'ದೊರೆ ಮಾಡಿದರೆ ದಂಡವಿಲ್ಲ': ಕಾಂಗ್ರೆಸ್ ಕರೆ ನೀಡಿದರೆ ಅದು ಆರ್ಥಿಕ ಶಿಸ್ತು: ಆರ್ ಅಶೋಕ್ ಲೇವಡಿ
ಬೆಂಗಳೂರು: ರಾಷ್ಟ್ರದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದರೆ ಅದು ಕಾಂಗ್ರೆಸ್ ನಾಯಕರಿಗ ತಪ್ಪಾಗಿ ಕಾಣುತ್ತಿರುವುದು ಕಾಂಗ್ರೆಸ್ ನಾಯಕರ ಎಡಬಿಡಂಗಿತನಕ್ಕೆ ಹಿಡಿದ ಕನ್ನಡಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರ ಹೇಳಿಕೆಯ ವಿಡಿಯೋ ಹಂಚಿಕೊಂಡು ಗುಡುಗಿದ್ದಾರೆ.
ವಿದೇಶಗಳ ಯುದ್ಧ ಕಾರಣದಿಂದಾಗಿ ಭಾರತವು ಮುಂದಿನ ಒಂದು ವರ್ಷ ಕಷ್ಟಕರ ಪರಿಸ್ಥಿತಿ ಎದುರಿಸಬಹುದು. ಹೀಗಾಗಿ ಚಿನ್ನ ಖರೀದಿ ಬೇಡ, ಇಂಧನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆ ಮತ್ತು ಸ್ವದೇಶಿ ವಸ್ತುಗಳನ್ನು ಬಳಸಿ ಎಂದಿರುವ ಪ್ರಧಾನಿ ವಿರುದ್ಧ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದರು. ಇದನ್ನು ಖಂಡಿಸಿ ಎಕ್ಸ್ ಪೋಸ್ಟ್ ಮಾಡಿರುವ ಆರ್.ಅಶೋಕ್ ಅವರು, 'ದೊರೆ ಮಾಡಿದರೆ ದಂಡವಿಲ್ಲ' ಕಾಂಗ್ರೆಸ್ ಕರೆ ನೀಡಿದರೆ ಅದು ಆರ್ಥಿಕ ಶಿಸ್ತು' ಅಲ್ಲವೇ? ಎಂದು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಇತಿಹಾಸ ತಿಳಿದುಕೊಳ್ಳಲಿ
ಇತಿಹಾಸದ ಅರಿವೂ ಇಲ್ಲದ, ಆರ್ಥಿಕ ನಿರ್ವಹಣೆಯ ಗಂಧ-ಗಾಳಿಯೂ ಗೊತ್ತಿಲ್ಲದ ಇಂದಿನ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಪ್ರತಿಯೊಂದು ನಡೆಯನ್ನೂ ವಿರೋಧಿಸುವುದೇ ಒಂದು 'ನಿತ್ಯ ಕಾಯಕ'ವಾಗಿಬಿಟ್ಟಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಮೋದಿ ಅವರು ನೀಡುವ ದೂರದೃಷ್ಟಿಯ ಆರ್ಥಿಕ ಸಲಹೆಗಳನ್ನು ಲೇವಡಿ ಮಾಡುವ ಈ ಕಾಂಗ್ರೆಸ್ಸಿಗರು ಒಮ್ಮೆ ತಮ್ಮದೇ ಪಕ್ಷದ ಇತಿಹಾಸವನ್ನು ತಿರುವಿ ಹಾಕಲಿ ಎಂದು ಗುಡುಗಿದರು.
ಚಿನ್ನದ ವ್ಯಾಮೋಹ ಬಿಡಿ ಎಂದಿದ್ದ ಚಿದಂಬರಂ
1967ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಆರ್ಥಿಕ ಶಿಸ್ತಿಗಾಗಿ 'ಚಿನ್ನ ಕೊಳ್ಳಬೇಡಿ' ಎಂದು ಜನರಲ್ಲಿ ಮನವಿ ಮಾಡಿದ್ದರು. 2013 ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದಾಗ ಹಣಕಾಸು ಸಚಿವ ಪಿ. ಚಿದಂಬರಂ ಅವರು ಚಾಲ್ತಿ ಖಾತೆ ಕೊರತೆ (CAD) ಸರಿದೂಗಿಸಲು 'ಚಿನ್ನದ ಮೇಲಿನ ವ್ಯಾಮೋಹ ಬಿಡಿ' ಎಂದು ಪದೇ ಪದೇ ಗೋಗರೆದಿದ್ದರು.
'ದೊರೆ ಮಾಡಿದರೆ ದಂಡವಿಲ್ಲ' ಎಂಬಂತೆ, ಇಂದಿರಾ ಗಾಂಧಿ ಅಥವಾ ಸೋನಿಯಾ ಗಾಂಧಿ ಅವರ ಕಾಲದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರಗಳು ಕರೆ ನೀಡಿದರೆ ಅದು "ಆರ್ಥಿಕ ನೀತಿ". ಅದನ್ನು ಪ್ರಧಾನಿ ಮೋದಿಯವರು ಹೇಳಿದರು ತಪ್ಪು. ಪ್ರಧಾನಿ ಏನು ಹೇಳಿದರೂ ತಪ್ಪು ಎಂಬಂತೆ ದೂರುವುದು ಕಾಂಗ್ರೆಸ್ ಕಾಯಕವಾಗಿಬಿಟ್ಟಿದೆ ಎಂದು ತಿಳಿಸಿದರು.
ಕೇವಲ ರಾಜಕೀಯ ಕಾರಣಕ್ಕಾಗಿ ದೇಶದ ಆರ್ಥಿಕತೆಯ ಬಗ್ಗೆ ಯಾವುದೇ ತರ್ಕವಿಲ್ಲದೆ ಮಾತನಾಡುವ ಕಾಂಗ್ರೆಸ್ ನಾಯಕರು ಮೊದಲು ಆರ್ಥಿಕತೆಯ ಮೂಲಪಾಠಗಳನ್ನು ಕಲಿಯಲಿ. ಮೋದಿಯವರನ್ನು ವಿರೋಧಿಸುವ ಭರದಲ್ಲಿ ದೇಶದ ಹಿತವನ್ನು ಬಲಿ ಕೊಡಬೇಡಿ ಎಂದು ತಿಳಿಹೇಳಿದರು.













Click it and Unblock the Notifications