ಜ.8-9ಕ್ಕೆ ಶಾಲೆಯಿದ್ದರೆ ಪೋಷಕರೇ ನೀವೇ ವಾಹನ ವ್ಯವಸ್ಥೆ ಮಾಡಿ
ಬೆಂಗಳೂರು, ಜನವರಿ 7: ಜನವರಿ 8-9 ರಂದು ಭಾರತ ಬಂದ್ ಇರುವ ಕಾರಣ ಒಂದೊಮ್ಮೆ ಶಾಲೆಯಿದ್ದರೆ ಪೋಷಕರೇ ಮಕ್ಕಳಿಗೆ ವಾಹನ ವ್ಯವಸ್ಥೆ ಮಾಡಬೇಕಾಗಿದೆ. ಶಾಲಾ ವಾಹನಗಳು, ಆಟೋಗಳು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ವ್ಯಾಪಾರ ಸಂಘಟನೆಗಳು ರಾಷ್ಟ್ರಾದ್ಯಂತ ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ಕರೆ ನೀಡಿರುವ ಬಂದ್ನಿಂದಾಗಿ ಸಾರಿಗೆ ಸಂಚಾರದ ಮೇಲೆ ಪ್ರಭಾವ ಉಂಟಾಗುವ ಸಾಧ್ಯತೆ ಇದೆ. ಇದರಿಂದಾಗಿ ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳು ಕೂಡ ಸಂಚಾರ ನಡೆಸದಿರಲು ನಿರ್ಧರಿಸಿವೆ.
ಜನವರಿ 8-9 ರಂದು ರಜೆಯ ಕುರಿತು ಇಂದು ಆಯಾ ಶಾಲೆಗಳಲ್ಲಿ ನಿರ್ಧಾರವಾಗಲಿದೆ. ಶಾಲೆಗಳಿದ್ದರೆ ಬಹುಶಃ ನಾಳೆ ಮತ್ತು ನಾಡಿದ್ದು ಪೋಷಕರೇ ತಮ್ಮ ಮಕ್ಕಳಿಗೆ ಸಂಚಾರದ ವ್ಯವಸ್ಥೆ ಮಾಡಬೇಕಾಗಿ ಬರಬಹುದು.

ಸಂಘಟನೆಯ ಸುಮಾರು 10 ಸಾವಿರ ವ್ಯಾನ್ ಚಾಲಕರು ಬಂದ್ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ವಾಹನ ಸಂಚಾರ ನಡೆಸದೇ ಇರಲು ನಿರ್ಧರಿಸಿವೆ ಎಂದು ಕರ್ನಾಟಕ ಶಾಲೆಗಳ ಒಕ್ಕೂಟಗಳು ಮತ್ತು ಹಗುರ ಮೋಟಾರು ವಾಹನಗಳ ಚಾಲಕರ ಒಕ್ಕೂಟ ತಿಳಿಸಿದೆ.
ಈ ಒಕ್ಕೂಟದಲ್ಲಿ ಬಾಡಿಗೆಗೆ ಸಂಚರಿಸುವ ಶಾಲಾ ವ್ಯಾನ್ ಚಾಲಕರು, ಶಾಲೆಗಳಿಗೆ ಗುತ್ತಿಗೆ ಆಧಾರದಲ್ಲಿ ವ್ಯಾನ್ ಸೇವೆ ವ್ಯವಸ್ಥೆ ಕಲ್ಪಿಸುವವರು ಸೇರಿರುತ್ತಾರೆ. ಶಾಲೆಗಳಿಂದಲೇ ಸಂಚಾರದ ವ್ಯವಸ್ಥೆಯನ್ನು ಹೊಂದಿರುವ ಬಸ್, ವ್ಯಾನ್ ಗಳು ಒಳಗೊಂಡಿರುವುದಿಲ್ಲ. ಇಂತಹ ಬಸ್ಸು, ವ್ಯಾನ್ ಗಳ ಸಂಚಾರ ಕುರಿತು ನಾಳೆ ಮತ್ತು ನಾಡಿದ್ದು ಶಾಲಾ ವ್ಯವಸ್ಥಾಪಕ ಮಂಡಳಿಯೇ ನಿರ್ಧರಿಸಲಿದೆ.
ಬೆಂಗಳೂರಿನಲ್ಲಿ ಸುಮಾರು 20 ಸಾವಿರ ವ್ಯಾನ್ ಚಾಲಕರಿದ್ದು, ರಾಜ್ಯದಲ್ಲಿ ಒಟ್ಟಾರೆಯಾಗಿ ಸುಮಾರು 43 ಸಾವಿರ ವ್ಯಾನ್ ಚಾಲಕರಿದ್ದಾರೆ ಎನ್ನುತ್ತಾರೆ ಕರ್ನಾಟಕ ಸಂಯುಕ್ತ ಶಾಲೆಗಳು ಮತ್ತು ಹಗುರ ಮೋಟಾರು ವಾಹನಗಳ ಚಾಲಕರ ಒಕ್ಕೂಟದ ಅಧ್ಯಕ್ಷ ಶಣ್ಮುಗಮ್ ಪಿಎಸ್.
ಇನ್ನು ಪರೀಕ್ಷೆ ನಡೆಯಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ಪರೀಕ್ಷೆಯನ್ನು ನಡೆಸಬೇಕೆ ಮುಂದೂಡಬೇಕೆ ಎಂಬ ಬಗ್ಗೆ ಇನ್ನೂ ನಿಗದಿಯಾಗಿಲ್ಲ.












Click it and Unblock the Notifications