PM Modi Bengaluru Visit : ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಸಂಪೂರ್ಣ ವೇಳಾಪಟ್ಟಿ ಹೀಗಿದೆ
ಬೆಂಗಳೂರು, ನವೆಂಬರ್ 09: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ 11ರಂದು ನಡೆಯಲಿರುವ ವಿವಿಧ ಸಮಾರಂಭಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಅವರ ಇಡೀ ದಿನದ ಕಾರ್ಯಕ್ರಮ ಪಟ್ಟಿ ಇಲ್ಲಿದೆ.
ನಾಡಪ್ರಭು ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆ, ಟರ್ಮಿನಲ್ 2, ಚೆನ್ನೈ-ಬೆಂಗಳೂರು-ಮೈಸೂರಿಗೆ ಸಂಚರಿಸಲಿರುವ ವಂದೆ ಭಾರತ್ ರೈಲು ಚಾಲನೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ನಂತರ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.
ಶುಕ್ರವಾರ ಬೆಳಗ್ಗೆ 10.5ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಂತರ ಅಲ್ಲಿಂದ ರಸ್ತೆ ಮೂಲಕ ಸಾಗಿ 10.30ಕ್ಕೆ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಅಲ್ಲಿ 10.32ಕ್ಕೆ ಜಗದ್ಗುರು ನಿರಂಜನಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಶ್ರೀಕನಕದಾಸರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಿದ್ದಾರೆ. 10.34ಗಂಟೆಗೆ ಶ್ರೀವಾಲ್ಮಿಕಿ ಪ್ರತಿಮೆಗೆ ವಾಲ್ಮಿಕಿ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ನಮಿಸಲಿದ್ದಾರೆ.

ವಂದೇ ಭಾರತ್ ಎಕ್ಸಪ್ರೆಸ್ ರೈಲಿಗೆ ಮೋದಿ ಚಾಲನೆ
ವಿಧಾನಸೌಧದಿಂದ 10.42ಗಂಟೆಗೆ ಹೊರಡಲಿರುವ ಪ್ರಧಾನಮಂತ್ರಿಗಳು ಮೆಜೆಸ್ಟಿಕ್ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿ ಫ್ಲಾಟ್ಫಾರಂ ನಂಬರ್ 7ರಲ್ಲಿ ಬಹುನಿರೀಕ್ಷಿತ ಬೆನ್ನೈ-ಬೆಂಗಳೂರು- ಮೈಸೂರಿಗೆ ಸಂಚರಿಸಲಿರುವ 'ವಂದೆ ಭಾರತ್ ಎಕ್ಸಪ್ರೆಸ್' ರೈಲಿನ ಮೊದಲ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಬಳಿಕ ಎರಡು ನಿಮಿಷದ ಅವಧಿಯಲ್ಲಿ ಕಾಶಿ ದರ್ಶನಕ್ಕೆ ಯಾತ್ರಾರ್ಥಿಗಳಿಗಾಗಿ ಬಿಡಲಾದ 'ಭಾರತ್ ಗೌರವ್' ರೈಲಿಗೆ ಫ್ಲಾಟ್ಫಾರಂ 8ರಲ್ಲಿ ಚಾಲನೆ ನೀಡಲಿದ್ದಾರೆ. ಒಟ್ಟು ಸುಮಾರು 20 ನಿಮಿಷ ಪ್ರಧಾನಮಂತ್ರಿಗಳು ಈ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ (ಕೆಎಸ್ಆರ್) ಕಳೆಯಲಿದ್ದಾರೆ.

ಹೆಲಿಕಾಪ್ಟರ್ ಮೂಲಕ ಕೆಐಎಗೆ ತೆರಳಲಿರುವ ಪ್ರಧಾನಿ
ಕೆಎಸ್ಆರ್ನಿಂದ ರಸ್ತೆ ಮೂಲಕ 11.10ಕ್ಕೆ ಹೊರಡಲಿರುವ ಪ್ರಧಾನಿಗಳು 11.20ಕ್ಕೆ ಹೆಬ್ಬಾಳದಲ್ಲಿನ ಏರ್ಫೋರ್ಸ್ ಟ್ರೈನಿಂಗ್ ಕಮಾಂಡ್ ಸೆಂಟರ್ಗೆ ತೆರಳಲಿದ್ದಾರೆ. ಅಲ್ಲಿಂದ 11.20ಕ್ಕೆ ಹೆಲಿಕಾಪ್ಟರ್ ಮೂಲಕ ಹೊರಟು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 11.40ಕ್ಕೆ ಬಂದಿಳಿಯಲಿದ್ದಾರೆ.

ಟರ್ಮಿನಲ್ 2 ಮತ್ತು ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ
ಹೆಲಿಪ್ಯಾಡ್ನಿಂದ ಹತ್ತು ನಿಮಿಷದ ಅವಧಿಯಲ್ಲಿ ಅಂದರೆ 11.50ಕ್ಕೆ ಉದ್ಘಾಟನೆಗೆ ಸಿದ್ಧಗೊಂಡಿರುವ ಬೃಹತ್ ಟರ್ಮಿನಲ್ 2 ಸ್ಥಳಕ್ಕೆ ಬಂದು ವೀಕ್ಷಣೆ ಮಾಡಲಿದ್ದಾರೆ. ಬಳಿಕ ಮಧ್ಯಾಹ್ನ 12.10ರ ವೇಳೆಗೆ ಟರ್ಮಿನಲ್ 2ಅನ್ನು ಉದ್ಘಾಟಿಸುವ ಮೂಲಕ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಿದ್ದಾರೆ.
ಟರ್ಮಿನಲ್ ಸ್ಥಳದಿಂದ ಮಧ್ಯಾಹ್ನ 12.20ಕ್ಕೆ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 108ಅಡಿ ಎತ್ತರ ಬೃಹತ್ ಕಂಚಿನ ಪ್ರತಿಮೆಯ ಸ್ಥಳಕ್ಕೆ ಬಂದ ಅದನ್ನು ಅನಾವರಗೊಳಿಸಲಿದ್ದಾರೆ. ಇಲ್ಲಿ ಮೂರು ನಿಮಿಷ ಪ್ರತಿಮೆ ಮುಂದೆ ಪ್ರಧಾನಿಗಳ ಜೊತೆಗೆ ಪೋಟೊ ಶೂಟ್ನಲ್ಲಿ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಪ್ರಗತಿ ಪ್ರತಿಮೆ ವೀಕ್ಷಣೆ, ಉದ್ಘಾಟನೆ ಸ್ಥಳದಲ್ಲಿ ಒಟ್ಟು 20 ನಿಮಿಷ ನರೇಂದ್ರ ಮೋದಿ ಕಳೆಯಲಿದ್ದಾರೆ.

65 ನಿಮಿಷ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಭಾಗಿ
ಪ್ರಗತಿ ಪ್ರತಿಮೆ ಸ್ಥಳದಿಂದ 12.40ಗಂಟೆಗೆ ಹೊರಟು 12.50ಕ್ಕೆ ಹತ್ತು ನಿಮಿಷದಲ್ಲಿ ಬಿಜೆಪಿ ಸರ್ಕಾರ ಆಯೋಜಿಸಿರುವ ಸಾರ್ವಜನಿಕ ಸಭೆಯ ವೇದಿಕೆ ತಲುಪಲಿದ್ದಾರೆ. ಅಲ್ಲಿ ನಾಡಗೀತೆಯ ಬಳಿಕ ನಾಡಪ್ರಭು ಕೆಂಪೇಗೌಡರು, ಕನಕದಾಸರು ಮತ್ತು ಒನಕೆ ಓಬವ್ವ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ವೇದಿಕೆಯಲ್ಲಿ ಪ್ರಧಾನಮಂತ್ರಿಗಳು ಕೆಂಪೇಗೌಡರ ಕುರಿತಾದ ವಿಡಿಯೋ ಕಣ್ತುಂಬಿಕೊಳ್ಳುವ ಜೊತೆಗೆ ಅಮೃತ 2 ಯೋಜನೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ತಲಾ ಹತ್ತು ನಿಮಿಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಿರ್ಮಲಾನಂದನಾಥ ಸ್ವಾಮೀಜಿ ಅವರು ಭಾಷಣ ಮಾಡಲಿದ್ದಾರೆ. ಬಳಿಕ ಸುಮಾರು 20 ನಿಮಿಷ ಪ್ರಧಾನಿಗಳು ಕರ್ನಾಟಕದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸ್ಥಳದಲ್ಲಿ ಒಟ್ಟು 65 ನಿಮಿಷ ಕಳೆಯಲಿದ್ದಾರೆ ಎಂದು ವೇಳಾಪಟ್ಟಿ ತಿಳಿಸಿದೆ.











Click it and Unblock the Notifications