ಖಾನಾಪುರದಲ್ಲಿ ಹುಲಿ ಬಿಟ್ಟ ಪ್ರಕರಣದ ತನಿಖೆ ಇಲ್ಲ
ಬೆಂಗಳೂರು, ಜ. 7: ಬೆಳಗಾವಿಯಲ್ಲಿ ಮಹಿಳೆಯನ್ನು ಬಲಿ ತೆಗೆದುಕೊಂಡ ನರಭಕ್ಷಕ ಹುಲಿಯನ್ನು ಖಾನಾಪುರ ಅರಣ್ಯಕ್ಕೆ ಬಿಟ್ಟ ಪ್ರಕರಣದ ತನಿಖೆ ನಡೆಸಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ಆಗ್ರಹಿಸಿದ್ದವು. ಈ ನಿರ್ಧಾರದ ಹಿಂದೆ ರಾಜ್ಯ ಗೃಹ ಸಚಿವ ಜಾರ್ಜ್ ಅವರ ಪುತ್ರ ರಾಣಾ ಕೈವಾಡವಿದೆ ಎಂದು ಪರೋಕ್ಷವಾಗಿ ಆರೋಪಿಸಿದ್ದರು.
ಆದರೆ, ಈ ಪ್ರಕರಣದ ತನಿಖೆ ಅಗತ್ಯವಿಲ್ಲ ಎಂದು ಅರಣ್ಯ ಸಚಿವ ರಮಾನಾಥ ರೈ ಸ್ಪಷ್ಟವಾಗಿ ತಿಳಿಸಿದ್ದಾರೆ. ಅಲ್ಲದೆ, ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯೇ ಪಿಸಿಸಿಎಫ್ ನೇತೃತ್ವದ ವರದಿ ಆಧರಿಸಿ ಹುಲಿಯನ್ನು ಕಾಡಿಗೆ ಬಿಡಲಾಗಿತ್ತು. ಈ ಕಾಯಿದೆ ಪ್ರಕಾರ ಹುಲಿ ಇನ್ನೂ ಚಿಕ್ಕ ವಯಸ್ಸಿನದಾಗಿದ್ದರೆ ಕಾಡಿಗೆ ಬಿಡಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ. [ನರಭಕ್ಷಕ ಹುಲಿ ಕಾಡಿಗೆ ಬಿಟ್ಟಿದ್ದು ಏಕೆ?]
ಹುಲಿಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಆದರೆ, ಸಿಗ್ನಲ್ ಸಿಗದ ಕಾರಣ ಈ ರೇಡಿಯೋ ಕಾಲರ್ ಕೆಲಸ ಮಾಡಲಿಲ್ಲ. ಇಲ್ಲಿ ಯಾವುದೇ ನಿಯಮದ ಉಲ್ಲಂಘನೆಯಾಗಿಲ್ಲ. ಆದ್ದರಿಂದ ತನಿಖೆಯೂ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. [ಚಿಕ್ಕಮಗಳೂರು ಹುಲಿಗೆ ಬೆಳಗಾವಿಯಲ್ಲೂ ಮಹಿಳೆ ಬಲಿ]
ರಾಣಾ ಜಾರ್ಜ್ ಕೈವಾಡವಿಲ್ಲ : ನರಭಕ್ಷಕ ಹುಲಿಯನ್ನು ಖಾನಾಪುರ ಅರಣ್ಯದೊಳಗೆ ಬಿಡುವಲ್ಲಿ ಗೃಹ ಸಚಿವರ ಪುತ್ರ ರಾಣಾ ಜಾರ್ಜ್ ಕೈವಾಡವಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಅವರು ವನ್ಯಜೀವಿ ಸಲಹಾ ಮಂಡಳಿ ಸದಸ್ಯರು. ಆದ್ದರಿಂದ ಅರಣ್ಯ ಪ್ರದೇಶಕ್ಕೆ ಹೋಗುವುದು ಸಹಜ ಎಂದು ಸಮರ್ಥಿಸಿಕೊಂಡರು. [ನರಭಕ್ಷಕ ಹುಲಿ ಗುಂಡೇಟಿಗೆ ಬಲಿ]
ಖಾನಾಪುರ ಅರಣ್ಯದಲ್ಲಿ ಮತ್ತೊಂದು ಹುಲಿ ಇದೆ ಎಂಬ ವಿಷಯ ಇನ್ನೂ ದೃಢಪಟ್ಟಿಲ್ಲ ಎಂದು ರಮಾನಾಥ ರೈ ತಿಳಿಸಿದ್ದಾರೆ.