ರಾಮಚಂದ್ರಾಪುರ ಮಠ ಸೈಟ್ ಕೇಸ್: ಬಿಬಿಎಂಪಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
ಬೆಂಗಳೂರು, ಮೇ 31: ಗಿರಿನಗರದಲ್ಲಿನ ರಾಮಚಂದ್ರಾಪುರ ಮಠದ ಶಾಖಾಮಠಕ್ಕೆ ನೀಡಲಾಗಿದ್ದ ಸಿಎ (civic amenity) ನಿವೇಶನದಲ್ಲಿ ಕಟ್ಟಡ ನಿರ್ಮಾಣ ಯೋಜನೆ ಮತ್ತು ಖಾತೆ ನೋಂದಣಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರದ್ದುಗೊಳಿಸಿದ ಕ್ರಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಬಿಬಿಎಂಪಿ ಆದೇಶಕ್ಕೆ ತಡೆ ನೀಡಿದ ರಾಜ್ಯ ಹೈಕೋರ್ಟ್, ಬಿಬಿಎಂಪಿ ಕೈಗೊಂಡ ಕ್ರಮ ನಿಯಮಬಾಹಿರ ಹಾಗೂ ಅಧಿಕಾರದ ವ್ಯಾಪ್ತಿಯನ್ನು ಮೀರಿದ ಕ್ರಮವಾಗಿದೆ ಎಂದು ಆದೇಶ ನೀಡಿದೆ.
ಸಿಎ ಸೈಟು ಕೇಸ್: ಗಿರಿನಗರದ ರಾಮಚಂದ್ರಾಪುರ ಮಠಕ್ಕೆ ಮುಖಭಂಗ
ಭೂಮಿಯ ಒಡೆತನದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಬಿಬಿಎಂಪಿ ಕಮಿಷನರ್ ಗೆ ಇಲ್ಲ, ಕ್ರಯಪತ್ರದ ಮೂಲಕ ಖರೀದಿಸಿದ ಜಾಗದ ಖಾತೆಯನ್ನು ರದ್ದುಮಾಡುವುದು ಅಧಿಕಾರ ವ್ಯಾಪ್ತಿಯನ್ನು ಮೀರಿದ ಹಾಗೂ ದುರುದ್ದೇಶಪೂರಿತ ಕ್ರಮವಾಗಿದೆ ಎಂಬ ಮಠದ ವಾದವನ್ನು ಮಾನ್ಯ ಮಾಡಿದ ನ್ಯಾಯಪೀಠ ಬಿಬಿಎಂಪಿ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಈ ಜಾಗಕ್ಕೆ ಸಂಬಂಧಿಸಿ, ಕಳೆದ ವರ್ಷ ತೀರ್ಮಾನ ನೀಡಿದ್ದ ಉಚ್ಛನ್ಯಾಯಾಲಯ ಕೇವಲ ಹೊಸ ಕಟ್ಟಡ ಕಟ್ಟಬಹುದೇ ಬೇಡವೇ ಎಂದು ತೀರ್ಮಾನಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿತ್ತು. ಆದರೆ ಬಿಬಿಎಂಪಿ ಆಯುಕ್ತರು ಉಚ್ಚನ್ಯಾಯಾಲಯದ ಆದೇಶವನ್ನೇ ಪ್ರಶ್ನಿಸುವ ರೀತಿಯಲ್ಲಿ ಆದೇಶ ನೀಡಿ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದರು.
"ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುವ ಅಧಿಕಾರವನ್ನು ಕಮಿಷನರ್ ಗೆ ಯಾರು ನೀಡಿದ್ದಾರೆ" ಎಂದು ಬಿಬಿಎಂಪಿ ಪರ ವಕೀಲರನ್ನು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿದ ಪ್ರಸಂಗಕ್ಕೂ ನ್ಯಾಯಾಲಯ ಸಾಕ್ಷಿಯಾಯಿತು. ಪ್ರಸ್ತುತ ಜಾಗಕ್ಕೆ ಸಂಬಂಧಿಸಿ ಸ್ಪಷ್ಟವಾದ ಕ್ರಯಪತ್ರ ಇದ್ದು, 1975 ರಲ್ಲೇ ಕ್ರಯಕ್ಕೆ ಕೊಂಡ ಜಾಗ ಇದಾಗಿದೆ. ಹಾಗೂ ಪ್ರಸ್ತುತ ಜಾಗಕ್ಕೆ ಖಾತಾ ಇದ್ದರೂ ಬಿಬಿಎಂಪಿ ಅನಗತ್ಯವಾಗಿ ಇತಂಹ ಕ್ರಮಕ್ಕೆ ಮುಂದಾಗಿರುವುದು ದುರದೃಷ್ಟಕರ.
ಬಿಬಿಎಂಪಿ ಕಮಿಷನರ್ ಏಪ್ರಿಲ್ ಏಳರಂದು ರಂದು ಆದೇಶ ನೀಡಿದ್ದರೂ, ಅದನ್ನು ಮೇ 22 ರಂದು ನೋಟಿಸ್ ಮೂಲಕ ಮಠದ ಗಮನಕ್ಕೆ ತಂದಿರುವ ನಿಧಾನಗತಿಯ ಕ್ರಮ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಮಠದ ಪರ ವಕೀಲರು ವಾದ ಮಂಡಿಸಿದ್ದರು.
ಕಳೆದ ವರ್ಷ ಇದೇ ಜಾಗಕ್ಕೆ ಸಂಬಂಧಿಸಿದ ಎರಡು ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಉಚ್ಚ ನ್ಯಾಯಾಲಯ ವಿಲೇವಾರಿ ಮಾಡಿ, ಅನಗತ್ಯವಾಗಿ ನ್ಯಾಯಾಲಯದ ಸಮಯವನ್ನು ಹಾಳುಮಾಡಿದರೆ ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಹೊಸ ಕಟ್ಟಡದ ನಕ್ಷೆಯ ಕುರಿತಾದ ತನ್ನ ಆದೇಶವನ್ನು ಬಿಬಿಎಂಪಿ ಹಿಂಪಡೆದಿತ್ತು. ಇಷ್ಟಾದ ನಂತರವೂ ಬಿಬಿಎಂಪಿಯವರು ಮಠದ ಖಾತಾ ರದ್ಧುಗೊಳಿಸಿ ಆದೇಶ ನೀಡಿರುವುದನ್ನು ಗಮನಿಸಿದರೆ, ಕೆಲವು ಕಾಣದ ಕೈಗಳು ಕಾನೂನನ್ನು ದುರುಪಯೋಗ ಪಡಿಸಿಕೊಂಡು ಅನಗತ್ಯವಾಗಿ ಮಠದ ಮೇಲೆ ಆಕ್ರಮಣ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ ಎನ್ನುವುದು ಮಠದ ಭಕ್ತರ ಅಭಿಪ್ರಾಯ.