"ಡಿಕೆ ಶಿವಕುಮಾರ್ ಸರ್ಕಾರಕ್ಕೆ ಹೊಸ ಸಂಕಷ್ಟ; ಟೂಲ್ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ''
ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ಯ ಸರ್ಕಾರದ ನೇತೃತ್ವ ವಹಿಸಿದ್ದಾರೆ. ಅವರು ಸಿಎಂ ಆಗಿ ಕೆಲವೇ ದಿನಗಳಲ್ಲೇ ಬಹುಕೋಟಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಬಡ ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆದು, ಕಾರ್ಮಿಕರಿಗೆ ವಿತರಿಸಬೇಕಿದ್ದ 'ಮೇಸನ್ ಟೂಲ್ ಕಿಟ್ನಲ್ಲೂ ಕೋಟಿ ಕೋಟಿ ಲೂಟಿ ಹೊಡೆದ ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿದೆ' ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಕರ್ನಾಟಕದಲ್ಲಿ ಭ್ರಷ್ಟಾಚಾರವೇ ಆಡಳಿತದ ಮೂಲಮಂತ್ರವಾಗಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಬಡ ಕಟ್ಟಡ ಕಾರ್ಮಿಕರಿಗೆ ವಿತರಿಸಬೇಕಿದ್ದ 'ಮೇಸನ್ ಟೂಲ್ ಕಿಟ್' ಖರೀದಿಯಲ್ಲೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬರೋಬ್ಬರಿ 12.92 ಕೋಟಿ ರೂಪಾಯಿಗೂ ಅಧಿಕ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಕಡಿಮೆ ಬೆಲೆಯ ಟೂಲ್ಕಿಟ್ಗೆ ಅಧಿಕ ಬೆಲೆ ನಿಗದಿ
ಲೂಟಿಯ ಲೆಕ್ಕಾಚಾರ ನೋಡಿ ಎಂದ ಅವರು, ️ಮಾರುಕಟ್ಟೆಯಲ್ಲಿ ಕೇವಲ 1,379 ಬೆಲೆಯ ಟೂಲ್ ಕಿಟ್ಗೆ ಮಂಡಳಿಯು ಬರೋಬ್ಬರಿ 3,575 ನಿಗದಿಪಡಿಸಿದ ಬೆಲೆ ನಿಗದಿಪಡಿಸಿದೆ. ಇನ್ನೂ️ ಖಾಸಗಿ ಕಂಪನಿಗೆ ಪಾವತಿಸಿದ ಮೊತ್ತ 3,200 ರಿಂದ 3,300 ರೂಪಾಯಿ. ಉದ್ದೇಶಿತ ಒಟ್ಟು 67,380 ಟೂಲ್ ಕಿಟ್ಗಳ ಖರೀದಿಯಲ್ಲಿ ಸರ್ಕಾರಿ ಬೊಕ್ಕಸಕ್ಕೆ ಸುಮಾರು 12.92 ಕೋಟಿ ನಷ್ಟವಾಗಿದೆ ಎಂದು ಅವರು ಹೇಳಿದರು.
ಯಾರ ರಕ್ಷಣೆಗೆ 9 ತಿಂಗಳಿಂದ ಅನುಮತಿ ನೀಡಿಲ್ಲ
ಬಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನೇ ಲೂಟಿ ಮಾಡಲು ಹೊರಟಿರುವುದು ನಿಜಕ್ಕೂ ನಾಚಿಕೆಗೇಡು ಎಂದು ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. ಆತಂಕಕಾರಿ ಸಂಗತಿ ಏನೆಂದರೆ ಈ ಪ್ರಕರಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತ ಕೇಳಿರುವ ಪ್ರಾಸಿಕ್ಯೂಷನ್ ಅನುಮತಿಯ ಕಡತವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ 9 ತಿಂಗಳಿಂದ ಬಾಕಿ ಉಳಿಸಿಕೊಂಡಿದೆ. ಹೀಗೆ ವಿಳಂಬ ಮಾಡುವ ಮೂಲಕ ಸರ್ಕಾರ ಯಾರನ್ನು ರಕ್ಷಿಸಲು ಮುಂದಾಗಿದೆ? ಎಂದು ಅವರು ಪ್ರಶ್ನೆ ಮಾಡಿದರು. ಜೊತೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಬಡ ಕಾರ್ಮಿಕರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದವರು ಯಾರು?, ಈ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳಿಗೆ ರಕ್ಷಣೆ ನೀಡುತ್ತಿರುವವರು ಯಾರು?, ಲೋಕಾಯುಕ್ತ ತನಿಖೆಗೆ ಅನುಮತಿ ನೀಡಲು ಕಾಂಗ್ರೆಸ್ ಸರ್ಕಾರಕ್ಕೆ ಇರುವ ಭಯವೇನು? ಮತ್ತುಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸರ್ಕಾರ ಈ ಬಗ್ಗೆ ಸಾರ್ವಜನಿಕರಿಗೆ ಉತ್ತರ ನೀಡುತ್ತದೆಯೇ? ಎಂದು ಸವಾಲು ಹಾಕಿದ್ದಾರೆ.
ಬಡವರ ದುಡ್ಡಿನಲ್ಲಿ ಕಮಿಷನ್ ಹೊಡೆಯುವವರ ಹೆಸರು ಆಚೆ ಬರಲೇಬೇಕು. ಈ ಹಗರಣದ ಸಂಪೂರ್ಣ ಸತ್ಯ ಹೊರಬರಬೇಕು. ತಪ್ಪಿತಸ್ಥರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬಿಜೆಪಿ ರಾಜ್ಯಾದ್ಯಂತ ಜನಾಂದೋಲನ ರೂಪದಲ್ಲಿ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.













Click it and Unblock the Notifications