ಒರಿಸ್ಸಾ ಮೂಲದ ತಾಯಿ ಮತ್ತು ಮಗನ ಬರ್ಬರ ಹತ್ಯೆ !
ಬೆಂಗಳೂರು, ಏಪ್ರಿಲ್ 08: ರಾಜಧಾನಿಯಲ್ಲಿ ತಾಯಿ ಹಾಗೂ ಮಗನನ್ನು ಚಾಕುವಿನಿಂದ ಇರಿದು ಜೋಡಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಒರಿಸ್ಸಾ ಮೂಲದ ತಾಯಿ ಮತ್ತು ಮಗ ಕೇವಲ ಇಪ್ಪತ್ತು ದಿನದ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದರು. ಇದೀಗ ಇಬ್ಬರು ಕೊಲೆಯಾಗಿರುವುದು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಒರಿಸ್ಸಾ ಮೂಲದ ಮಮತಾ ಬಸು (75) ಹಾಗೂ ಈಕೆಯ ಪುತ್ರ ದೇವಬ್ರತಾ (45 ) ಕೊಲೆಯಾದವರು. ಒರಿಸ್ಸಾ ಮೂಲದ ದೇವಬ್ರತಾಗೆ ಬೆಂಗಳೂರಿನ ಕಾಲೇಜುವೊಂದರಲ್ಲಿ ಉಪನ್ಯಾಸಕ ಕೆಲಸ ಸಿಕ್ಕಿತ್ತು. ಇಪ್ಪತ್ತು ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದು, ಜೆ.ಪಿ.ನಗರದ ಸಂತೃಪ್ತಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಬುಧವಾರ ಮಧ್ಯರಾತ್ರಿ 1.30 ರ ಸುಮಾರಿಗೆ ಬೈಕ್ನಲ್ಲಿ ಬಂದಿರುವ ದುಷ್ಕರ್ಮಿ, ಚಾಕುವಿನಿಂದ ಇಬ್ಬರಿಗೂ ಇರಿದು ಕೊಲೆ ಮಾಡಿದ್ದಾನೆ. ಆನಂತರ ಮನೆಯಲ್ಲಿದ್ದ ಲ್ಯಾಪ್ಟಾಪ್, ಮೊಬೈಲ್, ಚಿನ್ನಾಭರಣ ಹಾಗೂ ಎಟಿಎಂ ಕಾರ್ಡ್ ಗಳನ್ನು ಕೊಂಡಿಯ್ದಿದ್ದಾನೆ. ಗುರುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಕಮಲಪಂತ್, ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೇಲ್ನೋಟಕ್ಕೆ ಚಿನ್ನಾಭರಣ ಮತ್ತು ಹಣಕ್ಕಾಗಿ ಕೊಲೆ ಮಾಡಿರುವ ಸಾಧ್ಯತೆಯಿದೆ. ಆದರೆ, ಸುಮಾರು ಮನೆಗಳಿರುವ ಈ ಜಾಗದಲ್ಲಿ ದೇವಬ್ರತಾ ಕುಟುಂಬ ವಾಸವಿದ್ದ ಮನೆಯನ್ನೇ ಯಾಕೆ ಟಾರ್ಗೆಟ್ ಮಾಡಿದರು ? ಏನಾದರೂ ವಿವಾದ ಹಿನ್ನೆಲೆಯಲ್ಲಿ ಒರಿಸ್ಸಾದಿಂದ ಬೆಂಗಳೂರಿಗೆ ಬಂದಿದ್ದರೇ ? ಹಳೆಯ ವೈಷಮ್ಯ, ಇತರೆ ಕೌಟುಂಬಿಕ ವಿಚಾರದಲ್ಲಿ ಈ ಕೊಲೆ ನಡೆದಿರಬಹುದೇ ಎಂಬ ಸಾಧ್ಯತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Recommended Video
ಚಿನ್ನಾಭರಣಕ್ಕೆ ನಡೆದ ಕೊಲೆ ಎಂದು ಬಿಂಬಿಸಲು ಕಳ್ಳತನ ಮಾಡಿರುವ ಸಾಧ್ಯತೆಯಿದೆ. ಘಟನಾ ಸ್ಥಳ ಆಧರಿಸಿ ಆರೋಪಿಯ ಜಾಡು ಹಿಡಿಯಲು ಸಿಸಿಟಿವಿ ದೃಶ್ಯಗಳನ್ನು ಸಹ ಪೊಲೀಸರು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸಹ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.