾಪಸು ಪಡೆದಿದ್ದೇ ಆದಲ್ಲಿ ದಿನೇಶ್ ಕಲ್ಲಹಳ್ಳಿ ವಿರುದ್ಧ ಕಾನೂನು ದುರುಪಯೋಗದ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಸದ್ಯದ ಮಟ್ಟಿಗೆ ದೂರು ಹಿಂಡೆಯುವ ಕಲ್ಲಹಳ್ಳಿ ಪ್ರಯತ್ನಕ್ಕೆ ಹಿನ್ನೆಡೆ ಉಂಟಾಗಿದೆ. ಯಾವ ಆಯಾಮದಲ್ಲಿ ಹೆಜ್ಜೆ ಇಟ್ಟರೂ ದಿನೇಶ್ ಕಲ್ಲಹಳ್ಳಿ ಈ ಪ್ರಕರಣದಿಂದ ದೂರ ಸರಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡಲು ತೀರ್ಮಾನಿಸಿರುವುದಾಗಿ ಸುದ್ದಿ ಮಾಧ್ಯಮಗಳಿಗೆ ಕಲ್ಲಹಳ್ಳಿ ಹೇಳಿಕೆ ನೀಡಿದ್ದಾರೆ.

ವಿಚಾರಣೆಗೆ ನೋಟಿಸ್
ವಿಚಾರಣೆ ಹಾಜರಾಗುವಂತೆ ಕಬ್ಬನ್ ಪಾರ್ಕ್ ಪೊಲೀಸರು ದಿನೇಶ್ ಕಲ್ಲಹಳ್ಳಿ, ಆರ್ಟಿಐ ಕಾರ್ಯಕರ್ತ ರಾಜಶೇಖರ ಮುಲಾಲಿ ಅವರಿಗೆ ನೋಟಿಸ್ ನೀಡಿದ್ದಾರೆ. ಮುಂದೆ ಇನ್ನೂ ಅನೇಕ ಗಣ್ಯರ ಸಿಡಿ ಬಿಡುಗಡೆಯಾಗಲಿದೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ರಾಜಶೇಖರ್ ಮುಲಾಲಿ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ವಿಚಾರಣೆ ವೇಳೆ ಇತರೆ ಯಾವ ಪ್ರಭಾವಿಗಳ ಸಿಡಿಯಿದೆ. ಸಿಡಿ ಬಿಡುಗಡೆ ಹೇಳಿಕೆ ಮರ್ಮವೇನು ? ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

ಯುವತಿ ಪತ್ತೆಯ ಪ್ರಯತ್ನ
ರಮೇಶ್ ಜಾರಕಿಹೊಳಿ ಜತೆ ಹಾಸಿಗೆ ಹಂಚಿಕೊಂಡು, ಅನ್ಯಾಯಕ್ಕೆ ಒಳಗಾಗಿದ್ದಾಳೆ ಎನ್ನಲಾದ ಯುವತಿ ವಿವರ ಇನ್ನೂ ನಿಗೂಢವಾಗಿದೆ. ದೂರು ನೀಡಿದ ಬೆನ್ನಲ್ಲೇ ಅಕೆಯ ಹೇಳಿಕೆ ಪಡೆಯಲು ಪೊಲೀಸರು ಮುಂದಾಗಿದ್ದರು. ಸಂತ್ರಸ್ತ ಯುವತಿಯನ್ನು ಕರೆಸಲು ಪೊಲೀಸರು ದಿನೇಶ್ ಕಲ್ಲಹಳ್ಳಿಗೆ ಸೂಚಿಸಿದ್ದರು. ಆದರೆ, ಯುವತಿ ವಿವರ ನನಗೆ ಗೊತ್ತಿಲ್ಲ. ಅವರಿಗೆ ಪರಿಚಿತರು ಸಿಡಿ ನೀಡಿದ್ದರು. ಸಾಮಾಜಿಕ ಕಾರ್ಯಕರ್ತನಾಗಿ ನಾನು ದೂರು ನೀಡಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಆನಂತರ ಯುವತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈವರೆಗೂ ಆಕೆ ಪತ್ತೆಯಾಗಿಲ್ಲ. ಇನ್ನು ಆ ಯುವತಿ ಎನ್ನಲಾದ ಕೆಲವು ಪೊಟೋಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ್ದವು. ಅದರ ಜಾಡು ಹಿಡಿದು ಹುಡುಕುವ ಪೊಲೀಸರ ಪ್ರಯತ್ನ ವಿಫಲವಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications