ಡಿವಿಎಸ್ ಗೆ ಸುಳ್ಳು ಹೇಳಿಕೆ ನೀಡುವುದೇ ಖಯಾಲಿ: ರಾಮಲಿಂಗಾರೆಡ್ಡಿ
ಬೆಂಗಳೂರು, ಫೆಬ್ರವರಿ 01: ಕೇಂದ್ರ ಸಚಿವ ಡಿವಿ ಸದಾನಂದಗೌಡರಿಗೆ ಚುನಾವಣೆಗಾಗಿ ಸುಳ್ಳು ಹೇಳಿಕೆ ನೀಡುವುದನ್ನೇ ಖಯಾಲಿ ಮಾಡಿಕೊಂಡಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತ ಸಂತೋಷ್ ಕೊಲೆ ಕುರಿತಾಗಿ ಪಂಚ ಮುಗ್ಧರಿಗೆ ಪಂಚ ಪ್ರಶ್ನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ರಾಮಲಿಂಗಾರೆಡ್ಡಿ ಅವರನ್ನು ಟ್ಯಾಗ್ ಮಾಡಿ ಟ್ವಿಟ್ಟರ್ ನಲ್ಲಿ ಐದು ಪ್ರಶ್ನೆಗಳನ್ನು ಕೇಳಿದ್ದರು. ಅದರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಸದಾನಂದ ಗೌಡ ಅವರು ಚುನಾವಣೆಗಾಗಿ ಹೇಳಿಕೆಯನ್ನು ನೀಡುವುದನ್ನು ಖಯಾಲಿ ಮಾಡಿಕೊಂಡಿದ್ದಾರೆ. ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿರುವುದು ಹಾಸ್ಯಾಸ್ಪದವೆನಿಸಿದೆ ಎಂದು ಬರೆದುಕೊಂಡಿದ್ದಾರೆ.
ಕೇಂದ್ರ ಸಚಿವರಾದ @DVSBJP ಚುನಾವಣೆಗಾಗಿ ರಾಜಕೀಯ ಹೇಳಿಕೆಗಳನ್ನು ನೀಡುವುದನ್ನು ಖಯಾಲಿ ಮಾಡಿಕೊಂಡಿದ್ದಾರೆ. ಹಿಂದುಕಾರ್ಯಕರ್ತರ ಕೊಲೆ ಎಂದು ಚುನಾವಣೆಗಾಗಿ ಸರ್ಕಾರದ ವಿರುದ್ದ ಸುಳ್ಳು ಆರೋಪ ಮಾಡಿರುವುದು ಹಾಸ್ಯಾಸ್ಪದ ಎನಿಸಿದೆ. pic.twitter.com/Uj0SpWc3Fv
— Ramalinga Reddy (@RLR_BTM) February 1, 2018
ಇಷ್ಟೇ ಅಲ್ಲದೆ ವಿಜಯಪುರದ ದಾನಮ್ಮ ಅವರನ್ನು ಕೊಲೆ ಮಾಡಿದ್ದು ಬಿಜೆಪಿಯ ಕಾರ್ಯಕರ್ತನಲ್ಲವೇ, ಮೂಡಿಗೆರೆಯ ಧನ್ಯಶ್ರೀ ಸಾವಿಗೆ ಕಾರಣವಾಗಿದ್ದು, ನಿಮ್ಮ ಮುಖಂಡನಲ್ಲವೇ, ಉಡುಪಿಯ ಪ್ರವೀಣ್ ಪೂಜಾರಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ನಿಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತನಲಲ್ವೇ ಎಂದು ಡಿವಿ ಸದಾನಂದ ಗೌಡ ಅವರನ್ನು ಪ್ರಶ್ನಿಸಿದ್ದಾರೆ.
ಬಿಜೆಪಿ ಕಾರ್ಯಕರ್ತನ ಕೊಲೆ: ಸಿಎಂಗೆ ಡಿವಿಎಸ್ ಪಂಚ ಪ್ರಶ್ನೆ
ಬಂಟ್ವಾಳದ ಹರೀಶ ಪೂಜಾರಿ ಕೊಲೆ ಪ್ರಕರಣದಲ್ಲಿ ನಿಮ್ಮ ಸಂಘಪರಿವಾರದ ನಾಯಕ ಬಂಧನಕ್ಕೆ ಒಳಗಾಗಲಿಲ್ಲವೇ, ಮಂಗಳೂರಿಗೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿ ಕಾರ್ತಿಕ್ ರಾಜ್ ಕೊಲೆ ಪ್ರಕರಣದಲ್ಲಿ ತನಿಖೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದು ನಿಮ್ಮ ಪಕ್ಷದ ಸಂಸದರಲ್ಲವೇ ಎಂದಿದ್ದಾರೆ.
ವಿನಾಯಕ ಬಾಳಿಗ ಸೇರಿದಂತೆ ಕೊಲೆಯಾದ ದಲಿತ, ಹಿಂದುಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ದೊಡ್ಡ ಮನಸ್ಸು ನಿಮಗಿಲ್ಲವೇ, ಕೊಲೆಯನ್ನು ಅಪರಾಧವಾಗಿಯೇ ನೋಡಿದ ಕಾರಣಕ್ಕಾಗಿ ಬಹುತೇಕ ಎಲ್ಲಾ ಕೊಲೆ ಪ್ರಕರಣದ ಅಪರಾಧಿಯನ್ನು ಇಂದು ಜೈಲಿಗಟ್ಟಿದೆ.
ರಾಜ್ಯಕ್ಕೆ ಬಿಜೆಪಿಯ ಬೆಂಕಿ ಹಚ್ಚುವಂತಹ ನಾಯಕರು ಬೇಕೋ ಅಥವಾ ಬೆಂಕಿ ಆರಿಸುವ ನಾಯಕರು ಬೇಕೋ ಎಂಬುದನ್ನು ಜನ ನಿರ್ಧರಿಸುತ್ತಾರೆ. ಮತ್ತೊಮ್ಮೆ ಸಿದ್ದರಾಮಯ್ಯ ಅವರ ಸರ್ಕಾರವೇ ಅಧಿಕಾರಕ್ಕೇರಲಿದೆ. ಯಾವುದೇ ಕೊಲೆ ಪ್ರಕರಣವಿರಲಿ ಅಪರಾಧಿಗಳಿಗೆ ಶಿಕ್ಷೆ ನೀಡಲು ನಮ್ಮ ಪೊಲೀಸರು ಮತ್ತು ನಮ್ಮ ಸರ್ಕಾರ ಸಶಕ್ತವಾಗಿದೆ ಎಂದಿದ್ದಾರೆ.