ರೈಲು ನಿಲ್ದಾಣದಲ್ಲಿ ಡ್ರಂನಲ್ಲಿ ಮಹಿಳೆ ಶವ ಪತ್ತೆ, ಮೂವರ ಬಂಧನ
ಮಾರ್ಚ್ 14ರಂದು ಬೆಳಗ್ಗೆ ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನ ಗೇಟ್ ಬಳಿ ಡ್ರಂನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿತ್ತು. ಈ ಪ್ರಕರಣದ ಸಂಬಂಧ 3 ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು, ಮಾರ್ಚ್ 16; ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಲ್ಲಿ ಡ್ರಂನಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ರೈಲ್ವೆ ಪೊಲೀಸರು 8 ಆರೋಪಿಗಳ ಪೈಕಿ ಮೂವರನ್ನು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆ ಮತ್ತು ಕೊಲೆ ಮಾಡಿದ ಎಲ್ಲಾ ಆರೋಪಿಗಳು ಬಿಹಾರ ಮೂಲದವರು. ರೈಲು ನಿಲ್ದಾಣದ ಡ್ರಂನಲ್ಲಿ ಮಹಿಳೆಯ ಶವ ಸಿಕ್ಕ ಪ್ರಕರಣ ಆತಂಕ ಮೂಡಿಸಿತ್ತು.
ಕೊಲೆಯಾದ ಮಹಿಳೆಯನ್ನು ತಮನ್ನಾ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ 8 ಆರೋಪಿಗಳು ಭಾಗಿಯಾಗಿದ್ದು, ಸದ್ಯ ರೈಲ್ವೆ ಪೊಲೀಸರು ಕಮಾಲ್, ತನ್ವೀರ್, ಶಾಕೀಬ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೌಟುಂಬಿಕ ಕಲಹವೇ ಹತ್ಯೆಗೆ ಕಾರಣವಾಗಿದೆ. ಕಲಾಸಿಪಾಳ್ಯದಲ್ಲಿ ತಮನ್ನಾ ಹತ್ಯೆ ಮಾಡಿದ್ದ ಆರೋಪಿಗಳು ಶವವನ್ನು ಚೀಲದಲ್ಲಿ ಹಾಕಿ ಡ್ರಂನಲ್ಲಿ ತುಂಬಿ, ಆಟೋದಲ್ಲಿ ತಂದು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನ ಗೇಟ್ ಬಳಿ ಇಟ್ಟು ಹೋಗಿದ್ದರು.

ಮಾರ್ಚ್ 14ರಂದು ಬೆಳಗ್ಗೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನ ಗೇಟ್ ಬಳಿ ಡ್ರಂನಲ್ಲಿ ಕೊಳೆತ ಸ್ಥಿತಿಯಲ್ಲಿ ತಮನ್ನಾ ಶವ ಪತ್ತೆಯಾಗಿತ್ತು. ಕೊಲೆಯಾದ ತಮನ್ನಾ ಮತ್ತು ಎಲ್ಲಾ ಆರೋಪಿಗಳು ಬಿಹಾರ ಮೂಲದವರು. ಬೆಂಗಳೂರಿನ ಕೆ. ಆರ್. ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ನಾಲ್ವರು ಆರೋಪಿಗಳು ಆಟೋದಲ್ಲಿ ಬಂದು ಡ್ರಮ್ ಇಳಿಸಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿ ಆಧರಿಸಿ ರೈಲ್ವೆ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದರು. ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಿನಲ್ಲಿ ಇದೇ ಮಾದರಿಯ ಮೂರು ಕೊಲೆ ನಡೆದಿತ್ತು. ಈ ಹಿಂದಿನ ಪ್ರಕರಣಗಳಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನ ಗೇಟ್ ಬಳಿ ಡ್ರಂನಲ್ಲಿ ಶವ ಪತ್ತೆಯಾದ ಪ್ರಕರಣದ ತನಿಖೆಗಾಗಿ ಮೂರು ತಂಡಗಳನ್ನು ಪೊಲೀಸರು ರಚನೆ ಮಾಡಿದ್ದರು. ಕಂಟೋನ್ಮೆಂಟ್ ರೈಲ್ವೆ ಠಾಣೆಯ ಇನ್ಸ್ಪೆಕ್ಟರ್ ಪ್ರಭಾಕರ್ ತನಿಖಾಧಿಕಾರಿಯಾಗಿದ್ದರು. ಮೈಸೂರು, ದಾವಣಗೆರೆ ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಸಹ ತಂಡದಲ್ಲಿದ್ದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಮೊದಲು ಮಹಿಳೆಯ ಗುರುತು ಪತ್ತೆ ಹಚ್ಚಿ, ಬಳಿಕ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಒಂದೇ ಮಾದರಿಯ ಕೊಲೆಗಳು; ಜನವರಿಯಲ್ಲಿ ಯಶವಂತಪುರ ರೈಲು ನಿಲ್ದಾಣದಲ್ಲಿ ಮಹಿಳೆಯ ಶವ ಡ್ರಂನಲ್ಲಿ ಪತ್ತೆಯಾಗಿತ್ತು. ಬಳಿಕ ಸರ್. ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಇದೇ ಮಾದರಿಯಲ್ಲಿ ಶವ ಪತ್ತೆಯಾಗಿತ್ತು. ಮಾರ್ಚ್ 14ರಂದು ಮತ್ತೆ ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಗೇಟ್ ಬಳಿ ಶವ ಪತ್ತೆಯಾಗಿತ್ತು. ಮೂರು ಒಂದೇ ಮಾದರಿ ಪ್ರಕರಣಗಳು ಆದ ಕಾರಣ ಇದು ಸರಣಿ ಹಂತಕರ ಕೈವಾಡ ಇರಬಹುದು ಎಂದು ಶಂಕಿಸಲಾಗಿತ್ತು. ಆದರೆ ರೈಲ್ವೆ ಪೊಲೀಸರು ಈ ಹಿಂದಿನ ಕೊಲೆಗೂ ತಮನ್ನಾ ಹತ್ಯೆ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಜನವರಿ 4ರಂದು ಯಶವಂತಪುರ ರೈಲು ನಿಲ್ದಾಣದ ಗೂಡ್ಸ್ ಪ್ಲಾಟ್ಫಾರ್ಮ್ನಲ್ಲಿ ಡ್ರಂ ಬಳಿ ವಾಸನೆ ಬರುತ್ತಿತ್ತು. ಆಗ ಪೊಲೀಸರು ಅದನ್ನು ತೆರೆದಿದ್ದರು, ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿಟ್ಟ ಸುಮಾರು 23 ವರ್ಷ ವಯಸ್ಸಿನ ಯುವತಿಯ ಶವ ಪತ್ತೆಯಾಗಿತ್ತು. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐದು ದಿನಗಳ ಹಿಂದೆ ಶವವನ್ನು ರೈಲು ನಿಲ್ದಾಣಕ್ಕೆ ತಂದು ಇಡಲಾಗಿದೆ ಎಂದು ಪೊಲೀಸರು ಶಂಕಿಸಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು.
ಸರ್. ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಇದೇ ಮಾದರಿಯಲ್ಲಿ ಶವ ಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸರು ಚುರುಕುಗೊಂಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿದ್ದರು. ಮಾರ್ಚ್ 14ರಂದು ಸಿಕ್ಕ ಶವದ ಪ್ರಕರಣ ಬಗೆಹರಿದಿದೆ. ಆದರೆ ಯಶವಂತಪುರ ರೈಲು ನಿಲ್ದಾಣದಲ್ಲಿ ಸಿಕ್ಕ ಯುವತಿಯ ಶವದ ಪ್ರಕರಣದ ತನಿಖೆ ನಡೆಯುತ್ತಿದೆ.












Click it and Unblock the Notifications