ಗಣೇಶ ವಿಸರ್ಜನೆ; ಯುವಕರ ಪರ ಧ್ವನಿ ಎತ್ತಿದ ಆರ್.ಅಶೋಕ್
ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿರುವ ಕಟ್ಟುನಿಟ್ಟಿನ ಕ್ರಮಗಳ ವಿರುದ್ಧ ಬಿಜೆಪಿ ನಾಯಕರು ಗರಂ ಆಗುತ್ತಿದ್ದಾರೆ. ವರ್ಷಕ್ಕೊಮ್ಮೆ ಆಚರಿಸುವ ಹಿಂದೂಗಳ ಈ ಹಬ್ಬಕ್ಕೆ ಉದ್ದೇಶಪೂರ್ವಕವಾಗಿ ಅಡೆತಡಗಳನ್ನು ತರುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶನ ವಿಸರ್ಜನೆ ನಿಗದಿ ಮಾಡಿರುವ ಸಮಯದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಕೆಂಡಾಮಂಡಲರಾಗಿದ್ದಾರೆ.
ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ನಿಟ್ಟಿನಲ್ಲಿ ರಾತ್ರಿ 10 ಗಂಟೆಯೊಳಗೆ ಗಣೇಶ ಮೂರ್ತಿ ವಿಸರ್ಜಿಸಬೇಕು ಎಂಬ ನಿಯಮಾವಳಿಯನ್ನು ತರಲಾಗಿದೆ. ಇದನ್ನು ಖಂಡಿಸಿರುವ ಆರ್.ಅಶೋಕ್, ಗಣೇಶ ಮೂರ್ತಿಗಳ ವಿಸರ್ಜನೆಯನ್ನ ರಾತ್ರಿ 10 ಗಂಟೆವರೆಗೆ ಮಾತ್ರ ಮಾಡಬೇಕು ಎಂಬುದು ಅರ್ಥವಿಲ್ಲದ ನಿಯಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼಗಣೇಶೋತ್ಸವ ಪೆಂಡಾಲ್ಗಳಲ್ಲಿ FSSAI ಮಾನ್ಯತೆ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆಗಳು ತಯಾರಿಸಿದ ಪ್ರಸಾದವನ್ನು ಮಾತ್ರವೇ ವಿತರಿಸಬೇಕು ಎಂದು ಆದೇಶ ಹೊರಡಿಸಿದ್ದ ತುಘಲಕ್ ಸರ್ಕಾರ ಈಗ ಗಣೇಶ ಮೂರ್ತಿಗಳ ವಿಸರ್ಜನೆ ವಿಚಾರದಲ್ಲೂ ಎಂಬ ಅರ್ಥವಿಲ್ಲದ ನಿಯಮ ಹೇರಿದೆʼ ಎಂದಿದ್ದಾರೆ.
ಕೇಸರಿ ಕುಂಕುಮ ಕಂಡರೆ ಉರಿದು ಬೀಳುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹಿಂದೂಗಳ ಹಬ್ಬ, ಜಾತ್ರೆ, ಉತ್ಸವಗಳೆಂದರೆ ಅದೇನೋ ಹೊಟ್ಟೆ ಉರಿ, ತಳಮಳ. ರಂಜಾನ್ ಸಂದರ್ಭದಲ್ಲಿ ನಡೆಯುವ ಇಫ್ತಾರ್ ಕೂಟಗಳಲ್ಲೆಲ್ಲ FSSAI ಮಾನ್ಯತೆ ಪಡೆದಿರುವ ಸಂಸ್ಥೆಗಳು, ವ್ಯಕ್ತಿಗಳೇ ಆಹಾರ ತಯಾರಿಸುತ್ತಿದ್ದಾರಾ? ಕ್ರಿಸ್ಮಸ್ ಕೇಕ್ ತಯಾರಿಸುವವರೆಲ್ಲ FSSAI ಮಾನ್ಯತೆ ಪಡೆದಿರುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಅನ್ಯಧರ್ಮೀಯರಿಗೆ ಮಾತ್ರ ಬೆಣ್ಣೆ, ಹಿಂದೂಗಳಿಗೆ ಸುಣ್ಣ ಎನ್ನುವ ಈ ತಾರತಮ್ಯ ಏಕೆ? ಜಾತ್ಯತೀತತೆ ಅಂದರೆ ಇದೇನಾ? ಅಥವಾ ರಾಹುಲ್ ಗಾಂಧಿ ಅವರು ತೋರಿಸುವ ಸಂವಿಧಾನದಲ್ಲಿ ಹಿಂದೂಗಳು ಎರಡನೇ ದರ್ಜೆ ನಾಗರೀಕರು ಎಂದು ಬರೆಯಲಾಗಿದೆಯಾ? ಎಂದು ಗುಡುಗಿದ್ದಾರೆ.
ʼಸಣ್ಣ ಸಣ್ಣ ಲೇಔಟ್ಗಳಲ್ಲಿ, ಅಪಾರ್ಟ್ಮೆಂಟ್ಗಳಲ್ಲಿ, ರಸ್ತೆಗಳ ಬದಿಯಲ್ಲಿ ಗಣೇಶ ಕೂರಿಸುವ ಪದ್ಧತಿ ಇದೆ. ಅವರೆಲ್ಲರೂ ಸಂಜೆ ಶಾಲಾ-ಕಾಲೇಜು, ಉದ್ಯೋಗ, ವ್ಯಾಪಾರದ ಕೆಲಸ ಮುಗಿದ ನಂತರ ಸಂಜೆ ಪೂಜೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಮೆರವಣಿಗೆ ಮೂಲಕ ವಿಸರ್ಜನೆ ಮಾಡುವ ಯೋಜನೆ ಹಾಕಿಕೊಂಡಿರುತ್ತಾರೆʼ ಎಂದಿದ್ದಾರೆ.
ʼಮುಖ್ಯವಾಗಿ ರಾತ್ರಿ 8-9 ಗಂಟೆ ನಂತರ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯೂ ಇರುವುದಿಲ್ಲ. ಆಗ ಮೆರವಣಿಗೆ ಶುರು ಮಾಡಿದರೆ ವಿಸರ್ಜನೆ ಮಾಡುವ ವೇಳೆಗೆ ಕನಿಷ್ಠ ಪಕ್ಷ ಏನಿಲ್ಲವಾದರೂ ರಾತ್ರಿ 11 ಗಂಟೆಯಾದರೂ ಆಗಿರುತ್ತದೆ. ನಿಟ್ಟಿನಲ್ಲಿ ಸಾರ್ವಜನಿಕರ ಅನುಕೂಲ ಹಾಗೂ ಟ್ರಾಫಿಕ್ ಸಮಸ್ಯೆ ಗಮನದಲ್ಲಿಟ್ಟುಕೊಂಡು, ಗಣೇಶ ವಿಸರ್ಜನೆ ಸಮಯವನ್ನ ರಾತ್ರಿ 11:30ರವರೆಗೆ ವಿಸ್ತರಿಸಬೇಕುʼ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗಣೇಶೋತ್ಸವ ಪೆಂಡಾಲ್ಗಳಲ್ಲಿ FSSAI ಮಾನ್ಯತೆ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆಗಳು ತಯಾರಿಸಿದ ಪ್ರಸಾದವನ್ನು ಮಾತ್ರವೇ ವಿತರಿಸಬೇಕು ಎನ್ನುವ ನಿಯಮಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ವಿರೋಧ ವ್ಯಕ್ತಪಡಿಸಿದ್ದರು.












Click it and Unblock the Notifications