ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ: ಕೇಂದ್ರ ಸರ್ಕಾರದಿಂದ ಹೊಸ ಗೈಡ್ ಲೈನ್ಸ್
ಬೆಂಗಳೂರು, ಏಪ್ರಿಲ್ 26: ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಇಡೀ ದೇಶದೆಲ್ಲೆಡೆ ಆಕ್ಸಿಜನ್ಗೆ ಹಾಹಾಕಾರ ತಲೆದೋರಿದೆ. ಅದರಲ್ಲೂ ದೆಹಲಿ ಮತ್ತು ಬೆಂಗಳೂರಿನಲ್ಲಿ ಕೊರೊನಾ ರೋಗಿಗಳ ಜೀವ ಉಳಿಸಲು ಆಸ್ಪತ್ರೆಗಳು ಆಕ್ಸಿಜನ್ ಗಾಗಿ ಪರದಾಡುತ್ತಿವೆ. ಇದರ ನಡುವೆ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಈ ಆದೇಶದಿಂದ ಇಡೀ ದೇಶದಲ್ಲಿ ತಲೆದೋರಿರುವ ಆಕ್ಸಿಜನ್ ಕೊರತೆ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣ ಗೋಚರಿಸುತ್ತಿದೆ.
ರಾಷ್ಟ್ರದಲ್ಲಿ ಕೊರೊನಾ ಅಲೆ ಹೆಚ್ಚಾಗುತ್ತಿದ್ದಂತೆ ಕೇಂದ್ರ ಸರ್ಕಾರ ಕೈಗಾರಿಕೆಗಳಿಗೆ ಪೂರೈಕೆ ಮಾಡುತ್ತಿರುವ ಆಕ್ಸಿಜನ್ ಮೇಲೆ ನಿರ್ಬಂಧ ವಿಧಿಸಿ, ಕೇವಲ ವೈದ್ಯಕೀಯ ಕ್ಷೇತ್ರಕ್ಕೆ ಪೂರೈಕೆ ಮಾಡುವಂತೆ ಸೂಚನೆ ನೀಡಿತ್ತು. ಆದರೆ, ಏ. 18 ರಂದು ಹೊರಡಿಸಿದ್ದ ಈ ಆದೇಶ ಏ. 22 ರಿಂದ ಜಾರಿಯಾಗಿತ್ತು. ಇದರ ಪ್ರಕಾರ ಅಣು ಸ್ಥಾವರ, ಸ್ಟೀಲ್ ಉದ್ಯಮಗಳು, ಪೆಟ್ರೋಲಿಯಂ ಘಟಕಗಳು, ಆಹಾರ ಮತ್ತು ನೀರು ಶುದ್ಧೀಕರಣ ಘಟಕಗಳು, ಕೊಳಚೆ ನೀರಿನ ಟ್ರೀಟ್ ಮೆಂಟ್ ಪ್ಲಾಂಟ್ಗಳಿಗೆ ಆಕ್ಸಿಜನ್ ಬಳಕೆ ನಿರ್ಬಂಧಗಳನ್ನು ಸಡಿಲಿಸಿ ಆದೇಶ ಹೊರಡಿಸಿತ್ತು.
ಕೇಂದ್ರ ಸರ್ಕಾರದ ಈ ಆದೇಶ ಮುಂದಿಟ್ಟುಕೊಂಡು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಸ್ಟೀಲ್ ಪ್ಲಾಂಟ್ಗಳು ಆಕ್ಸಿಜನ್ ಬಳಕೆ ಮಾಡುತ್ತಿದ್ದವು. ಕೊರೋನಾ ಸೋಂಕಿತರು ಆಕ್ಸಿಜನ್ ಸಿಗದೇ ಬೀದಿ ಹೆಣಗಳಾಗಿ ಬೀಳುತ್ತಿದ್ದರೂ ಸ್ಟೀಲ್ ಪ್ಲಾಂಟ್ ಕಣ್ಣುಗಳಿಗೆ ದೇಶದ ಪರಿಸ್ಥಿತಿ ಬಿದ್ದಿರಲಿಲ್ಲ. ಕೇಂದ್ರ ಸರ್ಕಾರದ ಅವೈಜ್ಞಾನಿಕ ಆದೇಶದಿಂದ ದೇಶದಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿರುವ ಬಗ್ಗೆ ಒನ್ಇಂಡಿಯಾ ಕನ್ನಡ ಏ. 25 ರಂದು ವಿಸ್ಕೃತ ವರದಿ ಪ್ರಕಟಿಸಿತ್ತು.

ಕೇಂದ್ರ ಸರ್ಕಾರದ ಈ ಆದೇಶದಿಂದ ರಾಜ್ಯದಲ್ಲಿ ಜಿಂದಾಲ್ ಸ್ಟೀಲ್ ಕಾರ್ಯ ನಿರ್ವಹಿಸುತ್ತಿತ್ತು. ರಾಜ್ಯಕ್ಕೆ ಅಗತ್ಯ ಆಕ್ಸಿಜನ್ ಪೂರೈಕೆ ಮಾಡದ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಕೇಂದ್ರ ಸರ್ಕಾರ ಏ. 18 ರಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ.
ಆಕ್ಸಿಜನ್ ಪೂರೈಕೆ ಸಂಬಂಧ ಪರಿಷ್ಕೃತ ಆದೇಶವನ್ನು ಕೇಂದ್ರ ಸರ್ಕಾರ ಏ. 25 ರಂದು ಹೊರಡಿಸಿದೆ. ಈ ಪರಿಷ್ಕೃತ ಆದೇಶದ ಪ್ರಕಾರ, ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶಕ್ಕೆ ಲಿಕ್ವಿಡ್ ಆಕ್ಸಿಜನ್ ಕೊರತೆ ಅಗತ್ಯತೆ ಮನಗೊಂಡು ಕೈಗಾರಿಕೆಗಳಲ್ಲಿ ಆಕ್ಸಿಜನ್ ಬಳಕೆ ಮೇಲೆ ನಿರ್ಬಂಧ ವಿಧಿಸಲಾಗುತ್ತಿದೆ. ಆಕ್ಸಿಜನ್ ಉತ್ಪಾದನಾ ಘಟಕಗಳಲ್ಲಿ ಈಗಾಗಲೇ ಸ್ಟಾಕ್ ಇರುವ ಲಿಕ್ವಿಡ್ ಆಕ್ಸಿಜನ್ ಜತೆಗೆ ಗರಿಷ್ಠ ಉತ್ಪಾದನೆ ಮಾಡಿ ಸಂಪೂರ್ಣ ಆಕ್ಸಿಜನ್ನ್ನು ವೈದ್ಯಕೀಯ ಬಳಕೆಗೆ ಮೀಸಲಿಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಸೆಕ್ಷನ್ 10 (2) (I) ಹಾಗೂ ಸೆಕ್ಷನ್ 65 ರ ಪ್ರಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಲಿಕ್ವಿಡ್ ಆಕ್ಸಿಜನ್ನನ್ನು ಮೆಡಿಕಲ್ ಬಳಕೆಗೆ ಹೊರತು ಪಡಿಸಿ ಅನ್ಯ ಉದ್ದೇಶಕ್ಕೆ ಬಳಸಬಾರದು. ಆಕ್ಸಿಜನ್ ಉತ್ಪಾದನಾ ಘಟಕಗಳು ಈಗಾಗಲೇ ಉತ್ಪಾದನೆ ಮಾಡಿರುವ ಆಕ್ಸಿಜನ್ ನನ್ನು ಮೆಡಿಕಲ್ ಬಳಕೆಗೆ ಸರ್ಕಾರಕ್ಕೆ ಒದಗಿಸಬೇಕು. ಇದರ ಜತೆಗೆ ಗರಿಷ್ಠ ಆಕ್ಸಿಜನ್ ಉತ್ಪಾದನೆ ಮಾಡಿ ಮೆಡಿಕಲ್ ಉದ್ದೇಶಕ್ಕೆ ಬಳಸಲು ಪೂರೈಕೆ ಮಾಡಬೇಕು. ಮುಂದಿನ ಆದೇಶದ ವರೆಗೂ ಈ ಆದೇಶ ಅಸ್ತಿತ್ವದಲ್ಲಿರುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ.
Recommended Video
ಜಿಂದಾಲ್ ಲಿಕ್ವಿಡ್ ಆಕ್ಸಿಜನ್ ಈಗ ಪೂರ್ಣ ಬಳಕೆ: ನೆರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕೈ ಮೀರಿದೆ. ಜಿಂದಾಲ್ ಮತ್ತು ಕಲ್ಯಾಣಿ ಸ್ಟೀಲ್ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದವು. ಅಲ್ಪ ಪ್ರಮಾಣದ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದವು. ಇದೀಗ ಸ್ಟೀಲ್ ಘಟಕಗಳನ್ನು ನಿಲ್ಲಿಸಿಯಾದರೂ ಆಕ್ಸಿಜನ್ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಕೇಂದ್ರ ಸರ್ಕಾರದ ಈ ಮಹತ್ವದ ಆದೇಶದಿಂದ ಆಕ್ಸಿಜನ್ ಉತ್ಪಾದನಾ ಘಟಕಗಳು ಗರಿಷ್ಠ ಉತ್ಪಾದನೆಗೆ ಆದ್ಯತೆ ನೀಡಲಿದ್ದು, ಕೆಲವೇ ದಿನಗಳಲ್ಲಿ ಆಕ್ಸಿಜನ್ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆಯಿದೆ. ಜಿಂದಾಲ್ ಸ್ಟೀಲ್ ಮತ್ತು ಕಲ್ಯಾಣಿ ಸ್ಟೀಲ್ನಂಥ ದೈತ್ಯ ಕಂಪನಿಗಳು ಉತ್ಪಾದಿಸುವ ಆಕ್ಸಿಜನ್ ಪೂರ್ಣ ಪ್ರಮಾಣದಲ್ಲಿ ಪೂರೈಕೆ ಮಾಡಿದಲ್ಲಿ ಸಮಸ್ಯೆ ಉದ್ಭವಿಸುವ ಅಗತ್ಯವೇ ಇರುವುದಿಲ್ಲ.












Click it and Unblock the Notifications