ಕೊರೊನಾ ಸೋಂಕಿತನಿಗೆ ರೈಲ್ವೆ ಇಲಾಖೆ ಕೊಠಡಿಯಲ್ಲೇ ಇರಲು ಅವಕಾಶ ಕೊಟ್ಟ ಅಧಿಕಾರಿ
ಬೆಂಗಳೂರು, ಮಾರ್ಚ್ 19: ರೈಲ್ವೆ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ತನ್ನ ಮಗನಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದಿದ್ದರೂ ಕೂಡ ರೈಲ್ವೆ ಇಲಾಖೆಯ ಕೊಠಡಿಯಲ್ಲೇ ಇರಲು ಅವಕಾಶಕೊಟ್ಟು ಎಡವಟ್ಟು ಮಾಡಿದ್ದಾರೆ.
ಅಕ್ಷರಸ್ಥರಾಗಿ ಮಗನನ್ನು ಆಸ್ಪತ್ರೆಗೆ ಕರೆಯ್ಯುವ ಬದಲು ನಾಲ್ಕು ದಿನ ಮನೆಗೂ ಕಳುಹಿಸದೆ ಇಲಾಖೆಯ ಕೊಠಡಿಯಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟಿದ್ದಾರೆ.
ಕೊರೊನಾ ವೈರಸ್ ಕಾಟದಿಂದ 84 ರೈಲುಗಳ ಸಂಚಾರ ರದ್ದು
ಹೌದು.. ನೈಋತ್ಯ ರೈಲ್ವೇ ಇಲಾಖೆಯ ಗೆಜೆಟೆಡ್ ಅಧಿಕಾರಿಯೊಬ್ಬರು ಇಂತಹುದೊಂದು ಅಪಾಯ ತಂದೊಡ್ಡಿದ್ದು, ಇತ್ತೀಚೆಗೆ ಜರ್ಮನಿಯಿಂದ ವಾಪಾಸ್ ಆಗಿದ್ದ ತಮ್ಮ ಮಗನನ್ನು ಯಾವುದೇ ರೀತಿಯ ವೈದ್ಯಕೀಯ ತಪಾಸಣೆಗೊಳಪಡಿಸದೇ ಇಲಾಖೆಯ ಕ್ವಾರ್ಟರ್ಸ್ ನಲ್ಲಿ ವಿಶ್ರಾಂತಿ ಮಾಡಲು ಬಿಟ್ಟಿದ್ದಾರೆ.
ರೈಲ್ವೇ ಇಲಾಖೆ ಪ್ರಯಾಣಿಕರಿಗೆ ಮತ್ತು ಅಧಿಕಾರಿಗಳಿಗೆ ಸಾಕಷ್ಟು ಮುಂಜಾಗ್ರತಾ ಸೂಚನೆ ನೀಡಿದ್ದರೂ ಜವಾಬ್ದಾರಿಯುತ ಅಧಿಕಾರಿಯ ಬೇಜವಾಬ್ದಾರಿ ನಡೆ ಇದೀಗ ರೈಲ್ವೆ ಇಲಾಖೆ ಇತರೆ ಸಿಬ್ಬಂದಿಗಳ ಆರೋಗ್ಯವನ್ನು ಅಪಾಯಕ್ಕೂ ದೂಡಿದೆ.
ಈಗಾಗಲೇ ಈ ಸಂಬಂಧ ಇಲಾಖೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಈ ವಿಶ್ರಾಂತಿ ಗೃಹದಲ್ಲಿ ತಂಗಿದ್ದ ಇತರೆ ಅಧಿಕಾರಿಗಳನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತಿದೆ. ಅಲ್ಲದೆ ಮಹಿಳಾ ಅಧಿಕಾರಿಯನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು, ಆಕೆಯೊಂದಿಗೆ ಸಂಪರ್ಕದಲ್ಲಿದ್ದ ಎಲ್ಲ ಸಿಬ್ಬಂದಿಗಳು ಮತ್ತು ಅಧಿಕಾರಿಗಳನ್ನೂ ತಪಾಸಣೆ ಮಾಡಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಇದೇ ಮಾರ್ಚ್ 13ರಂದು ಮಹಿಳಾ ಅಧಿಕಾರಿಯ ಮಗ ಜರ್ಮನಿಯಿಂದ ಸ್ಪೈನ್ ಮೂಲಕವಾಗಿ ಬೆಂಗಳೂರಿಗೆ ವಾಪಸ್ ಆಗಿದ್ದು, ಅಧಿಕಾರಿಗಳ ವಿಶ್ರಾಂತಿ ಗೃಹ (ಒಆರ್ ಹೆಚ್)ದಲ್ಲಿ ತಂಗಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆಯಲ್ಲೇ ಅಧಿಕಾರಿಯ ಮನೆ ಇದೆಯಾದರೂ, ಅಧಿಕಾರಿ ಆತನನ್ನು ಮನೆಗೆ ಕಳುಹಿಸಿಲ್ಲ.
ಈ ವೇಳೆ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಆತನಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ಸ್ಪಷ್ಟವಾಗಿತ್ತು. ಪ್ರಸ್ತುತ ಆತನನ್ನು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.
ಅಧಿಕಾರಿಯ ವೈರಸ್ ಸೋಂಕಿತ ಮಗ ತಂಗಿದ್ದ ಮಾರ್ಚ್ 13ರಿಂದ ಮಾರ್ಚ್ 1ರವರೆಗೂ ಸುಮಾರು 40 ಮಂದಿ ಅದೇ ವಿಶ್ರಾಂತಿ ಗೃಹದಲ್ಲಿ ತಂಗಿದ್ದರು ಎಂಬ ಅಘಾತಕಾರಿ ಬೆಳಕಿಗೆ ಬಂದಿದೆ. ಇದೀಗ ಅವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.