ದಸರಾ ರಶ್: ಬಸ್ಸಿನಲ್ಲಿ ಸೀಟಿದೆ ಹತ್ತಿ, ಆದರೆ ದುಡ್ಡು ಎಷ್ಟು ಅಂತ ಕೇಳ್ಬೇಡಿ
ಬೆಂಗಳೂರು, ಅಕ್ಟೋಬರ್ 17: ದಸರಾ, ಆಯುಧಪೂಜೆ ಹಿನ್ನೆಲೆಯಲ್ಲಿ ಸಾಲು ರಜೆಗಳು ಬಂದಿವೆ, ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆಯೂ ಹೆಚ್ಚಾಗಿದೆ. ಹಾಗಾಗಿ ಖಾಸಗಿ ಬಸ್ಗಳು ಸುಲಿಗೆಗಿಳಿದಿವೆ.
ಹಬ್ಬಗಳು ಬಂದರೆ ಸಾಕು ಖಾಸಗಿ ಬಸ್ಗಳು ವರ್ಷದಿಂದ ನಷ್ಟ ಅನುಭವಿಸಿದ ದುಡ್ಡನ್ನೆಲ್ಲಾ ಒಂದೇ ತಿಂಗಳಲ್ಲಿ ಪಡೆದುಕೊಳ್ಳುತ್ತವೆ. ದರವನ್ನು ಸಾಮಾನ್ಯ ದರಕ್ಕಿಂತ ಎರಡು ಪಟ್ಟು ಹೆಚ್ಚಿಗೆ ವಸೂಲಿ ಮಾಡುತ್ತಿವೆ. ಜನರು ಅನಿವಾರ್ಯವಾಗಿ ಕೇಳಿದಷ್ಟು ಹಣ ನೀಡಿ ಪ್ರಯಾಣಿಸುತ್ತಿದ್ದಾರೆ.
ಇನ್ನು ದೀಪಾವಳಿ ಹಬ್ಬವೂ ಹತ್ತಿರ ಬಂದಿದೆ, ಹಬ್ಬ ಒಂದು ವಾರವಿರುವಾಗಲೇ ಇವರ ವಸೂಲಿ ಆರಂಭವಾಗಿಬಿಡುತ್ತದೆ. ಉದ್ಯೋಗ ಸೇರಿದಂತೆ ಅನೇಕ ಕಾರಣಗಳಿಗಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಮಂದಿ ಬೆಂಗಳೂರಿಗೆ ಬರುತ್ತಾರೆ.

ಇದೀಗ ಗುರುವಾರದಿಂದ ಭಾನುವಾರದವರೆಗೆ ನಾಲ್ಕು ದಿನಗಳ ಕಾಲ ಸಾಲು ರಜೆಗಳು ಇರುವುದರಿದ ಊರುಗಳತ್ತ ಮುಖ ಮಾಡಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈ ಸಾಲುರಜೆಗಳ ಹಿನ್ನೆಲೆಯಲ್ಲಿ ಬೆಂಗಳೂರಿಂದ ವಿವಿಧೆಡೆ ಪ್ರಯಾಣಿಕರು ತೆರಳಲು ಬುಧವಾರದಿಂದ 2500 ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದೆ. ದೂರದ ಊರುಗಳಿಗೆ ತೆರಳುವವರು ವಾರದ ಹಿಂದೆಯೇ ಕೆಎಸ್ಆರ್ಟಿಸಿ ಮುಂಗಡ ಟಿಕೆಟ್ ಕಾಯ್ದಿರಿಸಿರುವುದರಿಂದ ಬಹುತೇಕ್ ಬಸ್ಗಳ ಆಸನಗಳು ಫುಲ್ ಆಗಿವೆ.
ಇಷ್ಟಾದರೂ ಬಸ್ಗಳ ಸಂಖ್ಯೆ ಕೊರತೆ ಜಾಸ್ತಿಯಾಗಿದೆ. ಇಂತಹ ಪರಿಸ್ಥಿತಿ ಲಾಭ ಪಡೆಯಲು ಬಹುತೇಕ ಖಾಸಗಿ ಬಸ್ ಆಪರೇಟರ್ ಗಳು, ಪ್ರಯಾಣ ದರವನ್ನು ಮನಬಂದಂತೆ ಹೆಚ್ಚಳ ಮಾಡಿವೆ.












Click it and Unblock the Notifications