ಹೆಚ್ಚಾದ ಆನ್ ಲೈನ್ ವ್ಯವಹಾರ; ಪೂಜಾ ಸಾಮಾಗ್ರಿ ವ್ಯಾಪಾರ ಕುಸಿತ
ಬೆಂಗಳೂರು, ಅಕ್ಟೋಬರ್ 07 : ಕೋವಿಡ್ ಲಾಕ್ ಡೌನ್ ಬಳಿಕ ಹಲವು ಕ್ಷೇತ್ರಗಳಿಗೆ ಅಪಾರವಾದ ನಷ್ಟ ಉಂಟಾಗಿದೆ. ಅನ್ ಲಾಕ್ ಪ್ರಕ್ರಿಯೆ ಜಾರಿಯಲ್ಲಿದ್ದರೂ ವ್ಯಾಪಾರ ಲಾಭ ತಂದುಕೊಡುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದಾಗಿ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಪೂಜಾ ಸಾಮಾಗ್ರಿಗಳ ವ್ಯಾಪಾರ ಕುಸಿತವಾಗಿದೆ. ಲಾಕ್ ಡೌನ್ ಸಮಯದಲ್ಲಿ ದೇವಾಲಯಗಳು ಮುಚ್ಚಿದ್ದರಿಂದ ವ್ಯಾಪಾರಿಗಳು ನಷ್ಟ ಅನುಭವಿಸಿದ್ದರು. ಯುಗಾದಿ, ಗಣೇಶ ಚತುರ್ಥಿ ಸೇರಿದಂತೆ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಕೋವಿಡ್ ಭೀತಿ ಇತ್ತು.
ದೇವಾಲಯಗಳ ಬಳಿ ಪೂಜಾ ಸಾಮಾಗ್ರಿಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಈಗಲೂ ಸರಿಯಾಗಿ ವ್ಯಾಪಾರ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಜನರು ಮಾರುಕಟ್ಟೆ ಪ್ರದೇಶಗಳತ್ತ ಬರುತ್ತಿಲ್ಲ. ಆನ್ಲೈನ್ ಸೇವೆಗಳ ಮೂಲಕ ಖರೀದಿಗೆ ಮುಂದಾಗುತ್ತಿದ್ದಾರೆ.

"ದೇವಾಲಯಗಳು ಮುಚ್ಚಿದ್ದರಿಂದ ಜನರು ಮನೆಯಲ್ಲಿಯೇ ಪೂಜೆಗಳನ್ನು ಮಾಡಲು ಆರಂಭಿಸಿದರು. ಇದರಿಂದಾಗಿ ವ್ಯಾಪಾರ ಕುಸಿತವಾಯಿತು" ಎಂದು ಪೂಜಾ ಸಾಮಾಗ್ರಿಗಳ ವ್ಯಾಪಾರಿಗಳು ಹೇಳಿದ್ದಾರೆ.
"ಜನರು ಈಗ ಆನ್ಲೈನ್ ಮೂಲಕ ಖರೀದಿ ಮಾಡುವುದು ಸುರಕ್ಷಿತ ಎಂದು ತಿಳಿದಿದ್ದಾರೆ. ಅಲ್ಲಿಯೇ ಖರೀದಿ ಮಾಡುತ್ತಿದ್ದಾರೆ. ಆದ್ದರಿಂದ, ವ್ಯಾಪಾರ ಕುಸಿತ ಕಂಡಿದೆ"ಎಂದು ಮತ್ತೊಬ್ಬರು ವ್ಯಾಪಾರಿಗಳು ಎಎನ್ಐಗೆ ಹೇಳಿಕೆ ನೀಡಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಬಾಗಿಲು ಮುಚ್ಚಿದ್ದ ದೇವಾಲಯಗಳು ಈಗ ಬಾಗಿಲಿ ತೆರೆದಿವೆ. ಆದರೆ, ಧಾರ್ಮಿಕ ಕಾರ್ಯಕ್ರಮ, ಜಾತ್ರೆಗಳನ್ನು ನಡೆಸಲು ಅನುಮತಿಯನ್ನು ನೀಡಿಲ್ಲ.
ಮಂಗಳವಾರವೂ ಬೆಂಗಳೂರು ನಗರದಲ್ಲಿ 5012 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 2,57,241ಕ್ಕೆ ಏರಿಕೆಯಾಗಿದೆ.












Click it and Unblock the Notifications