ಬೆಂಗಳೂರಿನ ಸಂಚಾರ ಸಮಸ್ಯೆ; ಸುಧಾಮೂರ್ತಿ ಹೇಳಿದ್ದೇನು?
ಬೆಂಳೂರು ಜೂ.27; "ಬೆಂಗಳೂರಿಗೆ ಐಟಿ ಉದ್ದಿಮೆಗಳು ಬಾರದಿದ್ದರೆ ನಗರದಲ್ಲಿ ನಿತ್ಯ ಈ ಮಟ್ಟಿನ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುತ್ತಿರಲಿಲ್ಲ" ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ಹೇಳಿದರು.
ಸೋಮವಾರ ಬೆಂಗಳೂರು ನಗರದಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಪರವಾಗಿ 'ಕೆಂಪೇಗೌಡ ಅಂತಾರಾಷ್ಟ್ರೀಯ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, "ಬೆಂಗಳೂರಿಗೆ ಐಟಿ ಕಂಪನಿಗಳು ಬಾರದಿದ್ದರೆ ನಗರದಲ್ಲಿ ಇಷ್ಟೊಂದು ಸಂಚಾರ ಸಮಸ್ಯೆ ಇರುತ್ತಿರಲಿಲ್ಲ" ಎಂದರು.
"ಬೆಂಗಳೂರು ಐಟಿ ಹಬ್ ಆಗಿ ಬೆಳೆದಿದೆ. ಇದರಿಂದ ನಮ್ಮ ಮಕ್ಕಳಿಗೆ ಸ್ವಂತ ರಾಜ್ಯ, ಊರಿನಲ್ಲೇ ಕೆಲಸ ಸಿಕ್ಕಿದೆ. ನಮ್ಮ ಮಕ್ಕಳು ನಮ್ಮ ಜತೆಯಲ್ಲೇ ಇದ್ದಾರೆ. ಇಲ್ಲದಿದ್ದರೆ ಬೇರೆ ರಾಜ್ಯ ಇಲ್ಲವೇ ವಿದೇಶಗಳಿಗೆ ಕೆಲಸ ಅರಸಿ ಹೋಗಬೇಕಿತ್ತು" ಎಂದು ಹೇಳಿದರು.
"ಈಗ ಬೆಂಗಳೂರಿನಲ್ಲೇ ಕೆಲಸ ಪಡೆದ ನಮ್ಮ ಮಕ್ಕಳು ಕನ್ನಡದ ಹುಡುಗ-ಹುಡುಗಿಯರನ್ನೇ ಮದುವೆ ಆಗುತ್ತಿದ್ದಾರೆ" ಎಂದು ಸುಧಾಮೂರ್ತಿ ಬೆಂಗಳೂರಿನ ಐಟಿ ಉದ್ಯಮದ ಬೆಳವಣಿಗೆ ಕುರಿತು ವಿವರಿಸಿದರು.
ಹುಬ್ಬಳ್ಳಿ ಅಭಿವೃದ್ಧಿಗೆ ಮನವಿ; "ರಾಜ್ಯ ರಾಜಧಾನಿಯಲ್ಲಿ ಐಟಿ ಉದ್ಯಮ ಬೆಳೆಯಲು ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ನೀಡಿ ಕೊಡುಗೆ ಮರೆಯುವಂತಿಲ್ಲ. ಬೆಂಗಳೂರಿನಲ್ಲಿ ಎಲ್ಲ ಕೈಗಾರಿಕೆ, ಕಾರ್ಖಾನೆ, ಐಟಿ ಕಂಪನಿಗಳಿಂದ ತುಂಬಿದೆ. ಅಭಿವೃದ್ಧಿ ಹೊಂದಿದೆ. ಇಲ್ಲಿಯೇ ಹೆಚ್ಚು ಉದ್ಯೋಗವಕಾಶ ಇದೆ. ಇದೇ ರೀತಿ ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿಯಲ್ಲಿ ಸಹ ಅಭಿವೃದ್ಧಿ ಆಗಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹುಬ್ಬಳ್ಳಿ ಆಗಲಿ" ಎಂದು ಅವರು ಮನವಿ ಮಾಡಿದರು.
ಕೆಂಪೇಗೌಡರ ಕೊಡುಗೆ ಅಪಾರ; "ಐಟಿಸಿಟಿ ಎಂದೇ ಖ್ಯಾತಿ ಪಡೆದ ಬೆಂಗಳೂರನ್ನು ನಾಡಪ್ರಭು ಕೆಂಪೇಗೌಡರು ದೂರದೃಷ್ಟಿ ಇಟ್ಟುಕೊಂಡೇ ನಿರ್ಮಿಸಿದ್ದರು. ಪರಿಣಾಮವಾಗಿ ಇಂದು ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿ ಬೆಳೆದಿದೆ. ಇಂತಹ ಬೃಹತ್ ನಗರದಲ್ಲಿ ಐಟಿ ಕಂಪನಿಗಳು ನೆಲೆಯೂರಿದ್ದರಿಂದ ಸಾಕಷ್ಟು ಜನರಿಗೆ ಕೆಲಸ ಸಿಕ್ಕಿದೆ" ಎಂದರು.
"ನಗರ ಇಷ್ಟೊಂದು ದೊಡ್ಡಮಟ್ಟದಲ್ಲಿ ಬೆಳೆಯಲು ಅನೇಕ ಮಹನೀಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಿಧಾನಸೌಧವನ್ನು ಕೆಂಗಲ್ ಹನುಮಂತಯ್ಯ ನಿರ್ಮಿಸಿದರು. ಅದೇ ರೀತಿ ಬೆಂಗಳುರು ಅಭಿವೃದ್ಧಿಯಾಗಲು ಅನೇಕ ಮುಖ್ಯಮಂತ್ರಿಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ದೇಶದಲ್ಲಿ ಕೆಂಪೇಗೌಡರಂತಹ ಧೀಮಂತರ ಅನೇಕರು ಹುಟ್ಟಿಕೊಳ್ಳಲಿ" ಎಂದು ಹೇಳಿದರು.