ಚಾಮರಾಜಪೇಟೆ ಈದ್ಗಾ ಮೈದಾನ ಇತಿಹಾಸ ಬಿಚ್ಚಿಟ್ಟ ಆರ್. ಅಶೋಕ
ಬೆಂಗಳೂರು, ಆಗಸ್ಟ್ 11: ಚಾಮರಾಜಪೇಟೆಯ ಆಟದ ಮೈದಾನ ಅಥವಾ ಈದ್ಗಾ ಮೈದಾನ ಎಂದು ಕರೆಯಲ್ಪಡುವ ಮೈದಾನದ ಕುರಿತಾಗಿ ಕಂದಾಯ ಸಚಿವ ಆರ್. ಅಶೋಕ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಈ ವೇಳೆ ಮೈದಾನದ ಇತಿಹಾಸವನ್ನು ಆರ್. ಅಶೋಕ ತೆರೆದಿಟ್ಟು 75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸರ್ಕಾರವೇ ಧ್ವಜಾರೋಹಣ ಮಾಡುತ್ತದೆ ಎಂದು ತಿಳಿಸಿದರು.
"ಮೈದಾನಕ್ಕೆ ಮೊದಲು 10.5 ಎಕರೆಯ ವಿಶಾಲ ಜಾಗ ಇತ್ತು. ಈಗ ಉಳಿದಿರೋದು 2.5 ಎಕರೆ ಮಾತ್ರ. 1952 ರಲ್ಲಿ ಲೇಔಟ್ ಮಾಡುವಾಗ ಉಳಿದ ಜಮೀನು ಬಳಕೆ ಆಗಿದೆ. ಮೊದಲು 1952ರಲ್ಲಿ ಸರ್ಕಾರಿ ಶಾಲೆ ಕಟ್ಟಲು ಪ್ರಸ್ತಾವನೆ ಮಂಡನೆ ಆಗಿದೆ" ಎಂದರು.
"ಆಗ ಅಬ್ದುಲ್ ವಾಜಿದ್ ಅನ್ನುವವರು ಮುನ್ಸಿಪಲ್ ಕೋರ್ಟಿಗೆ ಹೋಗುತ್ತಾರೆ. ನಾವಿಲ್ಲಿ ಪ್ರಾರ್ಥನೆ ಮಾಡುತ್ತಿದ್ದೇವೆ. ಶಾಲೆ ಕಟ್ಟಿದರೆ ಪ್ರಾರ್ಥನೆ ಮಾಡಲು ಆಗುವುದಿಲ್ಲ. ಹಾಗಾಗಿ ಶಾಲೆ ಕಟ್ಟಲು ಅವಕಾಶ ನೀಡಬೇಡಿ ಅಂತ ಕೋರ್ಟ್ಗೆ ಮನವಿ ಮಾಡುತ್ತಾರೆ. ಕೋರ್ಟ್ನಲ್ಲಿ ಕಾರ್ಪೊರೇಷನ್ ಪರ ಆಗುತ್ತದೆ. ಕನ್ನಡ ಶಾಲೆ ಕಟ್ಟಲು ಅನುಮತಿ ಕೊಡುತ್ತಾರೆ. ವಾಜಿದ್ ಪುನಃ ಅಪೀಲ್ ಹೋಗುತ್ತಾರೆ. ಅದು 1956ರಲ್ಲಿ ವಜಾ ಅಗುತ್ತದೆ" ಎಂದು ವಿವರಿಸಿದರು.
"ಅದಾದ ಮೇಲೆ ಸಿವಿಲ್ ಕೋರ್ಟ್ ಗೆ ಅವರು ಅಪೀಲ್ ಹೋಗುತ್ತಾರೆ. ಅಲ್ಲಿ ಅವರ ಪರವಾಗಿ ಸ್ಟೇ ಆರ್ಡರ್ ಸಿಗುತ್ತದೆ. ಹಾಗಾಗಿ ಪಾಲಿಕೆ ಅಲ್ಲಿ ಏನನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಕಂದಾಯ ಇಲಾಖೆಯ ಸಿಟಿ ಸರ್ವೆ 1974ರಲ್ಲಿ ಅಳತೆ ಮಾಡಿ ಈ ಜಾಗಕ್ಕೆ ನಂಬರ್ ಕೊಟ್ಟು, ಆಟದ ಮೈದಾನ ಅಂತ ನಮೂದಿಸಲಾಗಿದೆ. ಅಲ್ಲಿ ಒಂದು ಹಾಲಿನ ಬೂತ್ ಸಹ ಇರುತ್ತದೆ. ಸರ್ವೆ ನಂ 40, ಗುಟ್ಟಳ್ಳಿ ಅಂತ ನಮೂದಿಸಿದ್ದಾರೆ. ಅದಾದ ಬಳಿಕ ಮೈಸೂರು ಸರ್ಕಾರ, ಅನುಭೋಗದ ಹಕ್ಕನ್ನು ಆಟದ ಮೈದಾನಕ್ಕೆ ಕೊಡುತ್ತಾರೆ" ಎಂದು ಸಚಿವರು ಮಾಹಿತಿ ನೀಡಿದರು.
ಜಮೀನಿನ ಹಕ್ಕು ನಮ್ಮದು ಎಂದು ಯಾರು ಕೋರ್ಟ್ಗೆ ಹೋಗಿಲ್ಲ
"1898ರ ಬ್ರಿಟಿಷರ ಕಾಲದಲ್ಲೂ ವ್ಯಾಜ್ಯ ಆಗಿದೆ. ಸ್ಮಶಾನಕ್ಕೆ ಬಳಕೆ ಮಾಡಲು ಬದಲಿ ಜಾಗ ಕೊಡಲಾಗಿದೆ. ಬಳಿಕ ಕಾರ್ಪೊರೇಷನ್ ವಿರುದ್ಧ 1962ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತಾರೆ. ಕೋರ್ಟ್ ಕೂಡ ಶಾಲೆ ಕಟ್ಟಬಾರದು, ವರ್ಷದಲ್ಲಿ 2 ಬಾರಿ ಪ್ರಾರ್ಥನೆಗೆ ಅವಕಾಶ ನೀಡಬೇಕು ಅಂತ 1964ರಲ್ಲಿ ತೀರ್ಪು ಕೊಡುತ್ತದೆ. ಯಾರೂ ಕೂಡ ಜಮೀನಿನ ಹಕ್ಕು ನಮ್ಮದು ಅಂತ ಕೇಳಿಲ್ಲ. ಬದಲಾಗಿ ಕೇವಲ ಪ್ರಾರ್ಥನೆಗೆ ಮಾತ್ರ ಕೋರ್ಟ್ ಮೆಟ್ಟಿಲೇರಿರೋದು" ಎಂದು ಅಶೋಕ ತಿಳಿಸಿದರು.
ಅಸಿಸ್ಟೆಂಟ್ ಕಮೀಷನರ್ ರಿಂದ ಧ್ವಜಾರೋಹಣ
"ಬಿಬಿಎಂಪಿ ಎಲ್ಲಾ ದಾಖಲೆ ಪರಿಶೀಲನೆ ಮಾಡಿ ಕಂದಾಯ ಇಲಾಖೆಗೆ ನೀಡಿದ್ದಾರೆ. ಕಂದಾಯ ಇಲಾಖೆಯ ಜಾಗ ಅಂತ ಅಂತಿಮಗೊಳಿಸಲಾಗಿದೆ. ವಕ್ಫ್ ಬೋರ್ಡ್ ಆಸ್ತಿ ಅಲ್ಲವೇ ಅಲ್ಲ. ಹಿಂದೆ ಕಂದಾಯ ಇಲಾಖೆ ಅಂತ ಇದೆ. ಈಗಲೂ ಕಂದಾಯ ಇಲಾಖೆಗೆ ಉಳಿದಿದೆ. ಈ ಸ್ವತ್ತು ಕಂದಾಯ ಇಲಾಖೆಯದ್ದು ಆಗಿದೆ. ಚಾಮರಾಜಪೇಟೆ ಮೈದಾನದಲ್ಲಿ ಕಂದಾಯ ಇಲಾಖೆಯ ಅಸಿಸ್ಟೆಂಟ್ ಕಮೀಷನರ್ ಧ್ವಜಾರೋಹಣ ಮಾಡಲಿದ್ದಾರೆ. ಪ್ರೊಟೋಕಾಲ್ ಪ್ರಕಾರ ಸ್ಥಳೀಯ ಎಂಎಲ್ಎ ಹಾಗೂ ಎಂಪಿ ಬರಬಹುದು. ಚಾಮರಾಜಪೇಟೆ ಜನರು ಕೂಡ ಭಾಗಿಯಾಗಬಹುದು" ಎಂದು ಅಶೋಕ ಸ್ಪಷ್ಟಪಡಿಸಿದರು.
ಸ್ಥಳೀಯರಿಗೆ ಸೂಚನೆ ಕೊಡಲಿರುವ ಡಿಸಿಪಿ
"ಭಾರತ್ ಮಾತಾ ಕೀ ಜೈ, ಸ್ವಾತಂತ್ರ್ಯ ಹೋರಾಟಗಾರರ ಹೆಸರು, ಸ್ವಾತಂತ್ರ್ಯ ವಿಚಾರದ ಘೋಷಣೆ ಮಾತ್ರ ಕೂಗಬೇಕು. ಈ ಬಗ್ಗೆ ಸ್ಥಳೀಯ ಡಿಸಿಪಿ ಸೂಚನೆ ಕೂಡ ಕೊಡಲಿದ್ದಾರೆ. ಇತರೆ ಯಾವುದೇ ಘೋಷಣೆ ಕೂಗಬಾರದು. 75ನೇ ಸ್ವಾತಂತ್ರ್ಯ ದಿನವನ್ನು ಎಲ್ಲರೂ ಸೇರಿ ಆಚರಿಸೋಣ. ಯಾವುದೇ ಅಹಿತಕರ ಘಟನೆ ನಡೆಯಲು ಅವಕಾಶ ಕೊಡಬಾರದು ಎಂದು ಸಾರ್ವಜನಿಕರಲ್ಲಿ ವಿನಂತಿಸುತ್ತೇನೆ. ತಪ್ಪಿದರೆ ಕಾನೂನು ಕ್ರಮ ಕೈಗೊಳ್ಳಲು ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದು ಅಶೋಕ ಹೇಳಿದ್ದಾರೆ.
ಆಸ್ತಿ ತಮ್ಮದೆಂದರೆ ದಾಖಲೆಗಳನ್ನು ಸಲ್ಲಿಸಲಿ
"ಇಲ್ಲಿ ಬೇರೆ ವ್ಯಕ್ತಿಗಳಿಗೆ ಧ್ವಜ ಹಾರಿಸಲು ಅನುಮತಿ ಇಲ್ಲ. ಇದು ಸರ್ಕಾರಿ ಕಾರ್ಯಕ್ರಮ, ಸರ್ಕಾರದಿಂದ ಆಗಲಿದೆ. ಇಲ್ಲಿಯವರೆಗೂ ಯಾರೂ ಬಂದು ಧ್ವಜ ಹಾರಿಸಲು ಅನುಮತಿ ಕೇಳಿಲ್ಲ.ಕಂದಾಯದ ಜಮೀನು ಆಗಿರುವುದರಿಂದ ಏನು ಮಾಡಬಹುದು ಅಂತ ಮುಂದೆ ಸರಿಯಾಗಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಯಾರಾದರೂ ನಮ್ಮ ಆಸ್ತಿ ಅಂತ ದಾಖಲೆ ಇದ್ದರೇ, ಕಂದಾಯ ಇಲಾಖೆಗೆ ಸಲ್ಲಿಸಬಹುದು. ದಾಖಲೆಗಳನ್ನು ಪರಿಶೀಲಿಸಲಾಗುವುದು. ಮುಖ್ಯಮಂತ್ರಿ ಜೊತೆಯಲ್ಲಿ ಸಹ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ" ಎಂದು ಅಶೋಕ ಹೇಳಿದರು.
Recommended Video